ವಿಶ್ಲೇಷಣೆ : ನರೇಂದ್ರ ಮೋದಿ ಅಲೆಯ ಪ್ರಭಾವ ಕಡಿಮೆಯಾಗಿದೆಯೆ?
Recommended Video

ನವದೆಹಲಿ, ಡಿಸೆಂಬರ್ 11 : ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ ಗಢ ಮತ್ತು ಮಿಜೋರಾಂನಲ್ಲಿ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಮೇಲೆ ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ.
ದೇಶದ 22 ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ್ದ ಭಾರತೀಯ ಜನತಾ ಪಕ್ಷ ಅವುಗಳನ್ನು ಮೂರು ರಾಜ್ಯಗಳನ್ನು ಕಳೆದುಕೊಂಡಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಮತ್ತು ನಂತರ ಹಲವಾರು ರಾಜ್ಯಗಳಲ್ಲಿ ಇದ್ದ ನರೇಂದ್ರ ಮೋದಿ ಹವಾ ಕಡಿಮೆಯಾಗಿದೆಯೆ ಅಥವಾ ನರೇಂದ್ರ ಮೋದಿಯವರ ಜನಪ್ರಿಯತೆ ಕುಂದುತ್ತಿದೆಯಾ?
ಈ ಚುನಾವಣೆ ಫಲಿತಾಂಶದಿಂದ ಕಂಡುಬಂದ ಒಂದು ಸತ್ಯವೇನೆಂದರೆ, ತೆಲಂಗಾಣವೊಂದನ್ನು ಹೊರತುಪಡಿಸಿದರೆ ಉಳಿದೆಲ್ಲ ರಾಜ್ಯಗಳಲ್ಲಿ ನರೇಂದ್ರ ಮೋದಿ ವಿರೋಧಿ ಅಲೆಯಲ್ಲ, ರಾಜ್ಯದ ಆಡಳಿತ ವಿರೋಧಿ ಅಲೆ. ಈ ಆಡಳಿತ ವಿರೋಧಿ ಅಲೆಯಿಂದಾಗಿಯೇ ಮಿಜೋರಾಂನಲ್ಲಿ ಕಾಂಗ್ರೆಸ್ ಗದ್ದುಗೆಯನ್ನು ಕಳೆದುಕೊಂಡಿದೆ.
ದೇಶದಲ್ಲಿ ನರೇಂದ್ರ ಮೋದಿಯವರು ಇನ್ನೂ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ ಎಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ, ವಿಧಾನಸಭೆಯಾಗಲಿ ಲೋಕಸಭೆಯಾಗಲಿ ಅವರೊಬ್ಬರನ್ನೇ ನಂಬಿಕೊಂಡು ಎದುರಿಸುವುದು ಮತ್ತು ಗೆಲ್ಲುವುದು ಸಾಧ್ಯವಿಲ್ಲ ಎಂಬ ಸತ್ಯವನ್ನು, ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗುವುದರೊಳಗೆ ಭಾರತೀಯ ಜನತಾ ಪಕ್ಷ ಕಂಡುಕೊಳ್ಳುವುದೊಳಿತು.

ಮುಳುವಾದ ಬಿಜೆಪಿಯ ಅತಿಯಾದ ಆತ್ಮವಿಶ್ವಾಸ
ಮೂರು ರಾಜ್ಯಗಳಲ್ಲಿ ಮೋದಿ ಅಲೆ ಅಷ್ಟಾಗಿ ಕೆಲಸ ಮಾಡಿಲ್ಲ ಎನ್ನುವುದು ಒಂದೆಡೆಯಾದರೆ, ಮೂರೂ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಅತಿಯಾದ ಆತ್ಮವಿಶ್ವಾಸವೇ ಮುಳುವಾಗಿದೆ. ರಾಜಸ್ಥಾನದಲ್ಲಿ ವಸುಂಧರಾ ರಾಜೇ ವಿರುದ್ಧ ಅವರ ಪಕ್ಷದವರೇ ತಿರುಗಿಬಿದ್ದಿದ್ದರು, ರಾಜ್ಯದಲ್ಲಿ ಅವರು ಜನಪ್ರಿಯತೆಯನ್ನೂ ಕಳೆದುಕೊಂಡಿದ್ದರು. ಇನ್ನು ಛತ್ತೀಸ್ ಗಢ ಮತ್ತು ಮಧ್ಯ ಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ರಾಜ್ಯಭಾರ ಮಾಡಿದ್ದ ರಮಣ ಸಿಂಗ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಬಾರಿ ಕೂಡ ನಿರಾಯಾಸವಾಗಿ ಗೆಲ್ಲುತ್ತೇವೆ ಎಂದು ಅಂದುಕೊಂಡಿದ್ದೇ ಅವರಿಗೆ ಹೊಡೆತ ಬೀಳಲು ಕಾರಣವಾಗಿದೆ.

