ವಿಶೇಷ ವರದಿ: ಅಫ್ಘಾನಿಸ್ತಾನದಲ್ಲಿ ಹೇಗಿದೆ ಭಾರತದ ರಕ್ಷಣಾ ಕಾರ್ಯಾಚರಣೆ?
ಕಾಬೂಲ್, ಆಗಸ್ಟ್ 26: "ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಹಿಡಿತ ಸಾಧಿಸಿದ ನಂತರ ಸಾವಿರಾರು ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಬೂಲ್ನ ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತಕ್ಕೆ ಈವರೆಗೂ 565 ಜನರನ್ನು ಸ್ಥಳಾಂತರಿಸಲಾಗಿದೆ. ಈ ಪೈಕಿ 112 ಅಫ್ಘನ್ನ ಪ್ರಜೆಗಳು ಸೇರಿದ್ದಾರೆ," ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ತಿಳಿಸಿದ್ದಾರೆ.
ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದ ಪ್ರಮುಖ ನಗರಗಳನ್ನು ತಾಲಿಬಾನ್ ಉಗ್ರರು ಸ್ವಾಧೀನಪಡಿಸಿಕೊಂಡರು. ಅಂದಿನಿಂದ ಅಫ್ಘಾನಿಸ್ತಾನದಲ್ಲಿ ಇರುವ ಭಾರತೀಯ ಸಿಬ್ಬಂದಿ ಮತ್ತು ಭಾರತ ಸರ್ಕಾರದ ಜೊತೆಗೆ ಕೈಜೋಡಿಸಿದ ಅಫ್ಘನ್ನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕುರಿತು ನಡೆಸಿರುವ ಕಾರ್ಯಾಚರಣೆ ಬಗ್ಗೆ ಕೇಂದ್ರ ಸಚಿವ ಜೈಶಂಕರ್ ಮಾಹಿತಿ ನೀಡಿದರು.
ಶಾಕಿಂಗ್: ಅಫ್ಘಾನ್ ಪಾಸ್ಪೋರ್ಟ್ ಜೊತೆ ಭಾರತೀಯ ವೀಸಾ ಕದ್ದ ಐಎಸ್ಐ!
ಅಫ್ಘಾನಿಸ್ತಾನದಿಂದ ಯುನೈಟೆಡ್ ಸ್ಟೇಟ್ಸ್ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದರ ಬಗ್ಗೆ ನಿರ್ಧಾರ ಘೋಷಿಸುತ್ತಿದ್ದಂತೆ ತಾಲಿಬಾನ್ ಉಗ್ರರು ಎದ್ದು ಕುಳಿತರು. ಒಂದೊಂದು ಪ್ರದೇಶಗಳ ಮೇಲೆ ಹಿಡಿತ ಸಾಧಿಸುತ್ತಾ ಬಂದ ತಾಲಿಬಾನ್ ಸಂಘಟನೆ ಅಂತಿಮವಾಗಿ ಕಾಬೂಲ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. 20 ವರ್ಷಗಳ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡಿತು. ಈ ಬಗ್ಗೆ ಭಾರತವು ಕೆಲವು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿತ್ತು. ಭಾರತೀಯ ಸರ್ಕಾರವು ತಾಲಿಬಾನ್ ಅಟ್ಟಹಾಸ ಆರಂಭಕ್ಕೂ ತೆಗೆದುಕೊಂಡ ಕ್ರಮಗಳೇನು?, ತಾಲಿಬಾನ್ ಅಟ್ಟಹಾಸ ಶುರುವಿನ ನಂತರ ತೆಗೆದುಕೊಳ್ಳುತ್ತಿರುವ ಕ್ರಮಗಳೇನು?, ಇನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ಕ್ರಮಗಳ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.
ಭಾರತ ತೆಗೆದುಕೊಂಡ ಪೂರ್ವಭಾವಿ ಕ್ರಮಗಳೇನು?
* ಏಪ್ರಿಲ್ 2020: ಹೆರಾತ್ ಮತ್ತು ಜಲಾಲಬಾದ್ ನಗರದಲ್ಲಿದ್ದ ಭಾರತೀಯ ರಾಜತಾಂತ್ರಿಕ ಕಚೇರಿಯ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಯಿತು.
