ಉಳಿದಿರುವುದು ಮೂರೇ ದಿನ: ಇಸ್ರೋಗೆ ವಿಕ್ರಂ ಸಿಗದಿದ್ದರೆ ಏನಾಗುತ್ತದೆ?
Recommended Video
ಬೆಂಗಳೂರು, ಸೆಪ್ಟೆಂಬರ್ 18: ಭಾರತದ ಹೆಮ್ಮೆಯ ಚಂದ್ರಯಾನ-2 ಯೋಜನೆಯ ಭಾಗವಾದ ವಿಕ್ರಂ ಲ್ಯಾಂಡರ್ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಪ್ರಯತ್ನ ನಡೆದು ಬುಧವಾರಕ್ಕೆ 11 ದಿನ. ಇನ್ನೇನು ಚಂದ್ರನನ್ನು ಮುಟ್ಟಲಿದೆ ಎನ್ನುವಷ್ಟರಲ್ಲಿ ಇಸ್ರೋ ಕೇಂದ್ರದಿಂದ ಸಂಪರ್ಕ ಕಡಿದುಕೊಂಡ ವಿಕ್ರಂ ಲ್ಯಾಂಡರ್ ಜತೆ ಪುನಃ ನಂಟು ಬೆಸೆಯಲು ಇಸ್ರೋ ನಡೆಸಿದ ಪ್ರಯತ್ನಗಳು ಸಫಲವಾಗಿಲ್ಲ. ಇಸ್ರೋ ಮುಂದೆ ಇರುವುದು ಇನ್ನು ಮೂರೇ ಮೂರು ದಿನ. ಅಷ್ಟರಲ್ಲಿ ಒಮ್ಮೆಯಾದರೂ ವಿಕ್ರಮ ಸಂಪರ್ಕಕ್ಕೆ ಸಿಗಲಿ ಎನ್ನುವುದು ಎಲ್ಲರ ಆಶಯ.
ಮೊದಲೇ ನಿಗದಿಪಡಿಸಿದಂತೆ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ಗಳು ಚಂದ್ರನ ಮೇಲೆ 14 ದಿನ ಮಾತ್ರ ಜೀವಂತ ಇರುವ ಸಾಮರ್ಥ್ಯ ಹೊಂದಿದ್ದವು. ಏಕೆಂದರೆ ಇವುಗಳಲ್ಲಿನ ಸೋಲಾರ್ ಪ್ಯಾನಲ್ಗಳು ಸೂರ್ಯನ ಕಿರಣಗಳನ್ನು ಪಡೆದುಕೊಂಡು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುತ್ತವೆ.
ಅಂದರೆ ಇವು ಸೌರಶಕ್ತಿ ಚಾಲಿತ ಯಂತ್ರಗಳು. ಬಿಸಿಲು ಇದ್ದಷ್ಟು ಸಮಯ ಮಾತ್ರ ಈ ಸಾಧನಗಳು ಬದುಕಬಲ್ಲವು. ಬಿಸಿಲು ಮರೆಯಾದ ಬಳಿಕ ಇವುಗಳಿಗೆ ಶಕ್ತಿಯ ಪೂರೈಕೆಯಾಗದೆ ಇರುವುದರಿಂದ ನಿಶ್ಚಲವಾಗುತ್ತವೆ. ಒಮ್ಮೆ ನಿಶ್ಚಲವಾದರೆ, ಮತ್ತೆ ಸೂರ್ಯನ ಬೆಳಕು ಬಿದ್ದರೆ ಜೀವ ಪಡೆದುಕೊಳ್ಳುವ ಸಾಮರ್ಥ್ಯ ಅವುಗಳಿಗಿಲ್ಲ.

