ಭಾರತ ಲಾಕ್ ಡೌನ್ ಸಡಿಲಿಕೆ ಸುಳಿವು ಕೊಟ್ಟರಾ ಪ್ರಧಾನಮಂತ್ರಿ ಮೋದಿ?
ನವದೆಹಲಿ, ಮೇ.11: ನೊವೆಲ್ ಕೊರೊನಾ ವೈರಸ್ ಅಟ್ಟಹಾಸದ ವಿರುದ್ಧ ಹೋರಾಟಕ್ಕೆ ಭಾರತ ಲಾಕ್ ಡೌನ್ ಒಂದು ಅಸ್ತ್ರವಾಗಿದೆ. ಆದರೆ ಇದೊಂದು ಅಸ್ತ್ರವನ್ನೇ ನಿರಂತರವಾಗಿ ಬಳಸಲು ಆಗುವುದಿಲ್ಲ ಎಂದು ಪ್ರಧಾನನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಭಾರತ ಲಾಕ್ ಡೌನ್ ಘೋಷಣೆ ಬಳಿಕ ಐದನೇ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಆಯಾ ರಾಜ್ಯಗಳಲ್ಲಿರುವ ಪರಿಸ್ಥಿತಿಯ ಕುರಿತು ಲಿಖಿತ ರೂಪದಲ್ಲಿ ಮಾಹಿತಿ ನೀಡುವಂತೆ ಪ್ರಧಾನಿ ಮೋದಿ ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಪ್ರಮುಖ ಅಂಶಗಳು
ಇದರ ನಡುವೆ ಭಾರತದಲ್ಲಿ 68,789 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಈವರೆಗೂ 2,229 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. 21,266 ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇದರಲ್ಲಿ 111 ಮಂದಿ ವಿದೇಶಿಗರೂ ಇದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.
ಕಾರ್ಮಿಕರು ವಲಸೆ ಹೋಗುವುದು ಸಹಜ
ಭಾರತ ಲಾಕ್ ಡೌನ್ ನಂತಾ ಸಂದಿಗ್ಘ ಸ್ಥಿತಿಯಲ್ಲಿ ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳಲು ಬಯಸವುದು ಸಹಜ. ಆದರೆ ರಾಜ್ಯ ಸರ್ಕಾರಗಳು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ.
ಕಾರ್ಮಿಕರಿಗೆ ಕಡ್ಡಾಯ ಕ್ವಾರೆಂಟೈನ್ ಮತ್ತು ತಪಾಸಣೆ
ದೇಶದಲ್ಲಿ ವಲಸೆ ಕಾರ್ಮಿಕರಿಂದಲೇ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುವ ಅಪಾಯವಿದೆ. ಈ ಹಿನ್ನೆಲೆ ಎಲ್ಲ ವಲಸೆ ಕಾರ್ಮಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು. ಕಡ್ಡಾಯವಾಗಿ ವಲಸೆ ಕಾರ್ಮಿಕರನ್ನು ಕ್ವಾರೆಂಟೈನ್ ನಲ್ಲಿ ಇರಿಸಬೇಕು ಎಂದು ಕರೆ ನೀಡಿದ್ದಾರೆ.
ಸಾರ್ವಜನಿಕರಲ್ಲಿ ಕೊರೊನಾ ಬಗ್ಗೆ ಅರಿವು
ಕೊರೊನಾ ವೈರಸ್ ಹರಡುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಸೋಂಕಿನ ಬಗ್ಗೆ ತಿಳಿದುಕೊಳ್ಳುವುದರಿಂದ ದೇಶವು ಮಹಾಮಾರಿ ವಿರುದ್ಧ ಹೋರಾಡುವುದಕ್ಕೆ ಅನುಕೂಲವಾಗುತ್ತದೆ. ಕೊವಿಡ್-19 ವಿರುದ್ಧ ಹೋರಾಟದ ಮೇಲೆ ನಾವು ಹೆಚ್ಚಿನ ಲಕ್ಷ್ಯ ವಹಿಸಬೇಕಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ದೇಶದ ಮುಂದೆ ಎರಡು ಸವಾಲುಗಳಿವೆ ಎಂದ ಮೋದಿ
ಭಾರತೀಯರ ಎದುರಿಗೆ ಎರಡು ಸವಾಲುಗಳಿವೆ. ಒಂದು ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು. ಜೊತೆಗೆ ದೇಶದ ಆರ್ಥಿಕತೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ದುಡಿಯುವುದು ಆಗಿದೆ.