ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಬಿಜೆಪಿ ಮಾಜಿ ಸಂಸದರ ಪುತ್ರ ಸಾವು!
ಲಕ್ನೋ ಅಕ್ಟೋಬರ್ 31: ಲಕ್ನೋದ ಎಸ್ಜಿಪಿಜಿಐ ಆಸ್ಪತ್ರೆಯ ತುರ್ತು ವಾರ್ಡ್ನಲ್ಲಿ ಹಾಸಿಗೆಗಳ ಕೊರತೆ ಹಾಗೂ ವೈದ್ಯರ ನಿರ್ಲಕ್ಷ್ಯದಿಂದಾಗಿ ಬಿಜೆಪಿಯ ಮಾಜಿ ಸಂಸದರೊಬ್ಬರು ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ. ಸರ್ಕಾರ ವೈದ್ಯರನ್ನು ಅಮಾನತುಗೊಳಿಸುವವರೆಗೆ ಮತ್ತು ಮುಂದಿನ ಕ್ರಮದ ಭರವಸೆ ನೀಡುವವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂದು ತಂದೆ ಮಗನ ಮೃತದೇಹದೊಂದಿಗೆ ವಾರ್ಡ್ ಮುಂದೆ ಪ್ರತಿಭಟನೆ ಮಾಡಿದರು.
ಬಿಜೆಪಿಯ ಮಾಜಿ ಸಂಸದ ಭೈರೋನ್ ಪ್ರಸಾದ್ ಮಿಶ್ರಾ ಅವರ ಪುತ್ರ, 41 ವರ್ಷದ ಪ್ರಕಾಶ್ ಮಿಶ್ರಾ ಅವರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ನಿನ್ನೆ ರಾತ್ರಿ 11 ಗಂಟೆಗೆ ಎಸ್ಜಿಪಿಜಿಐ ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತು. ಯಾವುದೇ ಹಾಸಿಗೆ ಲಭ್ಯವಿಲ್ಲ ಮತ್ತು ತುರ್ತು ವೈದ್ಯಕೀಯ ಅಧಿಕಾರಿ ಸಹಾಯಕ್ಕೆ ಮುಂದಾಗಲಿಲ್ಲ ಎಂದು ಮಿಶ್ರಾ ಹೇಳಿಕೊಂಡಿದ್ದಾರೆ. ಅವರ ಮಗ ಸ್ವಲ್ಪ ಸಮಯದ ನಂತರ ನಿಧನರಾದರು ಎಂದು ಮಾಜಿ ಸಂಸದರು ದೂರಿದ್ದಾರೆ.

ಹೀಗಾಗಿ ಮಿಶ್ರಾ ತಮ್ಮ ಮಗನ ಶವದೊಂದಿಗೆ ತುರ್ತು ವಾರ್ಡ್ನ ಹೊರಗೆ ಪ್ರತಿಭಟನೆಗೆ ಕುಳಿತರು. "ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ನನ್ನ ನಂತರ ಬಂದ ಸುಮಾರು 20-25 ಜನರು ಚಿಕಿತ್ಸೆ ಪಡೆದರು. ಆದನೆ ನನಗೆ ಸಾಲಿನಲ್ಲಿ ನಿಲ್ಲಲು ಹೇಳಿದರು. ನಾನು ಪ್ರತಿಭಟನೆಗೆ ಕುಳಿತಾಗ ಎಲ್ಲರೂ ಅವನ ಬಗ್ಗೆ ದೂರು ನೀಡುತ್ತಿದ್ದರು. ಅವನಿಗೆ ಶಿಕ್ಷೆಯಾಗಬೇಕು." ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಆಸ್ಪತ್ರೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮದ ಭರವಸೆ ನೀಡಿದ್ದಾರೆ ಮತ್ತು ಪ್ರಕರಣದ ತನಿಖೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದಾರೆ. ಆ ಬಳಿಕವಷ್ಟೇ ಮಿಶ್ರಾ ಅವರು ಮಗನ ಶವದೊಂದಿಗೆ ಮನೆಗೆ ಮರಳಿದ್ದಾರೆ.
"ಅವರನ್ನು ಐಸಿಯುಗೆ (ಇಂಟೆನ್ಸಿವ್ ಕೇರ್ ಯುನಿಟ್) ಕರೆದೊಯ್ಯಲು ವೈದ್ಯರು ಹೇಳಿದರು. ಆದರೆ ಹಾಸಿಗೆಗಳು ಲಭ್ಯವಿಲ್ಲ. ನಾವು ಈ ಬಗ್ಗೆ ಪರಶೀಲನೆಗೆ ಸಮಿತಿಯನ್ನು ರಚಿಸಿದ್ದೇವೆ. ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ... ಸದ್ಯ ವೈದ್ಯರನ್ನು ಅಮಾನತುಗೊಳಿಸಲಾಗಿದೆ,'' ಎಂದು ಆಸ್ಪತ್ರೆ ಮುಖ್ಯಸ್ಥ ಡಾ.ಆರ್.ಕೆ.ಧಿಮಾನ್ ತಿಳಿಸಿದ್ದಾರೆ.
ಘಟನೆಯ ಕುರಿತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಇದು ಆಸ್ಪತ್ರೆಯ ತಪ್ಪಲ್ಲ. ಆದರೆ ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಪ್ಪು. ಆಸ್ಪತ್ರೆಗೆ ಏಕೆ ಬಜೆಟ್ ನೀಡುತ್ತಿಲ್ಲ?" ಅವರು ಹೇಳಿದರು.
ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಮಿಶ್ರಾ ಅವರ ಮನೆಗೆ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮದ ಭರವಸೆ ನೀಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದ್ದು, ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುವುದು' ಎಂದರು.












Click it and Unblock the Notifications