ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದರೆ ಮೋದಿ? ಇಲ್ಲಿದೆ ಉತ್ತರ
ನವದೆಹಲಿ, ಮಾರ್ಚ್ 27: ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರಗಳಿಗೆ ಸರಕಾರದಿಂದ ಚುನಾವಣೆ ಆಯೋಗದ ಅನುಮತಿ ಪಡೆಯುವ ಅಗತ್ಯ ಇಲ್ಲ ಎಂದು ಚುನಾವಣಾ ಸಮಿತಿ ಮೂಲಗಳು ಬುಧವಾರ ತಿಳಿಸಿವೆ. ಲೋಕಸಭಾ ಚುನಾವಣೆ ಇನ್ನೇನು ಕೆಲವೆ ವಾರ ಇರುವಾಗ ಕ್ಷಿಪಣಿ ನಿರೋಧಕ ಪರೀಕ್ಷೆ ಯಶಸ್ವಿ ಆದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸಮಿತಿ ಪ್ರತಿಕ್ರಿಯಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಘೋಷಣೆಯು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದು ವಿಪಕ್ಷಗಳು ಆರೋಪ ಮಾಡಿವೆ. ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಂದಿನ ಸಾಧನೆಗೆ ಡಿಆರ್ ಡಿಒ ಹೊಗಳುತ್ತಾ, ಇದು ನರೇಂದ್ರ ಮೋದಿ ಅವರ ನಾಟಕ, ಪ್ರಚಾರ ತಂತ್ರ ಎಂದು ಟೀಕಿಸಿದ್ದಾರೆ.
ಭಾರತದ ಮಿಷನ್ ಹಲವು ವರ್ಷಗಳಿಂದ ವಿಶ್ವ ದರ್ಜೆಯದು. ನಮ್ಮ ವಿಜ್ಞಾನಿಗಳು, ಡಿಆರ್ ಡಿಒ, ಇತರ ಸಂಶೋಧನೆ ಹಾಗೂ ಬಾಹ್ಯಾಕಾಶ ಸಂಸ್ಥೆಗಳ ಬಗ್ಗೆ ಹೆಮ್ಮೆ ಇದೆ ಎಂದು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಸಂಶೋಧನೆ, ಬಾಹ್ಯಾಕಾಶ ಮ್ಯಾನೇಜ್ ಮೆಂಟ್ ಹಾಗೂ ಅಭಿವೃದ್ಧಿ ಇವೆಲ್ಲ ವರ್ಷಾನುಗಟ್ಟಲೆಯಿಂದ ನಿರಂತರ ಪ್ರಕ್ರಿಯೆ. ಮೋದಿ ಯಾವಾಗಿನಂತೆ ಎಲ್ಲದರ ಶ್ರೇಯವನ್ನು ಪಡೆಯಲು ಬಯಸುತ್ತಾರೆ. ಈ ಶ್ರೇಯ ನಿಜಕ್ಕೂ ಸಲ್ಲಬೇಕಾದದ್ದು ನಮ್ಮ ವಿಜ್ಞಾನಿಗಳು ಹಾಗೂ ಸಂಶೋಧಕರಿಗೆ ಎಂದಿದ್ದಾರೆ.

ದೂರು ನೀಡುವುದಾಗಿ ಹೇಳಿರುವ ಮಮತಾ ಬ್ಯಾನರ್ಜಿ
ಇಂದಿನ ಘೋಷಣೆ ಮೋದಿಯವರ ಮತ್ತೊಂದು ಕೊನೆಯಿಲ್ಲದ ನಾಟಕ ಹಾಗೂ ಪ್ರಚಾರದ ತಂತ್ರ. ಚುನಾವಣೆ ಸಂದರ್ಭದಲ್ಲಿ ಹತಾಶರಾಗಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದು ಒಟ್ಟಾರೆಯಾಗಿ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದು ಅವರು ಆರೋಪ ಮಾಡಿದ್ದಾರೆ. ಚುನಾವಣೆ ಆಯೋಗದ ಬಳಿ ದೂರು ದಾಖಲಿಸುವುದಾಗಿ ಹೇಳಿರುವ ಮಮತಾ ಬ್ಯಾನರ್ಜಿ, ಮುಳುಗುತ್ತಿರುವ ಬಿಜೆಪಿ ಎಂಬ ದೋಣಿಗೆ ಇಂದು ಅತ್ಯವಶ್ಯ ಆಮ್ಲಜನಕ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.

ವಿಶ್ವ ನಾಟಕ ದಿನದ ಶುಭಾಶಯಗಳು: ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಡಿಅರ್ ಡಿಒನ ಅಭಿನಂದಿಸುತ್ತಾ, ಮೋದಿ ಅವರನ್ನು ಗುರಿ ಮಾಡಿಕೊಂಡು, ವಿಶ್ವ ನಾಟಕ ದಿನಕ್ಕೆ ಶುಭಾಶಯಗಳು ಎಂದಿದ್ದಾರೆ. ಡಿಆರ್ ಡಿಒ ಅದ್ಭುತ ಕೆಲಸ. ನಿಮ್ಮ ಕೆಲಸಕ್ಕೆ ನಮಗೆ ಅಪಾರ ಹೆಮ್ಮೆ ಇದೆ. ನಾನು ಪ್ರಧಾನಿಗಳಿಗೆ ಶುಭಾಶಯ ತಿಳಿಸಲು ಬಯಸುತ್ತೇನೆ: ವಿಶ್ವ ನಾಟಕ ದಿನದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ದೇಶ ಭಾರತ
ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಾತನಾಡಿ, ಭಾರತವು ಲೋ ಅರ್ಥ್ ಆರ್ಬಿಟ್ (ಎಲ್ ಇಒ) ಉಪಗ್ರಹವನ್ನು ಹೊಡೆದು ಉರುಳಿಸಿದೆ. ಅದು ಮುಂಚೆಯೇ ನಿಗದಿ ಆಗಿದ್ದ ಗುರಿ. ಭಾರತವು ಈಗ ಬಾಹ್ಯಾಕಾಶದ ಪ್ರಬಲ ಶಕ್ತಿ ಆಗಿದೆ. ನಮ್ಮ ಉಪ್ರಗ್ರಹ ನಿರೋಧಕ ಶಸ್ತ್ರಾಸ್ತ್ರ ಪರೀಕ್ಷೆ ಯಶಸ್ವಿ ಆಗಿದೆ . ಅಮೆರಿಕ, ರಷ್ಯಾ, ಚೀನಾ ನಂತರ ಹೀಗೆ ಮಾಡಿದ ಜಗತ್ತಿನ ನಾಲ್ಕನೇ ದೇಶ ಭಾರತ ಎಂದಿದ್ದರು.

A-SAT ಯಶಸ್ವಿ ಪ್ರಯೋಗ
ಭಾರತವು ಪ್ರಬಲ ಬಾಹ್ಯಾಕಾಶ ಶಕ್ತಿಗಳ ಸಾಲಿನಲ್ಲಿ ಒಂದಾಗಿ ಸ್ಥಾನ ಪಡೆದಿದೆ. ಉಪಗ್ರಹ ನಿರೋಧಕ ಶಸ್ತ್ರಾಸ್ತ್ರ, A-SAT ಯಶಸ್ವಿಯಾಗಿ ಲೋ ಅರ್ಥ್ ಆರ್ಬಿಟ್ ನ ಗುರಿಯನ್ನು ಯಶಸ್ವಿಯಾಗಿ ಧ್ವಂಸ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications