ವಿದ್ಯಾರ್ಥಿಗಳ ಜೀವ ಉಳಿಸಿ, ತಮ್ಮ ಪ್ರಾಣ ತ್ಯಾಗ ಮಾಡಿದ ಸಣ್ಣ ಕ್ಯಾಂಟೀನ್ನ ಪಾರ್ವತಿ ಆಂಟಿ: ದೆಹಲಿಯಲ್ಲಿ ಹೃದಯ ವಿದ್ರಾವಕ ಘಟನೆ
ದುರಂತದ ಸಮಯದಲ್ಲೂ ಇನ್ನೊಬ್ಬರ ಜೀವವನ್ನು ಉಳಿಸುವುದಕ್ಕೆ ಹೋಗಿದ್ದ ಪಾರ್ವತಿ ಆಂಟಿ ಎಂದೇ ಖ್ಯಾತಿಯಾಗಿದ್ದ ಕ್ಯಾಂಟೀನ್ ಮಹಿಳೆಯೊಬ್ಬರು ದುರಂತ ಅಂತ್ಯವಾಗಿದೆ. ಕಟ್ಟಡವೊಂದು ಕುಸಿಯವ ಸಂದರ್ಭದಲ್ಲಿಯೂ ಕ್ಯಾಂಟೀನ್ನ ಒಳಗಡೆ ಕುಳಿತಿದ್ದ ವಿದ್ಯಾರ್ಥಿಗಳನ್ನು ರಕ್ಷಿಸುವುದಕ್ಕೆ ಹೋಗಿ ಮೃತಪಟ್ಟಿದ್ದಾರೆ. ಈ ಹೃದಯ ವಿದ್ರಾವಕ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದಕ್ಷಿಣ ದೆಹಲಿಯ ಸಾಕೇತ್ ಮೆಟ್ರೋ ನಿಲ್ದಾಣದ ಸಮೀಪದ ಮೂರು ಅಂತಸ್ತಿನ ಕಟ್ಟಡ ಕುಸಿತವಾಗಿದ್ದು, ಈ ದುರಂತದಲ್ಲಿ ಒಟ್ಟು ಆರು ಜನ ಮೃತಪಟ್ಟಿದ್ದಾರೆ. ಈ ಕಟ್ಟಡ ದುರಂತದಲ್ಲಿ ವಿದ್ಯಾರ್ಥಿಗಳ ಜೀವವನ್ನು ಉಳಿಸುವುದಕ್ಕೆ ಹೋದ ಪಾರ್ವತಿ ಆಂಟಿ ಅವರು ಮೃತಪಟ್ಟಿದ್ದಾರೆ. ಈ ಪ್ರಕರಣದ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಕ್ರಮ ಕೈಗೊಂಡಿದ್ದು, ಕಟ್ಟಡ ವಿಭಾಗದ 2 ಎಂಜಿನಿಯರ್ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.
ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಕಟ್ಟಡ ಕುಸಿದು ಸಾವನ್ನಪ್ಪಿದ ಆರು ಜನರಲ್ಲಿ ಪಾರ್ವತಿ ಅವರು ಸಹ ಒಬ್ಬರಾಗಿದ್ದಾರೆ. ಈ ಭಾಗದಲ್ಲಿ ನೇಪಾಳದ ಮೂಲದ ಪಾರ್ವತಿ ಅವರು ಕ್ಯಾಂಟೀನ್ ನಡೆಸುತ್ತಿದ್ದರು. ಈ ಭಾಗದ ನೂರಾರು ವಿದ್ಯಾರ್ಥಿಗಳು ಮತ್ತು ಕಚೇರಿಗೆ ಹೋಗುವವರು ಅವರನ್ನು ಪ್ರೀತಿಯಿಂದ "ಪಾರ್ವತಿ ಆಂಟಿ" ಎಂದೇ ಕರೆಯುತ್ತಿದ್ದರು. ಅವರ ಸಾವು ಈ ಭಾಗದವರನ್ನು ಆಘಾತಕ್ಕೆ ದೂಡಿದೆ. ಅನೇಕರು ಈ ಕ್ಯಾಂಟೀನ್ಗೆ ಕೇವಲ ಊಟಕ್ಕೆ ಮಾತ್ರ ಬರುತ್ತಿರಲಿಲ್ಲ. ಆತ್ಮೀಯ ಬಾಂಧವ್ಯವನ್ನೂ ಸಹ ಬೆಳೆಸಿಕೊಂಡಿದ್ದರು. ಕ್ಯಾಂಟೀನ್ಗೆ ಬರುವವರನ್ನು ಹೆಸರು ಹಿಡಿದು ಕರೆಯುವಷ್ಟು ಪಾರ್ವತಿ ಆಂಟಿ ಅವರು ಚಿರಪರಿಚಿತರಾಗಿದ್ದರು. ಕುಸಿದ ಐದು ಅಂತಸ್ತಿನ ಕಟ್ಟಡದ ಪಕ್ಕದಲ್ಲಿ ಸಣ್ಣ ಕ್ಯಾಂಟೀನ್ವೊಂದನ್ನು ಪಾರ್ವತಿ ಅವರು ನಡೆಸುತ್ತಿದ್ದರು. ಸಾಧಾರಣ ಉಪಾಹಾರ ಗೃಹವು ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರರಿಗೆ ಜನಪ್ರಿಯ ಸ್ಥಳವಾಗಿತ್ತು. ಅನೇಕರು ಕ್ಯಾಂಟೀನ್ನಲ್ಲಿನ ಕಡಿಮೆ ಬೆಲೆಯ ಆಹಾರ, ಮನೆ ಶೈಲಿಯ ಊಟ ರುಚಿ ಸಿಗುತ್ತಿದ್ದರಿಂದ ಈ ಕ್ಯಾಂಟೀನ್ಗೆ ಬರುತ್ತಿದ್ದರು. ವರ್ಷಗಳಲ್ಲಿ, ಪಾರ್ವತಿ ಅವರು ಈ ಪ್ರದೇಶದಲ್ಲಿ ಚಿರಪರಿಚಿತರಾಗಿದ್ದರು. ಊಟ ಬಡಿಸುವುದು ಮಾತ್ರವಲ್ಲ. ಇಲ್ಲಿಗೆ ಊಟಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಗ್ರಾಹಕರ ಕಷ್ಟಗಳಿಗೂ ಪಾರ್ವತಿ ಅವರು ಕಿವಿಯಾಗಿದ್ದರು.

ಕ್ಯಾಂಟೀನ್ನ ಕೆಲಸಗಾರರೊಬ್ಬರ ಪ್ರಕಾರ, ಕಟ್ಟಡ ಇದ್ದಕ್ಕಿದ್ದಂತೆ ಕುಸಿದಾಗ ಸುಮಾರು 12 ರಿಂದ 13 ಜನರು ಕ್ಯಾಂಟೀನ್ನ ಒಳಗಡೆ ಇದ್ದರು. ಕಟ್ಟಡದ ಅವಶೇಷಗಳು ಕ್ಯಾಂಟೀನ್ ಮೇಲೆ ಬೀಳುವ ಸಂದರ್ಭದಲಿ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡರು. ತಕ್ಷಣವೇ ನಾಲ್ಕೈದು ಜನರನ್ನು ರಕ್ಷಿಸಲಾಯಿತು. ಪಾರ್ವತಿ ಮತ್ತು ಇತರರು ಅವಶೇಷಗಳ ಕೆಳಗೆ ಹೂತುಹೋಗಿದ್ದರು. ಅವರ ಸೋದರ ಮಾವ ಹರಿ ಪ್ರಸಾದ್ ಓಜಾ ಅವರ ಪ್ರಕಾರ, ನಮಗೆ ಇದ್ದಕ್ಕಿದ್ದಂತೆ ನೆಲ ಅಲುಗಾಡುತ್ತಿರುವ ಅನುಭವವಾಯಿತು, ತಕ್ಷಣ ಹೊರಗೆ ಧಾವಿಸಿದೆವು. ನಮ್ಮ ಪಕ್ಕದ ಕಟ್ಟಡ ಕುಸಿಯಲು ಪ್ರಾರಂಭಿಸುತ್ತಿರುವುದನ್ನು ನಾವು ನೋಡಿದ್ದೇವೆ ಮತ್ತು ಕ್ಯಾಂಟೀನ್ ಮೇಲೆಯೂ ಇದು ಬೀಳಬಹುದು ಎನ್ನುವುದು ಖಚಿತವಾಯಿತು. ಆದಾಗ್ಯೂ, ಸುರಕ್ಷಿತ ಸ್ಥಳಕ್ಕೆ ತಲುಪಿದ ನಂತರವೂ, ಪಾರ್ವತಿ ಕ್ಯಾಂಟೀನ್ಗೆ ಓಡಿ ಒಳಗಿನ ವಿದ್ಯಾರ್ಥಿಗಳನ್ನು ಎಚ್ಚರಿಸಲು ಮತ್ತು ಅವರನ್ನು ಸ್ಥಳಾಂತರಿಸಲು ಸಹಾಯ ಮಾಡಿದರು. ಅವರು ವಿದ್ಯಾರ್ಥಿಗಳ ಜೀವವನ್ನು ಉಳಿಸಲು ಬಯಸಿದ್ದರು. ಅವರನ್ನು ಹೊರಗೆ ಕರೆದುಕೊಂಡು ಬರುವುದಕ್ಕೆ ಮತ್ತೆ ಕ್ಯಾಂಟೀನ್ ಒಳಗೆ ಹೋದರು ಆದರೆ ಅವರು ಕ್ಯಾಂಟೀನ್ನಿಂದ ಹಿಂದಿರುಗಲಿಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications