1,000 ಕಾರ್ಮಿಕರನ್ನು ಹೊತ್ತ ಚುಕುಬುಕು ರೈಲು ಹೊರಟಿದ್ದೆಲ್ಲಿಗೆ?
ನವದೆಹಲಿ, ಮೇ.01: ಕೊರೊನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ಭಾರತ ಲಾಕ್ ಡೌನ್ ಘೋಷಿಸಲಾಗಿತ್ತು. ಇದರಿಂದ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ಪ್ರದೇಶಗಳಿಗೆ ವಾಪಸ್ ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಆಯಾ ರಾಜ್ಯ ಸರ್ಕಾರಗಳು ವಲಸೆ ಕೂಲಿ ಕಾರ್ಮಿಕರು ತಮ್ಮ ಪ್ರದೇಶಕ್ಕೆ ತೆರಳಲು ಅನುಕೂಲ ಕಲ್ಪಿಸಿ ಕೊಡುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆ ಶುಕ್ರವಾರ 1,000 ವಲಸೆ ಕೂಲಿ ಕಾರ್ಮಿಕರನ್ನು ಹೊತ್ತ ವಿಶೇಷ ರೈಲು ಪ್ರಯಾಣ ಆರಂಭಿಸಿದೆ.
ವಲಸೆ ಕಾರ್ಮಿಕರನ್ನು ಕಳುಹಿಸಲು, ಕರೆತರಲು ಮೂರು ರಾಜ್ಯಗಳ ಮಾಸ್ಟರ್ ಪ್ಲಾನ್
ತೆಲಂಗಾಣದಿಂದ ಜಾರ್ಖಂಡ್ ಗೆ ವಲಸೆ ಕೂಲಿ ಕಾರ್ಮಿಕರನ್ನು ಹೊತ್ತ ವಿಶೇಷ ರೈಲು ಶುಕ್ರವಾರ ಬೆಳಗ್ಗೆ 4.50ಕ್ಕೆ ಪ್ರಯಾಣ ಆರಂಭಿಸಿದೆ. 24 ಬೋಗಿಗಳಿರುವ ರೈಲಿನಲ್ಲಿ 1,000 ಕೂಲಿ ಕಾರ್ಮಿಕರನ್ನು ರವಾನಿಸಲಾಗುತ್ತಿದ್ದು, ಶುಕ್ರವಾರ ರಾತ್ರಿ 11 ಗಂಟೆಗೆ ಜಾರ್ಖಂಡ್ ನ ಹಾಟಿಯಾ ಪ್ರದೇಶಕ್ಕೆ ತಲುಪಲಿದೆ.
|
ವಲಸೆ ಕಾರ್ಮಿಕರ ವಿಶೇಷ ರೈಲು ಎಲ್ಲಿಯೂ ನಿಲ್ಲುವಂತಿಲ್ಲ
ತೆಲಂಗಾಣದಿಂದ ಹೊರಟ ರೈಲು ಶುಕ್ರವಾರ ರಾತ್ರಿ 11 ಗಂಟೆಗೆ ಜಾರ್ಖಂಡ್ ನ ಹಾಟಿಯಾ ಪ್ರದೇಶಕ್ಕೆ ತಲುಪಲಿದೆ. ಈ ಮಾರ್ಗಮಧ್ಯದಲ್ಲಿ ವಿಶೇಷ ರೈಲನ್ನು ಎಲ್ಲಿಯೂ ನಿಲ್ಲಿಸುವಂತಿಲ್ಲ. ಹಾಟಿಯಾ ತಲುಪಿದ ಬಳಿಕ ಕೂಲಿ ಕಾರ್ಮಿಕರನ್ನೆಲ್ಲ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ತಪಾಸಣೆಗೆ ಒಳಪಡಿಸಲಾಗುತ್ತದೆ. ಅಗತ್ಯ ಬಿದ್ದಲ್ಲಿ ಎಲ್ಲ ವಲಸೆ ಕೂಲಿ ಕಾರ್ಮಿಕರನ್ನು ದಿಗ್ಬಂಧನದಲ್ಲಿ ಇರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ.
ಕೇಂದ್ರದ ಸೂಚನೆ ಮೇರೆಗೆ ರಾಜ್ಯಗಳಿಂದ ಕ್ರಮ
ಭಾರತ ಲಾಕ್ಡೌನ್ ಹಿನ್ನೆಲೆ ಅಂತಾರಾಜ್ಯ ಗಡಿ ಬಂದ್ ಆಗಿದ್ದವು. ಹೀಗಾಗಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಕೇಂದ್ರ ಸರ್ಕಾರದ ಸೂಚನೆ ಅನ್ವಯ ಎಲ್ಲ ರಾಜ್ಯಗಳು ವಲಸೆ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ಕಳುಹಿಸಲು ವ್ಯವಸ್ಥೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ನೆರೆಹೊರೆಯ ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳು ಪರಸ್ಪರ ಒಪ್ಪಿಗೆ ಮೂಲಕ ಸಹಭಾಗಿತ್ವದಲ್ಲಿ ಈ ಕೆಲಸಕ್ಕೆ ಕೈ ಹಾಕಿವೆ.
ಮಾರ್ಗಸೂಚಿಗಳನ್ನು ರಚಿಸಿರುವ ಕೆಲವು ರಾಜ್ಯಗಳು
ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳು ವಿವರವಾದ ಮಾರ್ಗಸೂಚಿಗಳನ್ನು ರೂಪಿಸಿವೆ. ಇದನ್ನೇ ಅನುಸರಿಸಿ ಈಗ ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳು ಕೂಡ ವಲಸೆ ಕಾರ್ಮಿಕರನ್ನು, ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡಲು ವ್ಯವಸ್ಥೆ ಮಾಡಿವೆ.
ರಾಜ್ಯದಲ್ಲಿ ವಲಸೆ ಕಾರ್ಮಿಕರ ರವಾನೆಗೆ 4 ಸಾವಿರ ಬಸ್
ಒಂದು ಬಸ್ನಲ್ಲಿ 25 ಜನರಿಗೆ ಅವಕಾಶ ಕಲ್ಪಿಸಲಾಗುತ್ತದೆ. ದಿನಕ್ಕೆ ಪ್ರತಿ ಒಂದು ಲಕ್ಷ ಜನರಿಗೆ 4,000 ಬಸ್ಸುಗಳು ಬೇಕಾಗುತ್ತವೆ . ಈ ಕೆಲಸಕ್ಕೆ ಸುಮಾರು 8 ಕೋಟಿ ರುಪಾಯಿ ಬೇಕಾಗುತ್ತದೆ. ಕರ್ನಾಟಕದಲ್ಲಿ ಅಧಿಕೃತ ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.