ತೆಲುಗು ದೇಶಂ ಪಕ್ಷದ ಮಾಜಿ ಸಚಿವ ಅಯ್ಯಣ್ಣ ಪತ್ರುಡು ಬಂಧನ
ಅಮರಾವತಿ, ನವೆಂಬರ್ 3: ಆಂಧ್ರಪ್ರದೇಶದ ಮಾಜಿ ಸಚಿವ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಅಯ್ಯಣ್ಣ ಪತ್ರುಡು ಮತ್ತು ಅವರ ಪುತ್ರ ರಾಜೇಶ್ ಅವರ ಮನೆಯಲ್ಲಿ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಗುರುವಾರ ಮುಂಜಾನೆ ಅವರ ನಿವಾಸದಿಂದ ಬಂಧಿಸಲಾಗಿದೆ.
ಇಬ್ಬರು ನಾಯಕರನ್ನು ಅಪರಾಧ ತನಿಖಾ ವಿಭಾಗ (ಸಿಐಡಿ) ಪೊಲೀಸರು ಇಂದು ಮುಂಜಾನೆ ಬಂಧಿಸಿಕೊಂಡು ಏಲೂರು ಜಿಲ್ಲೆಗೆ ತೆರಳಿದ್ದಾರೆ. ಮನೆಯ ಗೋಡೆ ಕೆಡವುವ ವೇಳೆ ಹೈಕೋರ್ಟ್ಗೆ ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ನೀರಾವರಿ ಅಧಿಕಾರಿಗಳ ದೂರಿನ ಮೇರೆಗೆ ಸಿಐಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು ಎಂದು ವರದಿಯಾಗಿದೆ. ಇವರಿಬ್ಬರು ರಾವಣಪಲ್ಲಿ ನೀರಾವರಿ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ರಾಯಲಸೀಮಾ, ಕರಾವಳಿ ಆಂಧ್ರಪ್ರದೇಶದಲ್ಲಿ ಭಾರೀ ಮಳೆ
ಈ ಬಗ್ಗೆ ಅಯ್ಯಣ್ಣ ಪತ್ರುಡು ಮತ್ತು ರಾಜೇಶ್ ಅವರನ್ನು ಸರ್ಕಾರ ಪೂರ್ವ ಮಾಹಿತಿ ಇಲ್ಲದೆ ಬಂಧಿಸಿದೆ ಎಂದು ಅಯ್ಯಣ್ಣ ಅವರ ಪತ್ನಿ ಪದ್ಮಾವತಿ ಟೀಕಿಸಿದ್ದು, ಅಯ್ಯಣ್ಣ ಪಾತ್ರುಡು ಅವರ ಜೀವನದ ಸಂಪೂರ್ಣ ಹೊಣೆಯನ್ನು ಸರಕಾರವೇ ಹೊರಬೇಕು ಎಂದು ಆಗ್ರಹಿಸಿದ್ದಾರೆ.
ಅಯ್ಯಣ್ಣ ಪತ್ರುಡು ಬಂಧನ ವಿರೋಧಿಸಿ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ನರಸೀಪಟ್ಟಣ ಬಂದ್ಗೆ ಕರೆ ನೀಡಿದ್ದಾರೆ. ಬಂಧಿತ ಟಿಡಿಪಿ ನಾಯಕ ಮತ್ತು ಅವರ ಪುತ್ರನನ್ನು ನಂತರ ಏಲೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಅಯ್ಯಣ್ಣ ಅವರ ಬಂಧನದ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಅವರ ಬಂಧನವನ್ನು ಖಂಡಿಸಿದ್ದಾರೆ. ಇದು ಹಿಂದುಳಿದ ವರ್ಗಗಳ ನಾಯಕರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಕರೆದಿದ್ದಾರೆ.
ರಾಯಚೂರು: ಶತಮಾನ ಪೂರೈಸಿದ ಆಂಧ್ರ ಗಡಿಭಾಗದ ಕನ್ನಡ ಮಾಧ್ಯಮ ಶಾಲೆ
ಮಾಜಿ ಸಚಿವ ಮತ್ತು ಹಿಂದುಳಿದ ವರ್ಗದ ನಾಯಕ ಅಯ್ಯಣ್ಣ ಪತ್ರುಡಿ ಅವರನ್ನು ನರಸೀಪಟ್ಟಣದಲ್ಲಿ ಗೋಡೆಗಳನ್ನು ಹಾರಿ ಬಾಗಿಲು ಮುರಿದು ಬಂಧಿಸಿರುವುದು ದಿಗ್ಭ್ರಮೆಯನ್ನುಂಟು ಮಾಡಿದೆ ಎಂದು ಎನ್ ಚಂದ್ರಬಾಬು ನಾಯ್ಡು ತೆಲುಗಿನಲ್ಲಿ ಟ್ವೀಟ್ ಮಾಡಿದ್ದಾರೆ. ಜಗನ್ ಮೋಹನ್ ರೆಡ್ಡಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಯ್ಯಣ್ಣನವರ ಕುಟುಂಬವನ್ನು ಬೆನ್ನಟ್ಟುತ್ತಿದೆ ಎಂದು ಆರೋಪಿಸಿದ್ದಾರೆ.
ಜಗನ್ ಮೋಹನ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಯ್ಯಣ್ಣನವರ ಕುಟುಂಬದ ಮೇಲೆ ಈಗಾಗಲೇ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಚಿಂತಕಾಯಲ ವಿಜಯ್ ಪ್ರಕರಣದಲ್ಲಿ ಸಿಐಡಿ ಕಾರ್ಯವೈಖರಿ ತಪ್ಪಿದ್ದರೂ ಪೊಲೀಸರು ಬದಲಾಗಿಲ್ಲ ಎಂದು ಎನ್ ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಎಂದಾದರೂ ಪೊಲೀಸರು ಕಳ್ಳರಂತೆ ಮನೆಗಳ ಮೇಲೆ ದಾಳಿ ನಡೆಸಿ ಬಂಧಿಸುವ ಸನ್ನಿವೇಶಗಳು ನಡೆದಿವೆಯೇ? ಉತ್ತರಾಂಧ್ರವನ್ನು ವೈಸಿಪಿ ಶೋಷಣೆ ಮಾಡುತ್ತಿರುವುದನ್ನು ಪ್ರಶ್ನಿಸುತ್ತಿರುವ ಹಿಂದುಳಿದ ನಾಯಕರ ಧ್ವನಿಯನ್ನು ಹತ್ತಿಕ್ಕಲು ಅಯ್ಯಣ್ಣ ಬಂಧನವಾಗಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.