ಅಂತೂ ಇಂತೂ ವಂಜಾರಾಗೆ ಸಿಕ್ತು ಜಾಮೀನು
ಮುಂಬಯಿ, ಸೆ. 11 : ನಕಲಿ ಎನ್ಕೌಂಟರ್ ಆರೋಪದಡಿ ಜೈಲು ಸೇರಿದ್ದ ನಿವೃತ್ತ ಐಪಿಎಸ್ ಅಧಿಕಾರಿ, ಗುಜರಾತ್ ನ ಮಾಜಿ ಡಿಐಜಿ ಡಿಜಿ ವಂಜಾರಾಗೆ ಮುಂಬಯಿ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.
ಕಳೆದ ಏಳು ವರ್ಷಗಳಿಂದ ಸಾಬರಮತಿ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ವಂಜಾರಾಗೆ ಅಂತೂ ಜಾಮೀನು ಸಿಕ್ಕಿದೆ. 2005 ರ ಸೋಹ್ರಾಬುದ್ದೀನ್ ಶೇಖ್ ಮತ್ತು ಆತನ ಪತ್ನಿ ಎನ್ಕೌಂಟರ್ ಹಾಗೂ 2006ರ ತುಳಸಿರಾಮ್ ಪ್ರಜಾಪತಿ, ಇಶ್ರಾಂತ್ ಜಹಾನ್, ಸಾದಿಕ್ ಜಾಮಾಲ್, ಮತ್ತಿತರ ಎನ್ಕೌಂಟರ್ಗೆ ಸಂಬಂಧಿಸಿ ವಂಜಾರಾ ಅವರನ್ನು ಬಂಧಿಸಲಾಗಿತ್ತು.

ಸೋಹ್ರಾಬುದ್ದೀನ್ ಮತ್ತು ಆತನ ಪತ್ನಿ ಎನ್ಕೌಂಟರ್ಗೆ ಸಂಬಂಧಿಸಿ ಒಟ್ಟು 13 ಜನ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿತ್ತು.
2007 ರ, ಏಪ್ರಿಲ್ 24ರಲ್ಲಿ ಬಂಧಿತರಾಗಿದ್ದ 59 ವರ್ಷದ ವಂಜಾರಾ ಜೈಲಿನಲ್ಲಿರುವಾಗಲೇ ರಾಜೀನಾಮೆ ನೀಡಿದ್ದರು. ಅವರ ಜತೆ ಇನ್ನಿಬ್ಬರು ಐಪಿಎಸ್ ಅಧಿಕಾರಿಗಳಾದ ರಾಜ್ ಕುಮಾರ್ ಪಂಡಿನ್, ದಿನೇಶ್ ಸಹ ರಾಜೀನಾಮೆ ನೀಡಿದ್ದರು.(ಗುಜರಾತ್ ಎನ್ ಕೌಂಟರ್ ಅಮಾನವೀಯ ಕೃತ್ಯ)
ಕಳೆದ ಏಳು ವರ್ಷಗಲಿಂದ ವಂಜಾರಾ ಜಾಮೀನಿಗಾಗಿ ಪ್ರಯತ್ನ ಮಾಡುತ್ತಲೇ ಬಂದಿದ್ದರು. 2008ರ ಫೆಬ್ರವರಿ 24 ರಂದು ಸೋದರಳಿಯನ ಮದುವೆ ನಿಮಿತ್ತ ವಂಜಾರಾಗೆ 72 ಗಂಟೆ ಕಾಲ ಜಾಮೀನು ನೀಡಲಾಗಿತ್ತು.
ಸುಪ್ರೀಂ ಕೋರ್ಟ್ ಆದೇಶದಂತೆ ಗುಜರಾತ್ ಸರ್ಕಾರ ಈ ಪ್ರಕರಣದ ತನಿಖೆಗೆ ಐಜಿಪಿ ಗೀತಾ ಜೋಹಾರಿ ನೇತೃತ್ವದಲ್ಲಿ ಸಿಐಡಿ ತಂಡ ರಚಿಸಿತ್ತು.
ಯಾರು ಈ ವಂಜಾರಾ?
ಗುಜರಾತ್ ಪೊಲೀಸ್ನಲ್ಲಿ ಸಂಚಲನ ಮೂಡಿಸಿದ್ದ ವಂಜಾರಾ ಮೇಲೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗಲೇ ಎನ್ಕೌಂಟರ್ ಆರೋಪ ಬಂದಿತ್ತು. ವಂಜಾರಾ 1987ರ ಐಎಎಸ್ ಬ್ಯಾಚ್ನಿಂದ ಸೇವೆಗೆ ಧುಮುಕಿದ್ದರು. ಅಲ್ಲದೇ ಜೈಲಿನಲ್ಲಿದ್ದ ವಂಜಾರಾ 'ನಾನು ನರೇಂದ್ರ ಮೋದಿ ಮೇಲಿನ ಗೌರವದಿಂದ ಸುಮ್ಮನಿದ್ದೇನೆ' ಎಂಬ ಹೇಳಿಕೆ ನೀಡಿದ್ದು ಕೋಲಾಹಲಕ್ಕೆ ಕಾರಣವಾಗಿತ್ತು. ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಮೋದಿ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಆಗ್ರಹಿಸಿತ್ತು.












Click it and Unblock the Notifications