ಮೋದಿ ಸರ್ಕಾರದಲ್ಲಿ ಅಧಿಕಗೊಂಡ ಇಡಿ ದಾಳಿಗಳು- ಸರ್ಕಾರ ಹೇಳಿದ್ದೇನು?
ನವದೆಹಲಿ, ಜುಲೈ. 27: 2004 ಮತ್ತು 2014ರ ನಡುವಿನ 112 ಶೋಧಗಳಿಗೆ ಹೋಲಿಸಿದರೆ 2014- 2022ರ ಅವಧಿಯಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗಳು ಸುಮಾರು 27 ಪಟ್ಟು ಹೆಚ್ಚಾಗಿದೆ.
ಇದುವರೆಗೆ ಒಟ್ಟು 3,010 ದಾಳಿಗಳಿಗೆ ಏರಿಕೆ ಕಂಡಿದೆ ಎಂದು ರಾಜ್ಯಸಭೆಗೆ ತಿಳಿಸಲಾಗಿದೆ. ಹಳೆಯ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ತನಿಖೆಗಳನ್ನು ವಿಲೇವಾರಿ ಮಾಡಲು ಮತ್ತು ಪಿಎಂಎಲ್ಎ ಅಡಿಯಲ್ಲಿ ಕಾಲಮಿತಿಯಲ್ಲಿ ಹೊಸ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಸಂಖ್ಯೆಯ ಶೋಧಗಳನ್ನು ನಡೆಸಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
Breaking: ಸೋನಿಯಾಗಾಂಧಿ ಇಡಿ ವಿಚಾರಣೆ: ಜಿಲ್ಲಾ ಕೇಂದ್ರಗಳಲ್ಲಿ ಇಂದು ಕಾಂಗ್ರೆಸ್ ಮೌನ ಸತ್ಯಾಗ್ರಹ
2014 ರಿಂದ ಇಡಿ ದಾಳಿಗಳು ಸುಮಾರು 90 ಪ್ರತಿಶತದಷ್ಟು ಹೆಚ್ಚಾಗಿದೆಯೇ ಮತ್ತು 2014 ರಿಂದ ಇಡಿ ಪ್ರಕರಣಗಳ ದೂರುಗಳ ಅನುಪಾತವು ತೀವ್ರವಾಗಿ ಕಡಿಮೆಯಾಗಿದೆಯೇ ಎಂದು ಶಿವಸೇನಾ ಸಂಸದ ಪ್ರಿಯಾಂಕಾ ಚತುರ್ವೇದಿ ಅವರ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಚೌಧರಿ ಪ್ರತಿಕ್ರಿಯಿಸಿದ್ದಾರೆ.
2002ರಲ್ಲಿ ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯಿದೆ (ಪಿಎಂಎಲ್ಎ) ಮಾಡಲಾಯಿತು. ಜುಲೈ 1, 2005 ರಿಂದ ಇದನ್ನು ಅನುಷ್ಠಾನಕ್ಕೆ ತರಲಾಯಿತು. 2004 ಮತ್ತು 2014 ರ ನಡುವೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸಿವ್ ಅಲೈಯನ್ಸ್ (ಯುಪಿಎ) ಅಧಿಕಾರದಲ್ಲಿದ್ದರೆ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸರ್ಕಾರವು 2014 ರ ಮಧ್ಯದಿಂದ ಅಧಿಕಾರದಲ್ಲಿದೆ.
ಪಿಎಂಎಲ್ಎಯ ಮೊದಲ ಒಂಬತ್ತು ವರ್ಷಗಳ ಆಡಳಿತದಲ್ಲಿ ಕಡಿಮೆ ಸಂಖ್ಯೆಯ ಶೋಧ ಕಾರ್ಯಗಳನ್ನು (112) ನಡೆಸಲಾಗಿದೆ. ಇದರ ಪರಿಣಾಮವಾಗಿ 5,346.16 ಕೋಟಿ ರೂಪಾಯಿ ಆದಾಯ ಅಪರಾಧವನ್ನು ಪತ್ತೆಹಚ್ಚಲಾಗಿದೆ. ಅಲ್ಲದೆ104 ಪ್ರಾಸಿಕ್ಯೂಷನ್ ದೂರುಗಳನ್ನು ದಾಖಲಿಸಲಾಗಿದೆ.
2004-05 ರಿಂದ 2013-14 ರ ಆರ್ಥಿಕ ಅವಧಿಯಲ್ಲಿ ವಿಚಾರಣಾ ನ್ಯಾಯಾಲಯವು ಅಕ್ರಮ ಹಣ ವರ್ಗಾವಣೆಯ ಅಪರಾಧಕ್ಕಾಗಿ ಯಾವುದೇ ಆರೋಪಿಗಳಿಗೆ ಶಿಕ್ಷೆ ವಿಧಿಸಿಲ್ಲ ಅಥವಾ ಪಿಎಂಎಲ್ಎ ಅಡಿಯಲ್ಲಿ ಯಾವುದೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಸಚಿವ ಪಂಕಜ್ ಚೌಧರಿ ತಿಳಿಸಿದರು.
2014-15 ಮತ್ತು 2021-22 ರ ನಡುವಿನ ಎಂಟು ಹಣಕಾಸು ವರ್ಷಗಳ ಅಂಕಿ ಅಂಶಗಳನ್ನು ತಿಳಿಸಿದ ಸಚಿವ ಚೌಧರಿ, ಹಳೆಯ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ತನಿಖೆಗಳನ್ನು ವಿಲೇವಾರಿ ಮಾಡಲು ಮತ್ತು ಪಿಎಂಎಲ್ಎ ಅಡಿಯಲ್ಲಿ ಹೊಸ ಪ್ರಕರಣಗಳ ತನಿಖೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು, ಕಳೆದ ಎಂಟು ವರ್ಷಗಳಲ್ಲಿ 3,010 ಹುಡುಕಾಟಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಇದರಿಂದಾಗಿ ಸುಮಾರು 99,356 ಕೋಟಿ ರೂ.ಗಳ ಅಪರಾಧದ ಆದಾಯವನ್ನು ಗುರುತಿಸಲಾಗಿದೆ. ಒಟ್ಟು 888 ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಿಸಲಾಗಿದೆ. 23 ಆರೋಪಿಗಳು ಹಾಗೂ ಸಂಸ್ಥೆಗಳಿಗೆ ಶಿಕ್ಷೆ ವಿಧಿಸಲಾಗಿದೆ. ಒಟ್ಟು 869.31 ಕೋಟಿ ರೂ.ಗಳ ಅಪರಾಧದ ಆದಾಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಹಣ ವರ್ಗಾವಣೆ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ಸಾಕ್ಷ್ಯಾಧಾರಗಳ ಸಂಗ್ರಹದ ದೃಷ್ಟಿಕೋನದಿಂದ ಹುಡುಕಾಟಗಳು ಬಹಳ ಮುಖ್ಯವೆಂದು ಉಲ್ಲೇಖಿಸುವುದು ಸೂಕ್ತವಾಗಿದೆ. ಹುಡುಕಾಟಗಳ ಸಂಖ್ಯೆಯಲ್ಲಿನ ಹೆಚ್ಚಳವು ಹಣ ವರ್ಗಾವಣೆಯನ್ನು ತಡೆಗಟ್ಟಲು ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ಸಚಿವರು ತಿಳಿಸಿದರು.
ತಂತ್ರಜ್ಞಾನದ ಬಳಕೆ, ಪರಸ್ಪರ ಸಹಕಾರ, ದೇಶೀಯ ಮತ್ತು ಅಂತರಾಷ್ಟ್ರೀಯ ಮಾಹಿತಿಯ ವಿನಿಮಯದ ಮೂಲಕ ಹಣಕಾಸಿನ ವ್ಯವಹಾರದ ಮಾಹಿತಿ ಸಂಗ್ರಹಿಸಲು ಸುಧಾರಿತ ವ್ಯವಸ್ಥೆಗಳನ್ನು ಬಳಸಲಾಗಿದೆ. ಹಳೆಯ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ತನಿಖೆಗಳು ಮತ್ತು ಸಂಕೀರ್ಣ ತನಿಖೆಗಳನ್ನು ಪೂರ್ಣಗೊಳಿಸಲು ಸಂಘಟಿತ ಪ್ರಯತ್ನಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದರು.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (ಎಫ್ಇಎಂಎ) ಸಿವಿಲ್ ಸೆಕ್ಷನ್ಗಳ ಅಡಿಯಲ್ಲಿ ಕೈಗೊಳ್ಳಲಾದ ಇಡಿ ದಾಳಿಗಳಿಗೆ ಅದೇ ಅವಧಿಗಳಲ್ಲಿ ಅಂದರೆ 2014-15ಕ್ಕೆ ಹೋಲಿಸಿದಾಗ ಈಗ ದುಪ್ಪಟ್ಟು ದಾಳಿಗಳನ್ನು ನಡೆಸಲಾಗಿದೆ. 1973 ರ ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆ (ಎಫ್ಇಆರ್ಎ) ಅನ್ನು ರದ್ದುಗೊಳಿಸಿದ ನಂತರ 1999 ರಲ್ಲಿವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯನ್ನು ಜಾರಿಗೊಳಿಸಲಾಯಿತು.
8,586 ಪ್ರಕರಣ ತನಿಖೆಗಾಗಿ ಪ್ರಕರಣ
2004 ರಿಂದ 2014ರ ಅವಧಿಯಲ್ಲಿ 571 ಕಡೆಗಳಲ್ಲಿ ಶೋಧಗಳನ್ನು ನಡೆಸಲಾಯಿತು. ಅಲ್ಲದೆ 8,586 ಪ್ರಕರಣಗಳನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ತನಿಖೆಗಾಗಿ ತೆಗೆದುಕೊಳ್ಳಲಾಗಿದೆ. ಇದರ ಪರಿಣಾಮವಾಗಿ 2,780 ಪ್ರಕರಣಗಳಲ್ಲಿ ಶೋಕಾಸ್ ನೋಟಿಸ್ಗಳನ್ನು ನೀಡಲಾಗಿದ್ದು, 1,312 ಸಂಸ್ಥೆಗಳಿಗೆ 1,754.33 ಕೋಟಿ ರೂ. ದಂಡ ವಿಧಿಸಲಾಗಿದೆ.
ವಿವಿಧೆಡೆ ಇಡಿಯಿಂದ 996 ಶೋಧ ಕಾರ್ಯ
ಇದಲ್ಲದೆ ಅಂದಾಜು 14 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಎಫ್ಇಎಂಎ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಹಳೆಯ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ತನಿಖೆಯನ್ನು ವಿಲೇವಾರಿ ಮಾಡಲು ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ ಅಡಿಯಲ್ಲಿ ಹೊಸ ಪ್ರಕರಣಗಳ ತನಿಖೆಯನ್ನು ಸಮಯಕ್ಕೆ ತಕ್ಕಂತೆ ಪೂರ್ಣಗೊಳಿಸಲು, 996 ಹುಡುಕಾಟಗಳನ್ನು ನಡೆಸಲಾಗಿದೆ. ಅಲ್ಲದೆ 22,330 ಪ್ರಕರಣಗಳನ್ನು ಎಫ್ಇಎಂಎ ನಿಬಂಧನೆಗಳ ಅಡಿಯಲ್ಲಿ ತನಿಖೆಗಾಗಿ ತೆಗೆದುಕೊಳ್ಳಲಾಗಿದೆ.
6,376.51 ಕೋಟಿ ರೂ.ಗಳ ದಂಡ
ಇದು ಶೋಕಾಸ್ ನೋಟಿಸ್ಗಳನ್ನು ವಿತರಿಸಲು ಕಾರಣವಾಗಿದೆ. 5,329 ಪ್ರಕರಣಗಳಲ್ಲಿ ಮತ್ತು 5,160 ಶೋಕಾಸ್ ನೋಟಿಸ್ಗಳ ತೀರ್ಪು ಬಂದು ಆ ಮೂಲಕ 6,376.51 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ. ಇದಲ್ಲದೆ, 2014-15 ರಿಂದ 2021ರ 2021ರ ದತ್ತಾಂಶದ ಪ್ರಕಾರ 7,066 ಕೋಟಿ ರೂ.ಗಳಷ್ಟು ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
23 ಜನರಿಗೆ ಹಣ ವರ್ಗಾವಣೆಯ ಅಪರಾಧಕ್ಕಾಗಿ ಶಿಕ್ಷೆ
ಮಾರ್ಚ್ 31, 2022 ರವರೆಗೆ ಇಡಿ ಒಟ್ಟು 992 ಮನಿ ಲಾಂಡರಿಂಗ್ ಚಾರ್ಜ್ಶೀಟ್ಗಳನ್ನು ಸಲ್ಲಿಸಿದೆ. ಈ ಪೈಕಿ 23 ಜನರನ್ನು ಅಕ್ರಮ ಹಣ ವರ್ಗಾವಣೆಯ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಕೇವಲ ಒಂದು ಪ್ರಕರಣದಲ್ಲಿ ಆರೋಪಿಗಳನ್ನು ಅರ್ಹತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಇದಕ್ಕೆ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
Recommended Video