* ಜೂನ್ 2021: ಕಾಬೂಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ತೆರವುಗೊಳಿಸಲಾಯಿತು
* ಜುಲೈ 10-11: ಕಂದಹಾರ್ ನಿಂದ ಸ್ಥಳಾಂತರ ಕಾರ್ಯಾಚರಣೆ ಆರಂಭ
* ಆಗಸ್ಟ್ 10-11: ಮಜರ್-ಇ-ಷರೀಫ್ ನಿಂದ ಸ್ಥಳಾಂತರ ಕಾರ್ಯಾಚರಣೆ ಆರಂಭ
* ಕಳೆದ ಜೂನ್ 29 ರಿಂದ ಜುಲೈ 24, ಆಗಸ್ಟ್ 10 ಮತ್ತು ಆಗಸ್ಟ್ 12ರಂದು ಸಾಲು ಸಾಲು ಭದ್ರತಾ ಸಲಹೆಗಳನ್ನು ನೀಡಲಾಗಿದ್ದು, ಭಾರತೀಯ ಪ್ರಜೆಗಳು ತಕ್ಷಣವೇ ಅಫ್ಘಾನ್ ತೊರೆಯುವಂತೆ ಮತ್ತು ವಾಣಿಜ್ಯ ವಿಮಾನಯಾನಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿತ್ತು.
ಭಾರತೀಯ ಪ್ರಜೆಗಳಿಗೆ ಮೊದಲ ಆದ್ಯತೆ ಎಂದ ಸಚಿವಾಲಯ
* ಭಾರತೀಯ ಪ್ರಜೆಗಳು, ನಮ್ಮ ರಾಜತಾಂತ್ರಿಕ ಸಿಬ್ಬಂದಿಯ ಸುರಕ್ಷಿತ ಸ್ಥಳಾಂತರ
* ಸಂಕಷ್ಟದಲ್ಲಿರುವ ಅಫ್ಘಾನ್ ಪ್ರಜೆಗಳಿಗೆ ನೆರವು.
* ನೆರೆಹೊರೆಯವರು ಮೊದಲು ನಾಯಕತ್ವವನ್ನು ಒದಗಿಸುವುದು
* ಅಂತರರಾಷ್ಟ್ರೀಯ ಸಹಕಾರ ಮತ್ತು ಮಾನವೀಯ ಪ್ರಯತ್ನ
* ಯುಎನ್ಎಸ್ಸಿ ಅಫಘಾನಿಸ್ತಾನದ ಕುರಿತು ಭಾರತದ ಅಧ್ಯಕ್ಷತೆಯಲ್ಲಿ ವಿಶೇಷ ಅಧಿವೇಶನ.
* ಜಿನೀವಾದಲ್ಲಿ ಮುಂಬರುವ UNHRC ಅಧಿವೇಶನದಲ್ಲಿ ಅಫ್ಘಾನ್ ಬಗ್ಗೆ ಪ್ರಸ್ತಾಪ
ಅಫ್ಘಾನಿಸ್ತಾನ ಪ್ರಜೆಗಳ ಸ್ಥಳಾಂತರಕ್ಕೆ ಇ-ವೀಸಾ ವ್ಯವಸ್ಥೆ
ಪೂರ್ವಭಾವಿ ಕ್ರಮಗಳ ಜೊತೆಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಸ್ಥಾಪಿಸಲಾದ 24*7 ವಿಶೇಷ ಅಫ್ಘಾನಿಸ್ತಾನ ಸೆಲ್ ಮತ್ತು ಅಫ್ಘಾನ್ ಪ್ರಜೆಗಳಿಗಾಗಿ ಇ-ವೀಸಾ ವ್ಯವಸ್ಥೆ ಸ್ಥಾಪಿಸುವುದು ಸೇರಿದಂತೆ ಭಾರತ ತೆಗೆದುಕೊಂಡ ತುರ್ತು ಕ್ರಮಗಳ ಬಗ್ಗೆ ನಾಯಕರಿಗೆ ತಿಳಿಸಲಾಯಿತು. ಭಾರತಕ್ಕೆ ಬರಲು ಇಚ್ಛಿಸುವ ಅಫ್ಘಾನಿಸ್ತಾನದ ಪ್ರಜೆಗಳು ಇ-ವೀಸಾ ಅಪ್ಲಿಕೇಷನ್ ಪೋರ್ಟಲ್ ಮೂಲಕ ತಮ್ಮ ಅಪ್ಲಿಕೇಷನ್ ಭರ್ತಿ ಮಾಡಿ, ಇ-ವೀಸಾ ಪಡೆದುಕೊಳ್ಳಬಹುದು. ಇ-ವೀಸಾಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು www.indianvisaonline.gov.in ವೆಬ್ಸೈಟ್ನಲ್ಲಿ ಇ-ವೀಸಾ ಪಡೆಯಬಹುದು.
ಕಾಬೂಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮುಚ್ಚಿದ ನಂತರ ಭಾರತವು ಅಫ್ಘಾನ್ ಪ್ರಜೆಗಳಿಗಾಗಿ ಇ-ವೀಸಾ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಲಾಯಿತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಸಾಧಿಸಿರುವುದರ ನಡುವೆ, ಈ ಹಿಂದೆ ಅಫ್ಘಾನ್ ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ ಹಲವಾರು ಅಫ್ಘಾನ್ ಪ್ರಜೆಗಳಿಗೆ ಆಶ್ರಯ ನೀಡುವಂತೆ ಭಾರತದ ಸಹಾಯ ಕೋರಲಾಗಿತ್ತು. ಭಾರತ ಸರ್ಕಾರವು ಈಗಾಗಲೇ ಅಫ್ಘಾನ್ ಪ್ರಜೆಗಳಿಂದ 15,000ಕ್ಕೂ ಹೆಚ್ಚು ಇ-ವೀಸಾ ಅರ್ಜಿಗಳನ್ನು ಸ್ವೀಕರಿಸಿದೆ ಎಂದು ತಿಳಿದು ಬಂದಿದೆ.
ಭಾರತದಿಂದ 565 ಅಫ್ಘನ್ನರ ಸುರಕ್ಷಿತ ಸ್ಥಳಾಂತರ
ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಭಾರತ ಈವರೆಗೂ 565 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಈ ಪೈಕಿ 175 ಮಂದಿ ರಾಜತಾಂತ್ರಿಕ ಕಚೇರಿ ಸಿಬ್ಬಂದಿಯಾಗಿದ್ದು, 263 ಭಾರತೀಯ ಪ್ರಜೆಗಳಾಗಿದ್ದಾರೆ. ಹಿಂದೂ ಮತ್ತು ಸಿಖ್ಖರು ಸೇರಿದಂತೆ 112 ಅಫ್ಘಾನಿಸ್ತಾನದ ಪ್ರಜೆಗಳಾಗಿದ್ದಾರೆ. ಕಳೆದ ಆಗಸ್ಟ್ 16ರಂದು ಅಫ್ಘಾನಿಸ್ತಾನದಲ್ಲಿ ಸ್ವದೇಶಕ್ಕೆ ವಾಪಸ್ಸಾಗುವ ಮತ್ತು ದೇಶ ತೊರೆಯುವುದರ ಕುರಿತು ಮನವಿಗಳನ್ನು ಸ್ವೀಕರಿಸಲು 24*7 ಕೇಂದ್ರವನ್ನು ಆರಂಭಿಸಲಾಗಿದೆ. ಸಹಾಯವಾಣಿ ಕೇಂದ್ರದಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ 20 ಸಿಬ್ಬಂದಿಯನ್ನು ಹೊಂದಿದ್ದು, ಈವರೆಗೂ 3004 ಕರೆ, 7826 ವಾಟ್ಸಾಪ್ ಸಂದೇಶ, 3101 ಇ-ಮೇಲ್ ಸಂದೇಶಗಳು ಬಂದಿವೆ.