ಮಧ್ಯ ಪ್ರದೇಶದಲ್ಲಿ ನೆಕ್-ಟು-ನೆಕ್ ಫೈಟ್
ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಛತ್ತೀಸ್ ಗಢವೊಂದನ್ನು ಹೊರತುಪಡಿಸಿದರೆ, ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಭಾರತೀಯ ಜನತಾ ಪಕ್ಷ ಅತ್ಯಂತ ಹೀನಾಯವಾಗೇನೂ ಸೋತಿಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್ಸಿಗಿಂತ ಕೇವಲ ಕೆಲವೇ ಸ್ಥಾನಗಳಿಂದ ಕಡಿಮೆಯಿದ್ದರೆ, ಮಧ್ಯಪ್ರದೇಶದಲ್ಲಿ (ಇನ್ನೂ ಅಂತಿಮ ಫಲಿತಾಂಶ ಬಂದಿಲ್ಲ) ನೆಕ್-ಟು-ನೆಕ್ ಅನ್ನುವ ಹಾಗೆ ಫೈಟ್ ನೀಡಿದೆ ಬಿಜೆಪಿ. ಆದರೆ, ಬಿಎಸ್ಪಿ ಮತ್ತು ಎಸ್ಪಿಯಿಂದಾಗಿ ಬಿಜೆಪಿಗಿಂತ ಕಾಂಗ್ರೆಸ್ಸಿನ ತೂಕವೇ ಸ್ವಲ್ಪ ಜಾಸ್ತಿಯಿದೆ. ಈ ಎರಡು ರಾಜ್ಯಗಳಲ್ಲಿ ನರೇಂದ್ರ ಮೋದಿ ಅಲೆಯೇನಾದರೂ ಇಲ್ಲದೇ ಹೋಗಿದ್ದರೆ ಅಥವಾ ಇನ್ನೂ ಕಡಿಮೆಯಾಗಿದ್ದರೆ ಅಥವಾ ಹೆಚ್ಚು ಪ್ರಚಾರವನ್ನೇ ಮಾಡಿದ್ದರೆ, ಬಿಜೆಪಿ ಹೀನಾಯ ಸೋಲು ಅನುಭವಿಸುತ್ತಿತ್ತು.

ಮೋದಿ ಅಲೆಯಿಂದ ಬಿಜೆಪಿ ಹೆಚ್ಚು ಸೀಟ್ ಗೆದ್ದಿತ್ತು
ಕರ್ನಾಟಕದಲ್ಲಿ ಕೂಡ ಹೀಗೇ ಆಗಿತ್ತು. ಎಂಬತ್ತಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೇ ನಂಬಿಕೆ ಇರಲಿಲ್ಲ. ಅಲ್ಲದೆ, ಯಡಿಯೂರಪ್ಪನವರು ಹೆಚ್ಚೂಕಡಿಮೆ ಏಕಾಂಗಿಯಾಗಿಯೇ ರಾಜ್ಯದ ಉದ್ದಗಲಕ್ಕೂ ಸಂಚರಿಸಿದ್ದರು. ಇದರಿಂದ ಭಾರೀ ಮಟ್ಟದಲ್ಲಿ ಅಂಕಿಸಂಖ್ಯೆ ಬದಲಾಗುವ ಸಾಧ್ಯತೆ ಇದ್ದಿದ್ದಿಲ್ಲ. ಆದರೆ, ಕಡೆ ಘಳಿಗೆಯಲ್ಲಿ ಬಿರುಗಾಳಿಯಂದೆ ಬಿಡುವಿಲ್ಲದೆ ನರೇಂದ್ರ ಮೋದಿಯವರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದರಿಂದ ಬಿಜೆಪಿಯ ನಂಬರ್ ಏರುತ್ತ ಹೋಗಿ ಕಡೆಗೆ 104ಕ್ಕೆ ಬಂದು ನಿಂತಿತು. ನರೇಂದ್ರ ಮೋದಿ ಅಲೆ ಇನ್ನೂ ಕಡಿಮೆಯಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾದರೆ, ಮೋದಿ ಅಲೆಯನ್ನೇ ನಂಬಿಕೊಂಡರೆ ಏನಾಗುತ್ತದೆಂಬುದಕ್ಕೆ 5 ರಾಜ್ಯಗಳ ಚುನಾವಣೆ ಸಾಕ್ಷಿಯಾಗಿದೆ.

ರಾಹುಲ್ ಅವರು ಮೋದಿಗಿಂತ ಜನಪ್ರಿಯರಾ?
ರಾಹುಲ್ ಗಾಂಧಿ ಅವರು ತಮ್ಮ ಜನಪ್ರಿಯತೆಯ ಕೋಶಂಟ್ ಅನ್ನು ಎಷ್ಟೇ ಹೆಚ್ಚಿಸಿಕೊಂಡಿದ್ದರೂ ನರೇಂದ್ರ ಮೋದಿಯವರನ್ನು ಸರಿಗಟ್ಟಲು ಸಾಧ್ಯವಾಗಿಲ್ಲ. ಇದನ್ನು ಇತ್ತೀಚೆಗೆ ನಡೆಸಿರುವ ಹಲವಾರು ಸಮೀಕ್ಷೆಗಳೇ ಸಾಬೀತುಪಡಿಸಿವೆ. ರಾಹುಲ್ ಗಾಂಧಿ ಅಷ್ಟು ಜನಪ್ರಿಯತೆ ಗಳಿಸಿದ್ದರೆ ಮಿಜೋರಾಂನಲ್ಲೂ ಗೆಲ್ಲಬೇಕಾಗಿತ್ತಲ್ಲ? ಯಾಕೆ ಗೆಲ್ಲಲಿಲ್ಲ? ಈ ಅಲೆಗಳ ಮೇಲೆ ತೇಲುತ್ತ ಈ ಸೋಲು ಗೆಲುವುಗಳ ಪರಾಮರ್ಶೆ ಮಾಡುವುದು ಮತ್ತು ಕಾರಣಗಳನ್ನು ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಈ ಅಲೆಗಿಂತ ಪ್ರಮುಖವಾದ ಇತರ ಸಂಗತಿಗಳೇ ಸೋಲುಗೆಲುವಿಗೆ ಕಾರಣವಾಗಿರುತ್ತವೆ. ಅವನ್ನು ಅರಿತುಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿಗೆ ಇದು ಸರಿಯಾದ ಸಮಯ.












Click it and Unblock the Notifications