ಒಂದು ದೇಶ, ಒಂದು ರೇಷನ್ ಕಾರ್ಡ್ ಮಹತ್ವದ ಘೋಷಣೆ
ನವದೆಹಲಿ, ಮೇ 14: 'ಒನ್ ನೇಷನ್, ಒನ್ ರೇಶನ್ ಕಾರ್ಡ್' ಘೋಷ ವಾಕ್ಯದಡಿ, ದೇಶದಾದ್ಯಂತ ಒಂದೇ ಪಡಿತರ ಚೀಟಿಯನ್ನು ಅನ್ನು ಜಾರಿಗೆ ಮೋದಿ ಸರ್ಕಾರವು ಕೆಲ ವರ್ಷದಿಂದ ನಡೆಸಿದ ತಯಾರಿ ಪೂರ್ಣಗೊಂಡಿದ್ದು, ಮೇ 14ರಂದು ಈ ಕುರಿತಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧಿಕೃತವಾಗಿ ಘೋಷಣೆ ಹೊರಡಿಸಿದ್ದಾರೆ.
Recommended Video
ಈ ರೇಷನ್ ಕಾರ್ಡ್ ತೋರಿಸಿ ದೇಶದ ಯಾವುದೇ ರಾಜ್ಯದಲ್ಲಾದರೂ ಪಡಿತರ ಪಡೆಯುವಂತಾಗಬೇಕು ಎಂಬ ಬೃಹತ್ ಆಲೋಚನೆ ಯೋಜನೆಯ ಹಿಂದಿದೆ. ಈಗಿರುವ ಪಡಿತರ ವ್ಯವಸ್ಥೆಯ ಪ್ರಕಾರ ಕುಟುಂಬವೊಂದು, ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣ ಬೆಳೆಸಿದರೆ ಹೊಸ ಪಡಿತರ ಚೀಟಿ ಮಾಡಿಸಿಕೊಳ್ಳಬೇಕಾಗುತ್ತದೆ ಇದು ತ್ರಾಸದಾಯಕ ವ್ಯವಸ್ಥೆ, ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ವಲಸೆ ಸಮಸ್ಯೆ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಒಂದು ದೇಶ, ಒಂದು ರೇಷನ್ ಕಾರ್ಡ್ ಮಹತ್ವ ಪಡೆದುಕೊಳ್ಳಲಿದೆ.
ಪಡಿತರ ಚೀಟಿಯಲ್ಲಿ ಹೆಸರಿದ್ದು, ಮೃತಪಟ್ಟವರು, ಮನೆ ಬಿಟ್ಟು ಹೋದವರು, ಮದುವೆಯಾಗಿ ಗಂಡನ ಮನೆಗೆ ಹೋದವರ ಹೆಸರಿನಲ್ಲಿಯೇ ಪಡಿತರ ಪೂರೈಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಕಾರ್ಡುದಾರರ ಬಯೋಮೆಟ್ರಿಕ್ ಪಡೆಯಲಾಗುತ್ತದೆ. ಆದರೆ, ಕೊರೊನಾ ಭೀತಿಯಿಂದ ಬಯೋಮೆಟ್ರಿಕ್ ಬಳಕೆ ಸ್ಥಗಿತಗೊಳಿಸಲಾಗಿದ್ದು, ಬಯೋಮೆಟ್ರಿಕ್ ಇಲ್ಲದೆಯೆ ಆಧಾರ್ ಕಾರ್ಡ್ ಜೋಡಣೆ ಮೂಲಕ ರೇಷನ್ ಕಾರ್ಡ್ ದೃಢಿಕರಿಸಿ ಪಡಿತರ ಪಡೆಯಬಹುದು.

ಈ ಯೋಜನೆಯ ಲಾಭವೇನು?
ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆ ಜಾರಿಗೊಳ್ಳುವುದರಿಂದ 23 ರಾಜ್ಯಗಳಲ್ಲಿ 63 ಕೋಟಿ ಫಲಾನುಭವಿಗಳಿಗೆ ಪಡಿತರ ಸೌಲಭ್ಯ ಸಿಗಲಿದೆ. ಮಾರ್ಚ್ 2021ರೊಳಗೆ ಶೇ 100ರಷ್ಟು ಫಲಾನುಭವಿಗಳನ್ನು ಕಾಣುವುದು ಸರ್ಕಾರ ಗುರಿ, ಉದ್ದೇಶ. ಯಾವುದೇ ಕುಟುಂಬ ಅಥವಾ ವ್ಯಕ್ತಿ ಯಾವುದೇ ಊರಿಗೆ ಹೋದರು ಅಲ್ಲಿರುವ ಪಡಿತರ ವಿತರಣೆ ಅಂಗಡಿಯಲ್ಲಿ ರೇಷನ್ ಕಾರ್ಡ್ ತೋರಿಸಿ ಆಹಾರ ಪದಾರ್ಥಗಳನ್ನು ಪಡೆಯಬಹುದಾಗಿದೆ ಎಂದರು. ಅಲ್ಲದೆ, ನಕಲಿ ಪಡಿತರ ಚೀಟಿದಾರರನ್ನು ಪಟ್ಟಿಯಿಂದ ಹೊರಹಾಕಲು ಸಹ ಇದು ನೆರವಾಗುತ್ತದೆ

