15 ವರ್ಷದ ಬಳಿಕ ಛತ್ತೀಸ್ ಗಢದಲ್ಲಿ ಮುಗ್ಗರಿಸಿದ ಬಿಜೆಪಿ: ಸೋಲಿಗೆ 5 ಕಾರಣಗಳು
ರಾಯ್ಪುರ, ಡಿಸೆಂಬರ್ 11: ಛತ್ತೀಸ್ ಗಢದಲ್ಲಿ ಆಡಳಿತಾರೂಢ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಸಮಬಲದ ಪೈಪೋಟಿ ನಿರೀಕ್ಷಿಸಲಾಗಿದ್ದ ರಾಜ್ಯದಲ್ಲಿ ಊಹೆಗಳನ್ನು ತಲೆಕೆಳಗಾಗುವಂತೆ ಮಾಡಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದಿದೆ.
90 ಸೀಟುಗಳ ವಿಧಾನಸಭೆಯಲ್ಲಿ ಸುಮಾರು 63 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದರೆ, ಬಿಜೆಪಿ ಕೇವಲ 18 ಸೀಟುಗಳನ್ನಷ್ಟೇ ಗಳಿಸುವ ಮೂಲಕ ಮುಜುಗರಕ್ಕೆ ಒಳಗಾಗಿದೆ.
ಸರ್ಕಾರ ರಚನೆಗೆ ಇಲ್ಲಿ 45 ಸೀಟುಗಳು ಸಾಕು. ಆದರೆ, ಕಾಂಗ್ರೆಸ್ 60ಕ್ಕೂ ಅಧಿಕ ಸೀಟುಗಳಲ್ಲಿ ಗೆದ್ದಿರುವುದರಿಂದ ಸರ್ಕಾರ ರಚನೆಯ ವಿಚಾರದಲ್ಲಿ ಅದಕ್ಕೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ.
ಸತತ ಮೂರು ಬಾರಿ ಸೋಲು ಅನುಭವಿಸಿದ್ದ ಕಾಂಗ್ರೆಸ್ಗೆ ಇಲ್ಲಿ ಗೆಲುವು ಮಹತ್ವದ್ದೆನಿಸಿದೆ.
ಪಂಚ ರಾಜ್ಯ ವಿಧಾನಸಭಾ ಚುನಾವಣೆಯ ಸಮಗ್ರ ಫಲಿತಾಂಶ
ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಸರ್ಕಾರದ ಕೆಲವು ಲೋಪಗಳು ನೆರವಾಗಿವೆ. ನಕ್ಸಲ್ ಸಮಸ್ಯೆ, ರೈತರನ್ನು ಸಮರ್ಪಕವಾಗಿ ತಲುಪದೆಯೇ ಇರುವುದು ಬಿಜೆಪಿ ಸೋಲಿಗೆ ಕಾರಣವಾಗಿವೆ. ಅಲ್ಲದೆ, ಕಾಂಗ್ರೆಸ್ನಿಂದ ಬಂಡಾಯವಾಗಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಮೈತ್ರಿಕೂಟ ಹೆಚ್ಚು ಸ್ಥಾನಗಳಲ್ಲಿ ಗೆಲ್ಲದಿದ್ದರೂ ಬಿಜೆಪಿ ಹೊಡೆತ ನೀಡಿದೆ ಎಂದು ವಿಶ್ಲೇಷಿಸಲಾಗಿದೆ.
ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಗೆಲ್ಲಲು ಮತ್ತು ಬಿಜೆಪಿ ಸೋಲಲು ಕೆಲವು ಕಾರಣಗಳು ಇಲ್ಲಿವೆ...
ಆಡಳಿತ ವಿರೋಧಿ ಅಲೆ
ಹದಿನೈದು ವರ್ಷ ನಿರಂತರವಾಗಿ ಬಿಜೆಪಿ ಛತ್ತೀಸ್ ಗಢದಲ್ಲಿ ಅಧಿಕಾರದಲ್ಲಿತ್ತು. ಸಾಮಾನ್ಯವಾಗಿ ಒಂದೇ ಪಕ್ಷ ಎರಡು ಮೂರು ಅವಧಿಗಿಂತ ಸತತವಾಗಿ ಅಧಿಕಾರದಲ್ಲಿ ಇರುವ ದೃಷ್ಟಾಂತಗಳು ಕಡಿಮೆ. ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದ ಸರ್ಕಾರ ಕೂಡ ಮೂರು ವರ್ಷದಿಂದ ಆಡಳಿತ ನಡೆಸುತ್ತಿದ್ದರಿಂದ ಅದರ ವರ್ಚಸ್ಸು ಸಹಜವಾಗಿಯೇ ಕುಗ್ಗಿತ್ತು. ಅಲ್ಲದೆ, ರಮಣ್ ಸಿಂಗ್ ಕೆಲವು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರೂ, ವೈಯಕ್ತಿಕವಾಗಿ ಅವರು ಜನಪ್ರಿಯ ನಾಯಕರಲ್ಲ. ವಿವಿಧ ಸಮಸ್ಯೆಗಳಿಂದಾಗಿ ಜನರು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದರು.
ಪಂಚರಾಜ್ಯ ಫಲಿತಾಂಶ: ಬಿಜೆಪಿ ಧೂಳಿಪಟವಾಗೋಕೆ 5 ಕಾರಣ
ಎಚ್ಚೆತ್ತ ಕಾಂಗ್ರೆಸ್
ಮೂರು ಅವಧಿಗಳಿಂದ ವಿರೋಧ ಪಕ್ಷದ ಸ್ಥಾನದಲ್ಲಿಯೇ ಇದ್ದ ಕಾಂಗ್ರೆಸ್, ಕೊನೆಯ ಕ್ಷಣದಲ್ಲಿ ಆಡಳಿತ ವಿರೋಧಿ ಅಲೆಯನ್ನು ಗ್ರಹಿಸಿ ಅದರ ಲಾಭವನ್ನು ಪಡೆದುಕೊಳ್ಳಲು ಮುಂದಾಯಿತು. ಭೂಪೇಶ್ ಬಾಘೇಲ್ 'ವಿಕಾಸ್ ಕಿ ಖೋಜ್' ಟ್ವಿಟ್ಟರ್ ಅಭಿಯಾನದ ಮೂಲಕ ರಮಣ್ ಸಿಂಗ್ ಸರ್ಕಾರದ ವಿರುದ್ಧ ಜನರಲ್ಲಿ ಅಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಯಿತು.
ಪ್ರಾದೇಶಿಕ ಪಕ್ಷಗಳಿಗೆ, ತೃತೀಯ ರಂಗ ರಚನೆಗೆ ವೇದಿಕೆ ಸಿದ್ಧ ಮಾಡಿಕೊಟ್ಟ ಫಲಿತಾಂಶ
ಅಜಿತ್ ಜೋಗಿ ಪ್ರಭಾವ
ಕಾಂಗ್ರೆಸ್ನ ಮಾಜಿ ಮುಖಂಡ, ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ತಮ್ಮ ಜನತಾ ಕಾಂಗ್ರೆಸ್ ಛತ್ತೀಸ್ ಗಢ ಪಕ್ಷದ ಮೂಲಕ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಇದು ಕಾಂಗ್ರೆಸ್ಗೆ ಹೊಡೆತ ನೀಡಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಈಗಿನ ವಿಶ್ಲೇಷಣೆಗಳ ಪ್ರಕಾರ ಜೋಗಿ 'ಫ್ಯಾಕ್ಟರ್' ಕಾಂಗ್ರೆಸ್ಗೆ ನೆರವಾಗಿದೆ. ಹೆಚ್ಚು ಸೀಟುಗಳನ್ನು ಗೆಲ್ಲದಿದ್ದರೂ, ಜೋಗಿ ಅನೇಕ ಕಡೆಗಳಲ್ಲಿ ಬಿಜೆಪಿ ಮತಗಳನ್ನು ಒಡೆಯುವಲ್ಲಿ ಯಶಸ್ವಿಯಾದರು. ಅಲ್ಲದೆ, ಕಾಂಗ್ರೆಸ್ನಿಂದ ಅವರ ನಿರ್ಗಮನದಿಂದಾಗಿ, ಪಕ್ಷದ ಒಳಗೆ ಈ ಹಿಂದೆ ಇದ್ದ ಒಡಕು ನಿವಾರಣೆಯಾಯಿತು ಎನ್ನಲಾಗಿದೆ.
ನಕ್ಸಲರ ಹಾವಳಿ
ದೇಶದಲ್ಲಿ ಅತಿ ಹೆಚ್ಚು ನಕ್ಸಲ್ ಪೀಡಿತ ರಾಜ್ಯವೆಂದರೆ ಛತ್ತೀಸ್ಗಢ. ಬಿಜೆಪಿ ಅಧಿಕಾರಕ್ಕೆ ಬರುವಾಗ ನಕ್ಸಲರ ಹಾವಳಿ ನಿಯಂತ್ರಿಸುವುದಾಗಿ ಹೇಳಿತ್ತು. ಆದರೆ ಮೂರು ಅವಧಿಗಳಲ್ಲಿಯೂ ಅವರ ಅಟ್ಟಹಾಸವನ್ನು ಮಟ್ಟ ಹಾಕಲು ಬಿಜೆಪಿಗೆ ಸಾಧ್ಯವಾಗಿಲ್ಲ. ಚುನಾವಣೆಗೂ ನಕ್ಸಲರು ಅಡ್ಡಿಪಡಿಸಿದ್ದರು. ಹದಿನೈದು ದಿನಗಳಲ್ಲಿಯೇ ಆರು ಬಾರಿ ದಾರಿ ನಡೆಸಿ 13 ಜನರನ್ನು ಕೊಂದು ಹಾಕಿದ್ದಾರೆ. ನಕ್ಸಲರನ್ನು ನಿಯಂತ್ರಿಸಲಾಗದೆ ಸೋತಿದ್ದು, ಬಿಜೆಪಿಗೆ ನಕಾರಾತ್ಮಕವಾಗಿ ಪರಿಣಮಿಸಿತು.
ಬಡತನ, ನಿರುದ್ಯೋಗ
ದೇಶದ ಅತಿ ಬಡ ರಾಜ್ಯಗಳಲ್ಲಿ ಛತ್ತೀಸ್ ಗಢವೂ ಒಂದು. ಇಲ್ಲಿನ ಶೇ 40 ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿ ಬದುಕುತ್ತಿದ್ದಾರೆ. ರಾಜ್ಯದ ನಿರುದ್ಯೋಗದ ಪ್ರಮಾಣದ ದೇಶದಲ್ಲೇ ಆರನೇ ಸ್ಥಾನದಲ್ಲಿದೆ. ಮಧ್ಯಪ್ರದೇಶದ ಭಾಗವಾಗಿದ್ದ ಸಂದರ್ಭದಿಂದಲೂ ಈ ಭಾಗ ಹಿಂದುಳಿದಿತ್ತು. ರಮಣ್ ಸಿಂಗ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವೂ ಬದಲಾಗಲಿಲ್ಲ. ಸರ್ಕಾರವು ಸಬ್ಸಿಡಿ ಯೋಜನೆಗಳ ಮೂಲಕ ಜನರ ಬಡತನ ನಿವಾರಣೆಗೆ ಪ್ರಯತ್ನಿಸಿತು. ಆದರೆ, ಸಬ್ಸಿಡಿಗಳು ಜನರನ್ನು ತಲುಪಲೇ ಇಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.