ದೆಹಲಿ ಮಳೆ: ಸುಪ್ರೀಂ ಕೋರ್ಟ್ ಆವರಣದವರೆಗೂ ಬಂದ ಯುಮುನಾ ನದಿ ಪ್ರವಾಹ
ನವದೆಹಲಿ ಜುಲೈ 15: ದೇಶದ ಹಲವೆಡೆ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯಿಂದ ಹೆಚ್ಚು ಬಾದಿತವಾಗಿರುವ ರಾಜ್ಯಗಳಲ್ಲಿ ದೆಹಲಿ ಕೂಡ ಒಂದು. ಇಲ್ಲಿ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು ಮಾತ್ರವಲ್ಲದೆ ಸುಪ್ರೀಂ ಕೋರ್ಟ್ ಆವರಣ ಕೂಡ ಜಲಯಾರ ಬಿಟ್ಟಿಲ್ಲ.
ಯಮುನಾ ನದಿಯ ನೀರಿನ ಮಟ್ಟ ನಿಧಾನವಾಗಿ ಕಡಿಮೆಯಾಗುತ್ತಿರುವಂತೆಯೇ ದೆಹಲಿಯ ಹಲವಾರು ಪ್ರದೇಶಗಳು ಇನ್ನೂ ಜಲಾವೃತವಾಗಿವೆ. ಉಕ್ಕಿ ಹರಿಯುತ್ತಿರುವ ಯಮುನಾ ನದಿಯ ನೀರು ರಾಷ್ಟ್ರ ರಾಜಧಾನಿಯನ್ನು ಜಲಾವೃತಗೊಳಿಸಿದ್ದರಿಂದ ದೆಹಲಿ ಸರ್ಕಾರ ನಿನ್ನೆ ಶಾಲೆಗಳು, ಕಾಲೇಜುಗಳಿಗೆ ಬಂದ್ ಘೋಷಿಸಿದೆ.

ಬೆಳಿಗ್ಗೆ 6 ಗಂಟೆಗೆ ಯಮುನಾ ನೀರಿನ ಮಟ್ಟ 208.46 ಮೀಟರ್ಗಳಷ್ಟಿತ್ತು. ನಿನ್ನೆ ರಾತ್ರಿ ಇದ್ದ 208.66 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಇಂದು ನೀರಿನ ಮಟ್ಟ ಕುಸಿಯಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ 208.30 ಮೀಟರ್ ತಲುಪಬಹುದು ಎಂದು ಕೇಂದ್ರ ಜಲ ಆಯೋಗ ಮುನ್ಸೂಚನೆ ನೀಡಿದೆ.
ರಾಜ್ಘಾಟ್ನಲ್ಲಿರುವ ಪ್ರದೇಶಗಳು ಇನ್ನೂ ಮುಳುಗಡೆಯಾಗಿದ್ದು ಸಾಕಷ್ಟು ಹಾನಿಯನ್ನು ಅನುಭವಿಸಿದೆ ಎಂದು ದೆಹಲಿ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ ತಿಳಿಸಿದೆ. ಇದು ಈಗಾಗಲೇ ಭೀಕರ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ.
ನಗರದ ಮಧ್ಯ ಭಾಗದಲ್ಲಿರುವ ತಿಲಕ್ ಮಾರ್ಗ್ ಪ್ರದೇಶದಲ್ಲಿರುವ ಸುಪ್ರಿಂ ಕೋರ್ಟ್ಗೂ ಪ್ರವಾಹದ ನೀರು ತಲುಪಿದೆ. ಸಮಸ್ಯೆ ಬಗೆಹರಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸರ್ಕಾರ ಸೂಚಿಸಿದೆ ಎಂದು ದೆಹಲಿ ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ಇದರಿಂದಾಗಿ ರಾಷ್ಟ್ರ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಕಡಿತವಾಗಲಿದೆ ಎಂದು ದೆಹಲಿ ಅಧಿಕಾರಿಗಳು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ನಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿ ದೆಹಲಿಯ ಕೆಲವು ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ದೂರವಾಣಿ ಸಂಭಾಷಣೆಯ ಸಮಯದಲ್ಲಿ, ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ಮೋದಿಯವರಿಗೆ ಪ್ರವಾಹದಂತಹ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಮುಂದಿನ 24 ಗಂಟೆಗಳಲ್ಲಿ ಯಮುನಾದಲ್ಲಿ ನೀರಿನ ಮಟ್ಟ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ಇದರಿಂದಾಗಿ ಅನಿವಾರ್ಯವಲ್ಲದ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಭಾನುವಾರದವರೆಗೆ ಮುಚ್ಚುವಂತೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುವಾರ ನಿರ್ದೇಶನ ನೀಡಿದೆ.
ಪಂಜಾಬ್, ಹರಿಯಾಣ ರಾಜ್ಯಗಳಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ಪರಿಹಾರ ಕಾರ್ಯ ಭರದಿಂದ ಸಾಗುತ್ತಿದೆ. ಹರಿಯಾಣ ಸರ್ಕಾರದ ಅಂಕಿಅಂಶಗಳ ಪ್ರಕಾರ, ಮಳೆ ಸಂಬಂಧಿತ ಘಟನೆಗಳಲ್ಲಿ ಸಾವಿನ ಸಂಖ್ಯೆ 16 ಕ್ಕೆ ಏರಿದೆ. ಇದಕ್ಕೂ ಮೊದಲು, ರಾಜ್ಯದಲ್ಲಿ 10 ಸಾವುಗಳು ಮತ್ತು ನೆರೆಯ ಪಂಜಾಬ್ನಿಂದ 11 ಸಾವುಗಳು ವರದಿಯಾಗಿವೆ.
ಕಳೆದ ಮೂರು ದಿನಗಳಿಂದ ಹವಾಮಾನ ಸುಧಾರಿಸಿದ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳು ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಒಟ್ಟಾರೆಯಾಗಿ, ಪಂಜಾಬ್ನಲ್ಲಿ 14 ಮತ್ತು ಹರಿಯಾಣದಲ್ಲಿ ಏಳು ಜಿಲ್ಲೆಗಳು ಬಾಧಿತವಾಗಿವೆ.












Click it and Unblock the Notifications