ಜಿಎಸ್ ಟಿ ದರ ಇಳಿಕೆ; ಇದು ಯಾರ ವಿಜಯ?
ನವೆಂಬರ್ 11, ಕೇಂದ್ರ ಸರ್ಕಾರ ಜಿ.ಎಸ್.ಟಿ ದರ ಇಳಿಸಿರುವ ಹಿಂದೆಯೇ ಕಾಂಗ್ರೆಸ್ ಮತ್ತು ಬಿ.ಜೆ.ಪಿ ಭಕ್ತರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದ ಶುರುವಾಗಿದೆ.
ಜಿಎಸ್ಟಿ : ರಾಹುಲ್ ಮೂರು ಅತ್ಯಮೂಲ್ಯ ಉಪದೇಶಗಳು
ಜಿ.ಎಸ್.ಟಿ ಇಳಿಸಲು ಕಾಂಗ್ರೆಸ್ ನ ಒತ್ತಡವೇ ಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರು ಬೀಗುತ್ತಿದ್ದರೆ. ಜನರ ಅನುಕೂಲಕ್ಕಾಗಿ ಕೇಂದ್ರ ಜಿ.ಎಸ್.ಟಿ ಇಳಿಸಿದೆಯೇ ಹೊರತು ಇದು ಕಾಂಗ್ರೆಸ್ ವಿಜಯ ಅಲ್ಲ ಎಂಬುದು ಬಿ.ಜೆ.ಪಿ ಪರ ಕಾರ್ಯಕರ್ತರ ವಾದ.
ಜಿ.ಎಸ್.ಟಿ ಕುರಿತು ಟ್ವಿಟರ್ ನಲ್ಲಿ ಭರ್ಜರಿ ವಾದ ವಿವಾದ ನಡೆಯುತ್ತಿದ್ದು, ರಾಹುಲ್ ಇಂಪ್ಯಾಕ್ಟ್ ಆನ್ ಜಿ.ಎಸ್.ಟಿ ಮತ್ತು ಜಿ.ಎಸ್.ಟಿ ಕವನ್ಸಿಲ್ ಮಿಟ್ ಹ್ಯಾಷ್ ಟ್ಯಾಗ್ ಗಳು ಟ್ರೆಂಡಿಂಗ್ ನಲ್ಲಿವೆ.
First they ignore you, then they laugh at you, then they fight you, then you win #RahulGSTimpact pic.twitter.com/Cpml1SbpKb
— Youth Congress (@IYC) 10 November 2017
ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಹಾತ್ಮಾ ಗಾಂಧಿ ಅವರ ಜನಪ್ರಿಯ ಮಾತಾದ "ಮೊದಲು ನಿನ್ನನ್ನು ಅವರು ನಿರ್ಲಕ್ಷಿಸುತ್ತಾರೆ, ನಂತರ ನಗುತ್ತಾರೆ ನಂತರ ನಿನ್ನೊಂದಿಗೆ ಜಗಳ ಮಾಡುತ್ತಾರೆ ಆನಂತರದ್ದು ನಿನ್ನ ಗೆಲುವು' ಎಂದು ಬರೆದುಕೊಂಡು ಪರೋಕ್ಷವಾಗಿ ಜಿ.ಎಸ್.ಟಿ ಇಳಿಕೆಯ ಕ್ರೆಡಿಟ್ ತನಗೇ ಸೇರಬೇಕಾದುದು ಎಂದು ಸೂಚ್ಯಗೊಳಿಸಿದೆ. ಈ ಮಾತಿಗೆ ಪುಷ್ಟಿ ಎಂಬಂತೆ ಟ್ವೀಟ್ ನಲ್ಲಿ "ರಾಹುಲ್ ಇಂಪ್ಯಾಕ್ಟ್ ಆನ್ ಜಿ.ಎಸ್.ಟಿ' ಹ್ಯಾಷ್ ಟ್ಯಾಗ್ ಸೇರಿಸಿದೆ.
ಕಾಂಗ್ರೆಸ್ ನ ಟ್ವೀಟ್ ಗೆ ಮಾಮೂಲಿನಂತೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಪರವಾದ ಪ್ರತಿಕ್ರೆಯೆಗಳು ಹೆಚ್ಚಿರುವುದು.
ಆದರೆ ಈ ಎರಡೂ ಪಕ್ಷ ವಹಿಸದೆ ಸ್ವಂತ ಯೋಚನೆಯ ಜನ ಸತ್ಯಕ್ಕೆ ಹತ್ತಿರ ಎನ್ನಬಹುದಾದ ವಾದವನ್ನು ಮುಂದಿಟ್ಟಿದ್ದಾರೆ. ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಹತ್ತಿರದಲ್ಲಿರುವ ಕಾರಣ ಕೇಂದ್ರ ಜಿ.ಎಸ್.ಟಿ ಇಳಿಸಿದೆಯೇ ವಿನಃ ಕಾಂಗ್ರೆಸ್ ನ ಒತ್ತಡವಾಗಲಿ, ಜನಕಲ್ಯಾಣದ ಘನ ಉದ್ದೇಶವಾಗಲಿ ಇದರ ಹಿಂದಿಲ್ಲ. ಜಿ.ಎಸ್.ಟಿ ಇಳಿಕೆ ಹಿಂದೆ ಇರುವುದು ಮತ ಭೇಟೆ ರಾಜಕಾರಣವಷ್ಟೆ ಎಂದಿದ್ದಾರೆ.
ಏನೇ ಆಗಲಿ ಜಿ.ಎಸ್.ಟಿ ದರ ಇಳಿಸಿರುವುದು ಸಾಮಾನ್ಯ ಜನರ ಮುಖದಲ್ಲಿ ಸಣ್ಣ ನಗುವನ್ನಂತೂ ಅರಳಿಸಿದೆ. ಆದರೆ ಚುನಾವಣೆ ಮುಗಿದ ನಂತರ ಮತ್ತೆ ಜಿ.ಎಸ್.ಟಿ ಏರಿಕೆಯಾಗದಿದ್ದರಷ್ಟೆ ಸಾಕು.