ದೀಪಾವಳಿ ಹೊತ್ತಿಗೆ ಇಂಧನ ಬೆಲೆಯಲ್ಲಿ ಇಳಿಕೆ: ಕೇಂದ್ರ ಆಶ್ವಾಸನೆ
ದೀಪಾವಳಿ ವೇಳೆಗೆ ತೈಲ ಬೆಲೆಗಳಲ್ಲಿ ಇಳಿಕೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ.
ಅಮೃತಸರ, ಸೆಪ್ಟೆಂಬರ್ 19: ಈ ವರ್ಷದ ದೀಪಾವಳಿ ಹೊತ್ತಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಇಳಿಯಲಿವೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಇಂಧನವನ್ನು ಜಿಎಸ್ ಟಿ ವ್ಯಾಪ್ತಿಯೊಳಗೆ ತರಬೇಕೆಂಬ ಆಗ್ರಹವಿದೆ. ಅದು ಮುಂದೆ ತೀರ್ಮಾನವಾಗುತ್ತದೆ. ಆದರೆ, ಮುಂದಿನ ತಿಂಗಳ ದೀಪಾವಳಿ ಹೊತ್ತಿಗೆ ಇಂಧನ ಬೆಲೆಗಳು ಖಂಡಿತವಾಗಿಯೂ ಇಳಿಯಲಿವೆ ಎಂದು ತಿಳಿಸಿದರು.
ಕಾರ್, ಬೈಕ್ ಮಾಲೀಕರು ಉಪವಾಸ ಬಿದ್ದಿದ್ದಾರಾ?: ಕೇಂದ್ರ ಸಚಿವ
ಈ ಬಗ್ಗೆ ಮತ್ತಷ್ಟು ಕೆದಕಿದ ಮಾಧ್ಯಮಗಳಿಗೆ ಉತ್ತರ ನೀಡಿದ ಅವರು, ''ಗ್ರಾಹಕರು ಖುಷಿಯಾಗುವಷ್ಟರ ಮಟ್ಟಿಗೆ ಇಂಧನ ಬೆಲೆಗಳು ಕೆಳಗಿಳಿಯಲಿವೆ ಎಂದಷ್ಟೇ ಹೇಳಬಲ್ಲೆ'' ಎಂದು ಉತ್ತರಿಸಿದರು.
ಜಿಎಸ್ ಟಿ ಅಡಿಯಲ್ಲಿ ಪೆಟ್ರೋಲ್ ಬಂದರೆ ಲೀಟರ್ ಗೆ ಬರೀ 38 ರುಪಾಯಿ
ಇಂಧನ ಬೆಲೆಗಳಲ್ಲಿನ ಇಳಿಕೆಯ ಪ್ರಮುಖ ಕಾರಣವನ್ನು ತೆರೆದಿಟ್ಟ ಅವರು, ''ಅಮೆರಿಕದಲ್ಲಿ ಇತ್ತೀಚೆಗೆ ಉಂಟಾದ ಚಂಡಮಾರುತದ ಪ್ರಭಾವದಿಂದಾಗಿ ಅಲ್ಲಿನ ಇಂಧನ ಮಾರುಕಟ್ಟೆ ಕುಸಿದಿದ್ದು ಬೆಲೆಯೂ ಕುಸಿದಿದೆ. ಇದರ ಪರಿಣಾಮ ಭಾರತದ ಮೇಲೆ ಆಗಲಿದೆ. ಇಂಧನ ಬೆಲೆಗಳು ಇಲ್ಲೂ ಕುಸಿಯಲಿವೆ'' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಲವಾರು ದಿನಗಳಿಂದ ಟೀಕೆ
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ನಿರಂತರವಾಗಿ ಕುಸಿಯುತ್ತಿದ್ದರೂ, ಕೇಂದ್ರ ಸರ್ಕಾರ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಇಳಿಸುತ್ತಿಲ್ಲ ಎಂಬ ಟೀಕೆ ಹಲವಾರು ದಿನಗಳಿಂದ ಕೇಳುತ್ತಲೇ ಇತ್ತು.
ಸಗಟು ಮಾರಾಟ ದರ ಇಳಿಸಿಲ್ಲ
ಈ ಹಿಂದೆ, ಯುಪಿಎ ಸರ್ಕಾರ ಈ ರೀತಿ ನಡೆದುಕೊಂಡಿದ್ದಾಗ, ಆಗ ದೇಶಾದ್ಯಂತ ಬೀದಿಗಿಳಿದು ಹೋರಾಟ ಮಾಡಿದ್ದ ಬಿಜೆಪಿಯು, ಈಗ ಕೇಂದ್ರದಲ್ಲಿ ತನ್ನದೇ ಸರ್ಕಾರ ಹೊಂದಿದ್ದಾಗಲೂ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಇಂಧನ ಸಗಟು ಮಾರಾಟದ ಬೆಲೆ ಇಳಿಸಿಲ್ಲವೆಂದು ವಿಪಕ್ಷಗಳು ಟೀಕಿಸಲು ಆರಂಭಿಸಿದ್ದವು.
ಸಾಮಾಜಿಕ ಜಾಲತಾಣಗಳಲ್ಲೂ ಟೀಕೆ
ಇತ್ತ, ಕೆಲ ಪ್ರಜ್ಞಾವಂತ ನಾಗರಿಕರೂ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯನ್ನು ಇದೇ ಕಾರಣಕ್ಕಾಗಿ ಟೀಕಿಸಲು ಆರಂಭಿಸಿದ್ದರು. ಫೇಸ್ ಬುಕ್ ಹಾಗೂ ವಾಟ್ಸಾಪ್ ಗಳಲ್ಲಿ ಈ ಬಗ್ಗೆ ಒಂದು ರೀತಿಯ ಟೀಕಾಸ್ತ್ರಗಳು ಹರಿದಾಡುತ್ತಿದ್ದವು.
ದೀಪಾವಳಿವರೆಗೆ ಕಾಯಬೇಕು!
ಇದೀಗ, ಧರ್ಮೇಂದ್ರ ಪ್ರಧಾನ್ ಅವರು ಈ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಆದರೆ, ಇಂಧನ ಬೆಲೆಗಳು ಎಷ್ಟು ಕಡಿಮೆಯಾಗುತ್ತದೆ ಎಂಬುದನ್ನು ಅವರು ಹೇಳಿಲ್ಲ. ಸಚಿವರು ಹೇಳಿರುವ ಮಾತು ಎಷ್ಟರ ಮಟ್ಟಿಗೆ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತದೆ ಎಂಬುದನ್ನು ನೋಡಬೇಕೆಂದರೆ, ದೀಪಾವಳಿವರೆಗೂ ನಾವೆಲ್ಲರೂ ಕಾಯಬೇಕಿದೆ.