ಕೊನೆಯ ನಿರ್ಣಾಯಕ ದಿನಗಳು
ಪಾಕ್ಷಿಕ ಅವಧಿಯ ಲೆಕ್ಕಾಚಾರದೊಂದಿಗೆ ಸೆ. 7ರಂದು ಸರಿಯಾಗಿ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸುವ ಕಾರ್ಯವನ್ನು ಇಸ್ರೋ ನಡೆಸಿತ್ತು. ಆದರೆ ದುರದೃಷ್ಟವಶಾತ್ ಅಂದು ಸಂಪರ್ಕ ಕಡಿದುಕೊಂಡ ವಿಕ್ರಂ ಲ್ಯಾಂಡರ್ ಇದುವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ಇನ್ನು ಉಳಿದಿರುವ ಮೂರು ದಿನ ಭಾರತದ ಪಾಲಿಗೆ ನಿರ್ಣಾಯಕವಾಗಿದೆ. ಈಗಲೂ ಲ್ಯಾಂಡರ್ ಸಿಗದೆ ಹೋದರೆ ಇಸ್ರೋ ಮತ್ತೆ ಆ ಪ್ರಯತ್ನ ನಡೆಸುವುದಿಲ್ಲ. ಏಕೆಂದರೆ ಲ್ಯಾಂಡರ್ ತನ್ನ ಉಸಿರು ಕಳೆದುಕೊಂಡಿರುತ್ತದೆ!

ಮೂರು ದಿನಗಳಲ್ಲಿ ವಿಕ್ರಂ ನಿಶ್ಚಲ
ಇನ್ನು ಮೂರು ದಿನಗಳಲ್ಲಿ ಚಂದ್ರನ ಮೇಲೆ ಬೆಳಕು ಹಾಯಿಸುತ್ತಿರುವ ಸೂರ್ಯನ ದಿಕ್ಕು ಬದಲಾಗಲಿದೆ. ಹೀಗೆ ಚಂದ್ರನ ಅಂಗಳವನ್ನು ಕತ್ತಲೆ ಮಾಡಿ ಹೊರಡಲಿರುವ ಸೂರ್ಯ ಮತ್ತೆ ಬರುವುದು 14 ದಿನಗಳ ಬಳಿಕ. ಒಂದು ಪಾಕ್ಷಿಕ ಅವಧಿ ಮುಗಿಯುತ್ತಿದ್ದಂತೆಯೇ ಚಂದ್ರನಲ್ಲಿ ಕತ್ತಲಾವರಿಸುತ್ತದೆ. ಸೂರ್ಯಕಿರಣಗಳ ಗೈರಿನಿಂದ ಲ್ಯಾಂಡರ್ ಸಾಧನಗಳಿಗೆ ಶಕ್ತ ಸಿಗದೆ ನಿಶ್ಚಲವಾಗುತ್ತವೆ.

ಚಂದ್ರನಲ್ಲಿ ಶುರುವಾಗಲಿದೆ ಚಳಿ
ಸೂರ್ಯನ ಸಂಪರ್ಕ ಕಳೆದುಕೊಳ್ಳುತ್ತಿದ್ದಂತೆಯೇ ಚಂದ್ರನ ಮೇಲೆ ಶೀತ ವಾತಾವರಣ ಉಂಟಾಗುತ್ತದೆ. ಇದರ ಪ್ರಮಾಣ ವಿಪರೀತ. ಎಷ್ಟೆಂದರೆ -180 ಡಿಗ್ರಿ ಸೆಲ್ಸಿಯಸ್ನಷ್ಟು. ಇದು ಸಹಿಸಲಸಾಧ್ಯವಾದ ಚಳಿ. ಈ ಚಳಿಯಲ್ಲಿ ವಿಕ್ರಂ ಲ್ಯಾಂಡರ್ ಬದುಕುಳಿಯಲಾರದು. ಸೆ. 7ರಂದು ಲ್ಯಾಂಡರ್ ಚಂದ್ರನ ಮೇಲೆ ಇಳಿದಿದ್ದು ಪಾಕ್ಷಿಕ ಅವಧಿಯ ಮೊದಲ ದಿನವಾಗಿತ್ತು. ಈಗ ಅವಧಿ ಮುಗಿಯುತ್ತಾ ಬಂದಿದೆ. ವಿಕ್ರಂ ಅಲ್ಲಿ ಕಾರ್ಯಾಚರಣೆ ಮಾಡುತ್ತಿದೆಯೋ ಅಥವಾ ವೇಗವಾಗಿ ಚಂದ್ರನ ಮೇಲೆ ಅಪ್ಪಳಿಸಿದ ರಭಸಕ್ಕೆ ಹಾನಿಯಾಗಿ ಘಾಸಿಗೊಂಡಿದೆಯೋ ಗೊತ್ತಿಲ್ಲ. ಏನೇ ಮಾಡಿದರೂ ಮೂರು ದಿನಗಳ ಬಳಿಕ ಅದು ಸಂಪೂರ್ಣ ಸ್ಥಗಿತಗೊಳ್ಳುತ್ತದೆ. 14 ದಿನ ಕಳೆದು ಮತ್ತೆ ಸೂರ್ಯನ ಕಿರಣ ಸೋಕಿದಾಗ ವಿಕ್ರಮ ಮತ್ತೆ ಜೀವ ಪಡೆದುಕೊಳ್ಳಲಾರ. ಹಾಗೊಮ್ಮೆ ಆದರೆ ಅದು ಬಾಹ್ಯಾಕಾಶ ಲೋಕದ ಬಹುದೊಡ್ಡ ವಿಸ್ಮಯ ಆಗುವುದರಲ್ಲಿ ಸಂಶಯವಿಲ್ಲ.

