Bhaskar Rao : ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆಪ್ ಸೇರಿದ ಮಾಜಿ IPS ಅಧಿಕಾರಿ ಭಾಸ್ಕರ್ ರಾವ್
ನವದೆಹಲಿ, ಏಪ್ರಿಲ್ 4: ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಗಡಿ ರಾಜ್ಯ ಪಂಜಾಬ್ನಲ್ಲಿ ಅಧಿಕಾರ ಹಿಡಿದ ಬಳಿಕ ಭಾರೀ ಹುಮ್ಮಸ್ಸಿನಲ್ಲಿರುವ ಆಮ್ ಆದ್ಮಿ ಪಕ್ಷ ಈಗ ಕರ್ನಾಟಕದ ಮೇಲೆ ಕಣ್ಣಿಟ್ಟಿದೆ.
ಗುಜರಾತ್, ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷ, ಮುಂಬರುವ ಈ ರಾಜ್ಯಗಳ ಚುನಾವಣೆಗಾಗಿ ಈಗಾಗಲೇ ಹಲವಾರು ನಾಯಕರ ಸಂಪರ್ಕ ಮಾಡಿದೆ.
ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಕರ್ನಾಟಕದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಎಎಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ 11 ಗಂಟೆಗೆ ದೆಹಲಿಯ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಅರವಿಂದ ಕೇಜ್ರಿವಾಲ್, ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಆಮ್ ಆದ್ಮಿ ಪಕ್ಷದ ಕರ್ನಾಟಕದ ಸಂಚಾಲಕ ಪೃಥ್ವಿ ರೆಡ್ಡಿ ಸಮ್ಮುಖದಲ್ಲಿ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಎಎಪಿಯ ದೆಹಲಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಮನೀಶ್ ಸಿಸೋಡಿಯಾ, "ಶಿಕ್ಷಣ, ಆರೋಗ್ಯ, ಉದ್ಯೋಗ, ಸಾರಿಗೆ ಇನ್ನಿತರೆ ಕ್ಷೇತ್ರದಲ್ಲಿ ದೆಹಲಿಯ ಕೇಜ್ರಿವಾಲ್ ಸರ್ಕಾರ ತಂದಿರುವ ಬದಲಾವಣೆಯನ್ನು ಭಾಸ್ಕರ್ ರಾವ್ರವರು ಗಮನಿಸುತ್ತಿದ್ದರು. ದೆಹಲಿಯಲ್ಲಾಗಿರುವ ಬದಲಾವಣೆಯು ದೇಶದೆಲ್ಲೆಡೆ ವಿಸ್ತರಿಸಬೇಕೆಂದು ಅವರು ಬಯಸಿದ್ದರು. ಆದ್ದರಿಂದಲೇ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಭಾಸ್ಕರ್ ರಾವ್ರವರು ಪೊಲೀಸ್ ಕಮಿಷನರ್ ಆಗಿದ್ದರೂ, ʻಜನಸಾಮಾನ್ಯರ ಕಮಿಷನರ್ʼ ಎಂದೇ ಖ್ಯಾತರಾಗಿದ್ದರು. ಇವರ ಸೇರ್ಪಡೆಯಿಂದ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳುವ ವಿಶ್ವಾಸವಿದೆ," ಎಂದು ಹೇಳಿದರು.
ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ಮಾತನಾಡಿ, "ಹಿಂದೊಮ್ಮೆ ದೆಹಲಿಗೆ ಬಂದಾಗ ಇಲ್ಲಿನ ಟ್ಯಾಕ್ಸಿ ಡ್ರೈವರ್ರೊಬ್ಬರು ಸರ್ಕಾರಿ ಶಾಲೆಗಳು ಭಾರೀ ಅಭಿವೃದ್ಧಿ ಹೊಂದಿವೆ ಎಂದು ಹೇಳಿದರು. ನಾನು ಶಾಲೆಗಳನ್ನು ಪರಿಶೀಲಿಸಿದೆ. ಶಾಲೆಗಳಷ್ಟೇ ಅಲ್ಲದೇ ಆರೋಗ್ಯ ಕೇಂದ್ರಗಳು ಕೂಡ ಆಧುನೀಕರಣಗೊಂಡಿರುವುದು ಕಂಡುಬಂದಿತು. ಇಲ್ಲಿನ ಸರ್ಕಾರವು ಸಾಮಾನ್ಯ ಜನರಿಗೆ ಅತ್ಯಂತ ಹತ್ತಿರವಾಗಿದೆ. ಕರ್ನಾಟಕದಲ್ಲೂ ಇದೇ ಮಾದರಿಯ ಸರ್ಕಾರ ಆಡಳಿತಕ್ಕೆ ಬರಬೇಕು. ಕರ್ನಾಟಕದ ಗ್ರಾಮ ಪಂಚಾಯತಿಗಳಿಂದ ವಿಧಾನಸೌಧದ ತನಕ ಎಲ್ಲವೂ ಬದಲಾಗಬೇಕಿದೆ," ಎಂದು ಹೇಳಿದರು.
"ಕರ್ನಾಟಕದ ಜನರು ಬದಲಾವಣೆ ಬಯಸುತ್ತಿದ್ದಾರೆ. ಬೆಂಗಳೂರನ್ನು ಜ್ಞಾನದ ರಾಜಧಾನಿ ಎಂದು ಕರೆಯಲಾಗುತ್ತದೆ. ಕರ್ನಾಟಕ ಹಾಗೂ ಬೆಂಗಳೂರು ಉತ್ತಮ ಆಡಳಿತವನ್ನು ಪಡೆಯಲು ಅರ್ಹವಾಗಿದೆ. ಆದರೆ ಆಡಳಿತ ನಡೆಸುವ ರಾಜಕಾರಣಿಗಳು ಸರಿಯಿಲ್ಲದ ಕಾರಣ ಕರ್ನಾಟಕದ ಜನರಿಗೆ ಉತ್ತಮ ರಸ್ತೆ, ಉತ್ತಮ ಶಾಲೆ, ಉತ್ತಮ ಆಸ್ಪತ್ರೆ ಮುಂತಾದ ಸೌಲಭ್ಯಗಳು ಸಿಗುತ್ತಿಲ್ಲ. ಆಮ್ ಆದ್ಮಿ ಪಾರ್ಟಿಯಿಂದ ಮಾತ್ರ ಕರ್ನಾಟಕದ ಬದಲಾವಣೆ ಸಾಧ್ಯ," ಎಂದು ಭಾಸ್ಕರ್ ರಾವ್ ಹೇಳಿದರು.
ಪಕ್ಷದ ಕರ್ನಾಟಕದ ಉಸ್ತುವಾರಿ ರೋಮಿ ಭಾಟಿ, ಕರ್ನಾಟಕದ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ, ಕರ್ನಾಟಕ ಎಎಪಿ ಅಧ್ಯಕ್ಷರಾದ ಪೃಥ್ವಿ ರೆಡ್ಡಿಯವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್ ದಾಸರಿ , ವಿಜಯ್ ಶಾಸ್ತ್ರಿಮಠ, ರಾಜೀವ್ ಟೋಪಣ್ಣವರ ಹಾಗೂ ರಾಜ್ಯದ ಅನೇಕ ನಾಯಕರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಭಾಸ್ಕರ್ ರಾವ್ ಹಿನ್ನೆಲೆ
1990ರಲ್ಲಿ ಭಾರತೀಯ ಪೊಲೀಸ್ ಸೇವೆಗೆ ಸೇರಿದ್ದ ಭಾಸ್ಕರ್ ರಾವ್, ಸದ್ಯ ರೈಲ್ವೆ ಪೊಲೀಸ್ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2021ರ ಸೆಪ್ಟೆಂಬರ್ನಲ್ಲಿ ಸ್ವಯಂ ನಿವೃತ್ತಿ ಬಯಸಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಸರ್ಕಾರ ಕಳೆದ ವಾರವಷ್ಟೇ ಭಾಸ್ಕರ್ ರಾವ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಇದೀಗ ಎಎಪಿಯಲ್ಲಿ ರಾಜಕೀಯ ಭವಿಷ್ಯದ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ.

ಬಿ. ಭಾಸ್ಕರ್ ರಾವ್ ಮೂಲತಃ ಬೆಂಗಳೂರಿನವರಾಗಿದ್ದು, 1990ರಲ್ಲಿ ಭಾರತೀಯ ಪೊಲೀಸ್ ಸೇವೆಗೆ ಸೇರ್ಪಡೆಯಾಗಿದ್ದರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಭಾಸ್ಕರ್ ರಾವ್ ಬೆಂಗಳೂರು ಕಮೀಷನರ್ ಅಗಿ ಒಂದು ವರ್ಷ ಸೇವೆ ಸಲ್ಲಿಸಿದ್ದು ವಿಶೇಷ.

ಕರ್ನಾಟಕ ಸಶಸ್ತ್ರ ಮೀಸಲು ಪಡೆಯ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್, 2019 ಆ.2ರಂದು ಬೆಂಗಳೂರು ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಇದರ ಜತೆಗೆ ಆಂತರಿಕ ಭದ್ರತೆ, ರೈಲ್ವೇ ಎಡಿಜಿಪಿ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. ಬೆಳಗಾವಿ ಪೊಲೀಸ್ ಕಮೀಷನರ್ ಆದ ಬಳಿಕ ಕರ್ನಾಟಕ ಮೂಲದ ಬೆಂಗಳೂರಿನ ಮೊದಲ ಕಮೀಷನರ್ ಆಗಿ ಭಾಸ್ಕರ್ ರಾವ್ ಸೇವೆ ಸಲ್ಲಿಸಿದ್ದರು.












Click it and Unblock the Notifications