12 ರಾಜ್ಯಗಳಲ್ಲಿ ಪಿಡಿಎಸ್ ಹೊಸ ಸೌಲಭ್ಯ
ಕರ್ನಾಟಕ, ಆಂಧ್ರಪ್ರದೇಶ, ಹರಿಯಾಣ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ತೆಲಂಗಾಣ ಮತ್ತು ತ್ರಿಪುರಾ ಸೇರಿ ಒಟ್ಟು ಹತ್ತು ರಾಜ್ಯಗಳು ಈಗಾಗಲೇ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಒದಗಿಸುತ್ತಿವೆ. ತಮಿಳುನಾಡು, ಪಂಜಾಬ್, ಒಡಿಶಾ ಮತ್ತು ಮಧ್ಯಪ್ರದೇಶ ಸೇರಿದಂತೆ 12 ರಾಜ್ಯಗಳಲ್ಲಿ ಪಿಡಿಎಸ್ ಸೌಲಭ್ಯವನ್ನು ಸುಲಭವಾಗಿ ಜಾರಿಗೊಳಿಸಬಹುದು. ಈ ರಾಜ್ಯಗಳಲ್ಲಿನ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿಯೂ ಪಾಯಿಂಟ್ ಆಫ್ ಸೇಲ್ (ಪಿಓಎಸ್) ಯಂತ್ರಗಳನ್ನು ಅಳವಡಿಸಲಾಗಿದೆ.

ಬಯೋಮೆಟ್ರಿಕ್ ಬಗ್ಗೆ ಸ್ಪಷ್ಟನೆ
ಬಯೋಮೆಟ್ರಿಕ್ ಬಗ್ಗೆ ಸ್ಪಷ್ಟನೆ: ಬಯೋಮೆಟ್ರಿಕ್/ ಆಧಾರ್ ಸಂಖ್ಯೆ ದೃಢೀಕರಣವಾಗಿಲ್ಲ ಎಂಬ ಕಾರಣಕ್ಕೆ NFSC ಅಡಿಯಲ್ಲಿ ಸಿಗಬೇಕಿರುವ ಆಹಾರ ಧಾನ್ಯಗಳನ್ನು ವಿತರಣೆ ಮಾಡದಿರುವುದು ಸರಿಯಲ್ಲ. ಇಂಥ ಕಠಿಣ ಪರಿಸ್ಥಿತಿಯಲ್ಲಿ ತಾಂತ್ರಿಕ ತೊಂದರೆಗಳನ್ನು ಬದಿಗೊತ್ತಿ, ಮಾನವೀಯ ದೃಷ್ಟಿಯಿಂದ ಪಡಿತರ, ಆಹಾರ ಧಾನ್ಯ ವಿತರಣೆಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಸಚಿವಾಲಯ ಸೂಚನೆ ನೀಡಿದೆ.

ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ
ಬಿಪಿಎಲ್, ಎಪಿಎಲ್ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಿಕೊಳ್ಳಲು ಇದ್ದ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ, ನವೆಂಬರ್ ತಿಂಗಳದ ಅಂತ್ಯದವರೆಗೂ ಇಂಥದ್ದೊಂದು ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಕಲ್ಪಿಸಿದೆ. ನಿಯಮಾನುಸಾರ ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡುದಾರರು ಇ-ಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳಬೇಕಿದೆ.
ಇ -ಕೆವೈಸಿ ಅಪ್ಡೇಟ್ ಮಾಡಿಸಿಕೊಂಡ ಬಳಿಕ ನೈಜ ಫಲಾನುಭವಿಗಳ ಲೆಕ್ಕ ಸಿಗಲಿದೆ. ಇಕೆವೈಸಿ ಅಪ್ಡೇಡ್ ಗಾಗಿ ಪಡಿತರ ಚೀಟಿದಾರರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಇನ್ನು ವೃದ್ಧರು, ವಿಶೇಷಚೇತನರು ಮತ್ತು ಕುಟುಂಬದವರೊಂದಿಗೆ ವಾಸವಿಲ್ಲದ ಸದಸ್ಯರು ಈ ಕೆವೈಸಿ ಅಪ್ಡೇಟ್ ಮಾಡಲು ಸಾಧ್ಯವಾಗದಿದ್ದರೆ ಆಹಾರ ನಿರೀಕ್ಷಕರ ಪರಿಶೀಲನೆಗೆ ಒಳಪಟ್ಟು ಅವರಿಗೆ ವಿನಾಯಿತಿ ಪಡೆಯಬಹುದು.












Click it and Unblock the Notifications