ಎಂಎಸ್ಪಿಗೆ ಒತ್ತಾಯಿಸಿ ಹರಿಯಾಣ-ದೆಹಲಿಯ ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ
ನವದೆಹಲಿ, ಜೂನ್. 12: ಸೂರ್ಯಕಾಂತಿ ಬೆಳೆ ಖರೀದಿಯಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸಿಗದಿರುವುದನ್ನು ವಿರೋಧಿಸಿ ಹರಿಯಾಣದ ರೈತರು ಸೋಮವಾರ ದೆಹಲಿಯ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕುರುಕ್ಷೇತ್ರ ಜಿಲ್ಲೆಯ ಪಿಪ್ಲಿ ಗ್ರಾಮದಲ್ಲಿ ನಡೆದ 'ಮಹಾಪಂಚಾಯತ್''ಲ್ಲಿ ಸಂಚಾರ ನಿರ್ಬಂಧಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.
ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ಇತರ ನೆರೆಯ ರಾಜ್ಯಗಳ ರೈತ ಮುಖಂಡರು ತಮ್ಮ ಬೇಡಿಕೆಯನ್ನು ಒತ್ತಿಹೇಳಲು 'ಎಂಎಸ್ಪಿ ದಿಲಾವೋ, ಕಿಸಾನ್ ಬಚಾವೋ' ಮಹಾಪಂಚಾಯತ್ಗಾಗಿ ಪಿಪ್ಲಿ ಧಾನ್ಯ ಮಾರುಕಟ್ಟೆಯಲ್ಲಿ ಜಮಾಯಿಸಿದ್ದರು.

ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಭಾನುವಾರ 8,528 ಸೂರ್ಯಕಾಂತಿ ರೈತರ ಬ್ಯಾಂಕ್ ಖಾತೆಗಳಿಗೆ 29.13 ಕೋಟಿ ರೂಪಾಯಿಯನ್ನು ಭಾವಂತರ್ ಭರ್ಪೈ ಯೋಜನೆ (ಬಿಬಿವೈ) ಅಡಿಯಲ್ಲಿ ಮಧ್ಯಂತರ ಪರಿಹಾರವಾಗಿ ವರ್ಗಾಯಿಸಿದ್ದಾರೆ. ಆದರೆ ರೈತರು ತಮ್ಮ ಬೇಡಿಕೆಗೆ ಬದ್ಧವಾಗಿದ್ದು, ಸರ್ಕಾರ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯಲ್ಲಿ ಸೂರ್ಯಕಾಂತಿ ಖರೀದಿಸಬೇಕು ಎಂದಿದ್ದಾರೆ.
ರಾಜ್ಯ ಸರ್ಕಾರವು ಈ ವರ್ಷದ ಆರಂಭದಲ್ಲಿ ಸೂರ್ಯಕಾಂತಿ ಬೆಳೆಯನ್ನು ಬಿಬಿವೈ ಅಡಿಯಲ್ಲಿ ಸೇರಿಸುವುದಾಗಿ ಘೋಷಿಸಿತ್ತು, ಈ ಯೋಜನೆಯ ಮೂಲಕ ಎಂಎಸ್ಪಿಗಿಂತ ಕಡಿಮೆ ಮಾರಾಟವಾದ ಉತ್ಪನ್ನಗಳ ವಿರುದ್ಧ ರೈತರಿಗೆ ನಿಗದಿತ ಪರಿಹಾರವನ್ನು ಪಾವತಿಸುತ್ತದೆ. ರಾಜ್ಯ ಸರ್ಕಾರವು ಎಂಎಸ್ಪಿಗಿಂತ ಕಡಿಮೆ ಮಾರಾಟವಾಗುವ ಸೂರ್ಯಕಾಂತಿ ಬೆಳೆಗೆ ಯೋಜನೆಯಡಿ ಮಧ್ಯಂತರ ಬೆಂಬಲವಾಗಿ ಪ್ರತಿ ಕ್ವಿಂಟಲ್ಗೆ 1,000 ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಲ್ಗೆ 6,400 ರೂಪಾಯಿ ಎಂಎಸ್ಪಿ ದರದಲ್ಲಿ ಖರೀದಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು "ರಾಜಕೀಯ ಆಡುತ್ತಿದ್ದಾರೆ" ಎಂದು ಕೆಲವು ರೈತ ಸಂಘಗಳ ವಿರುದ್ಧ ಶನಿವಾರ ಹರಿಹಾಯ್ದಿದ್ದಾರೆ. ರೈತ ಸಮುದಾಯವನ್ನು ದಾರಿತಪ್ಪಿಸಲು ಪ್ರಯತ್ನಿಸುವವರಿಗೆ ಬಲಿಯಾಗಬಾರದು ಎಂದು ರೈತರನ್ನು ಒತ್ತಾಯಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪದ ಮೇಲೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ರೈತ ಸಮುದಾಯ ಬೆಂಬಲ ನೀಡಿದೆ. ಹರಿಯಾಣದ ರೈತರಿಂದ ಬೆಂಬಲ ಪಡೆದ ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪುನಿಯಾ, ರೈತ ನಾಯಕ ರಾಕೇಶ್ ಟಿಕಾಯತ್ ಅವರೊಂದಿಗೆ ಮಹಾಪಂಚಾಯತ್ನಲ್ಲಿ ಭಾಗವಹಿಸಿದ್ದರು.












Click it and Unblock the Notifications