"ಆಪರೇಷನ್ ದೇವಿ ಶಕ್ತಿ" ಕಾರ್ಯಾಚರಣೆ
ತಾಲಿಬಾನ್ ಹಿಡಿತ ಸಾಧಿಸಿರುವ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು ಹಾಗೂ ಅಫ್ಘಾನ್ ಪಾಲುದಾರರನ್ನು ಭಾರತಕ್ಕೆ ಕರೆ ತರುವ ಉದ್ದೇಶದಿಂದ "ಆಪರೇಷನ್ ದೇವಿ ಶಕ್ತಿ"ಗೆ ಅನ್ನು ಘೋಷಿಸಲಾಗಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. "ಮಂಗಳವಾರ ದೆಹಲಿಗೆ 78 ಪ್ರಯಾಣಿಕರನ್ನು ಕರೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರ ಸಚಿವ ಜೈಶಂಕರ್ ಹೇಳಿದ್ದಾರೆ. ಈ ಹಿನ್ನೆಲೆ ಪ್ರತಿನಿತ್ಯ ಕಾಬೂಲ್ ವಿಮಾನ ನಿಲ್ದಾಣಕ್ಕೆ ಭಾರತದಿಂದ ಎರಡು ವಿಮಾನಗಳನ್ನು ಬಿಡಲಾಗುತ್ತಿದೆ.
"ಆಪ್ ದೇವಿ ಶಕ್ತಿ ಮುಂದುವರಿಸಲಾಗುತ್ತಿದೆ. ಕಾಬೂಲ್ ನಿಂದ 78 ಸ್ಥಳಾಂತರಿಸುವವರು ದುಶಾನ್ಬೆ ಮೂಲಕ ಆಗಮಿಸುತ್ತಾರೆ. ಭಾರತೀಯ ವಾಯುಸೇನೆ, ಏರ್ ಇಂಡಿಯಾ ಮತ್ತು TeMMEA ಅವಿರತ ಪ್ರಯತ್ನಕ್ಕೆ ಧನ್ಯವಾದ" ಎಂದು ಜೈಶಂಕರ್ ಹೇಳಿದ್ದಾರೆ. ಅಫ್ಘಾನ್ ರಾಜಧಾನಿ ನಗರವನ್ನು ತಾಲಿಬಾನ್ ವಶಪಡಿಸಿಕೊಂಡ ಒಂದು ದಿನದ ನಂತರ ಆಗಸ್ಟ್ 16ರಂದು ಕಾಬೂಲ್ ನಿಂದ ದೆಹಲಿಗೆ 40 ಭಾರತೀಯರನ್ನು ಏರ್ ಲಿಫ್ಟ್ ಮಾಡುವ ಮೂಲಕ ಭಾರತವು ಸ್ಥಳಾಂತರ ಕಾರ್ಯಾಚರಣೆಯನ್ನು ಆರಂಭಿಸಿತು.
ತಾಲಿಬಾನ್ ಉಗ್ರ ಸಂಘಟನೆ ಮತ್ತು ಅಫ್ಘಾನಿಸ್ತಾನ ಹಿಡಿತ
ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿದೆ. ಅದಾಗಿ 10 ದಿನದಲ್ಲಿ ದೇಶದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡ ತಾಲಿಬಾನಿಗಳು ತಮ್ಮ ಕ್ರೌರ್ಯ ಪ್ರದರ್ಶಿಸುತ್ತಿದ್ದಾರೆ. ತಾಲಿಬಾನ್ ಉಗ್ರರ ಮುಷ್ಠಿಯಲ್ಲಿ ಸಿಲುಕಿರುವ ಪ್ರಜೆಗಳು ಪ್ರತಿನಿತ್ಯ ಭಯದ ನೆರಳಿನಲ್ಲೇ ಬದುಕುತ್ತಿದ್ದು, ದೇಶ ತೊರೆಯುವುದಕ್ಕಾಗಿ ಹವಣಿಸುತ್ತಿದ್ದಾರೆ.
ಕಳೆದ 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆ ಕಾರ್ಯಾಚರಣೆಗೆ ಇಳಿಯಿತು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು.