ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಯುಆರ್ ರಾವ್ ನಿಧನ
ಬೆಂಗಳೂರು, ಜುಲೈ 24: ಅಂತರರಾಷ್ಟ್ರೀಯ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿ ಯು.ಆರ್.ರಾವ್ ಅವರು ಸೋಮವಾರ ನಿಧನರಾಗಿದ್ದಾರೆ. ಅವರಿಗೆ ಎಂಬತ್ತೈದು ವರ್ಷ ವಯಸ್ಸಾಗಿತ್ತು. ಇಸ್ರೋ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಪ್ರಮುಖ ಯೋಜನೆಗಳ ರೂವಾರಿ ಆಗಿದ್ದರು.
ಜಿಆರ್ ವಿಶ್ವನಾಥ್, ಬಿಕೆ ಸುಮಿತ್ರಾ ಸೇರಿ 7 ಗಣ್ಯರಿಗೆ ಡಾಕ್ಟರೇಟ್
ಯು.ಆರ್.ರಾವ್ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಕೂಡ ಕಾರ್ಯ ನಿರ್ವಹಿಸಿದ್ದ ಅವರಿಗೆ ಹಲವಾರು ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಗೌರವಗಳು ಸಂದಿದ್ದವು.
ಸತೀಶ್ ಧವನ್ ನಂತರ ಇಸ್ರೋ ಅಧ್ಯಕ್ಷರಾಗಿ ಹತ್ತು ವರ್ಷಗಳ ಕಾಲ ರಾವ್ ಅವರು ಜವಾಬ್ದಾರಿ ವಹಿಸಿದ್ದರು. ಕರ್ನಾಟಕದ ಉಡುಪಿಯಲ್ಲಿನ ಹಳ್ಳಿಯೊಂದರಲ್ಲಿ ಜನಿಸಿದ್ದ ರಾವ್, ಎಂಜಿಕೆ ಮೆನನ್, ಸತೀಶ್ ಧವನ್ ಮತ್ತು ವಿಕ್ರಮ್ ಸಾರಾಭಾಯಿ ಅಂಥವರ ಜತೆಗೆ ಕಾರ್ಯ ನಿರ್ವಹಿಸಿದ್ದರು.
ಆರ್ಯಭಟದಿಂದ ಮೊದಲುಗೊಂಡು ಮಂಗಳ ಯಾನದವರೆಗೆ ರಾವ್ ಅವರ ಕೊಡುಗೆ ಅನನ್ಯವಾದುದು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಈ ವರ್ಷ ಜನವರಿಯಲ್ಲಿ ರಾವ್ ಅವರಿಗೆ ಪದ್ಮ ವಿಭೂಷಣ ಗೌರವ ನೀಡಲಾಗಿತ್ತು. "ನನಗೆ ಇದು ಮರಣೋತ್ತರವಾಗಿ ಸಿಗಬಹುದು ಅಂದುಕೊಂಡಿದ್ದೆ" ಎನ್ನುವ ಮೂಲಕ ರಾವ್ ಅಚ್ಚರಿಗೆ ದೂಡಿದ್ದರು.