ಇಸ್ರೋದಿಂದ ಮಾಹಿತಿ ನಿರೀಕ್ಷೆ
ವಿಕ್ರಂ ಲ್ಯಾಂಡರ್ ಸುಗಮವಾಗಿ ಅಪಾಯವಿಲ್ಲದೆ ಚಂದ್ರನ ಮೇಲೆ ಇಳಿಯಲು ಏಕೆ ವಿಫಲವಾಗಿದೆ ಎಂಬ ಬಗ್ಗೆ ಇಸ್ರೋದ ಆಂತರಿಕ ಸಮಿತಿಯು ಶೀಘ್ರದಲ್ಲಿಯೇ ವಿವರಣೆ ನೀಡುವ ಸಾಧ್ಯತೆ ಇದೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ. ಮುಂದಿನ ಒಂದೆರಡು ದಿನಗಳಲ್ಲಿ ಇಸ್ರೋ ಈ ಮಾಹಿತಿ ಬಹಿರಂಗಪಡಿಸಬಹುದು. ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತ ಮತ್ತು ಹಾರ್ಡ್ ಲ್ಯಾಂಡಿಂಗ್ ಬಗ್ಗೆ ಹಲವು ಸಭೆಗಳನ್ನು ನಡೆಸಿ ಚರ್ಚಿಸಿರುವ ಸಮಿತಿ, ಬಹುತೇಕ ಅಂತಿಮ ಅಭಿಪ್ರಾಯಕ್ಕೆ ಬಂದಿದೆ.

ಥರ್ಮಲ್ ಚಿತ್ರ ರವಾನಿಸಿದ್ದ ಇಸ್ರೋ
ಚಂದ್ರಯಾನ-2ದ ಆರ್ಬಿಟರ್ ಯಶಸ್ವಿಯಾಗಿ ಚಂದ್ರನ ಮೇಲೆ ಹಾರಾಟ ನಡೆಸಿದ್ದು, ವಿಕ್ರಂ ಲ್ಯಾಂಡರ್ ಇಳಿದಿರುವ ಜಾಗವನ್ನು ಗುರುತಿಸಿದೆ ಎಂದು ಕೆಲವು ದಿನಗಳ ಹಿಂದೆ ಇಸ್ರೋ ತಿಳಿಸಿತ್ತು. ಆರ್ಬಿಟರ್ ಲ್ಯಾಂಡರ್ನ ಥರ್ಮಲ್ ಚಿತ್ರವನ್ನು ತೆಗೆದಿರುವುದಾಗಿ ಹೇಳಿತ್ತು. ಆದರೆ ಈ ಥರ್ಮಲ್ ಚಿತ್ರಗಳನ್ನು ಇಸ್ರೋ ಇದುವರೆಗೂ ಬಿಡುಗಡೆ ಮಾಡಿಲ್ಲ. ಹಾಗೆಯೇ ಆರ್ಬಿಟರ್ನ ಕ್ಯಾಮೆರಾಗಳು ಸಹಜ ಚಿತ್ರಗಳನ್ನು ಸಹ ತೆಗೆಯುವ ಸಾಮರ್ಥ್ಯ ಹೊಂದಿದ್ದರೂ ಅವುಗಳನ್ನು ಏಕೆ ತೆಗೆದಿಲ್ಲ ಎಂಬ ವಿವರಣೆ ನೀಡಿಲ್ಲ. ಇವುಗಳ ಬಗ್ಗೆ ಇಸ್ರೋ ಇನ್ನೆರಡು ದಿನಗಳಲ್ಲಿ ಮಾಹಿತಿ ನೀಡುವ ನಿರೀಕ್ಷೆಗಳಿವೆ.












Click it and Unblock the Notifications