ದೆಹಲಿ ಕೊಲೆ ಪ್ರಕರಣ: ಅಫ್ತಾಬ್ ಕೊಚ್ಚಿ ಸಾಯಿಸುತ್ತಾನೆ ಎಂದು 2 ವರ್ಷಗಳ ಹಿಂದೆಯೇ ಆತಂಕಗೊಂಡಿದ್ದ ಶ್ರದ್ಧಾ ವಾಕರ್
ದೆಹಲಿ ನವೆಂಬರ್ 23: ಅಫ್ತಾಬ್ ಪೂನಾವಾಲಾ ಎಂಬಾತನಿಂದ ಹತ್ಯೆಗೀಡಾದ ಶ್ರದ್ಧಾ ವಾಕರ್ ಎರಡು ವರ್ಷಗಳ ಹಿಂದೆ ತನ್ನ ಸಾವಿನ ಭಯವನ್ನು ಹೊಂದಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಇಪ್ಪತ್ತೆಂಟರ ಹರೆಯದ ಅಫ್ತಾಬ್ ಪೂನಾವಾಲಾ ತನ್ನ ಸಂಗಾತಿ ವಾಕರ್ನನ್ನು ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ 300 ಲೀಟರ್ ಫ್ರಿಡ್ಜ್ನಲ್ಲಿ ಇರಿಸಿದ್ದನು. ಮೇ ತಿಂಗಳಲ್ಲಿ ಶ್ರದ್ಧಾಳನ್ನು ಅಫ್ತಾಬ್ ಕೊಲೆ ಮಾಡಿದ್ದನು.
2020 ರಲ್ಲಿ ಪೊಲೀಸರಿಗೆ ಬರೆದ ಪತ್ರದಲ್ಲಿ, ಅಫ್ತಾಬ್ ತನ್ನನ್ನು ಕೊಂದು ದೇಹವನ್ನು ತುಂಡು ಮಾಡುತ್ತಾನೆ ಎಂಬ ಮುನ್ಸೂಚನೆಯನ್ನು ಶ್ರದ್ಧಾ ನೀಡಿದ್ದಳು. ಈ ಅವಧಿಯಲ್ಲಿಯೇ ಆರೋಪಿ ಶ್ರದ್ಧಾಳನ್ನು ಥಳಿಸಲು ಆರಂಭಿಸಿದ್ದು, ಆಕೆಯ ದೇಹದಾದ್ಯಂತ ರಕ್ತಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂಡಿಯಾ ಟಿವಿಗೆ ದೊರೆ ಒಂದು ಪುಟದ ಪತ್ರದಲ್ಲಿ ಶ್ರದ್ಧಾ ಅಫ್ತಾಬ್ ವಿರುದ್ಧ ದೂರಿದ್ದಾರೆ. "ಅಫ್ತಾಬ್ ನನ್ನನ್ನು ನಿಂದಿಸುತ್ತಿದ್ದಾನೆ ಮತ್ತು ಥಳಿಸುತ್ತಿದ್ದಾನೆ. ಇಂದು (ನವೆಂಬರ್ 23, 2020) ನನ್ನನ್ನು ಕೊಲ್ಲಲು ಯತ್ನಿಸಿದ್ದಾನೆ ಮತ್ತು ನನ್ನನ್ನು ತುಂಡುಗಳಾಗಿ ಕತ್ತರಿಸಿ ಎಸೆಯುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ" ಎಂದು ಶ್ರದ್ಧಾ ಈ ಹಿಂದೆ ದೂರಿದ್ದಳು. ಮಾತ್ರವಲ್ಲದೆ ಶ್ರದ್ಧಾ ಆಗಾಗ್ಗೆ ಅಫ್ತಾಬ್ನಿಂದ ಜೀವ ಭಯಪಡುತ್ತಿದ್ದಳು ಎಂದು ಆಕೆಯ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ.
ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ ಅಫ್ತಾಬ್ ಪೊಲೀಸ್ ಕಸ್ಟಡಿ ವಿಸ್ತರಣೆ
ಆದರೆ ಅಫ್ತಾಬ್ ಅವರು ಆ ಕ್ಷಣದ ಕೋಪದಲ್ಲಿ ವರ್ತಿಸಿದ್ದಾರೆ. ಇದು ಉದ್ದೇಶಪೂರ್ವಕ ಅಲ್ಲ ಎಂದು ಆರೋಪಿಗಳನ್ನು ಪ್ರತಿನಿಧಿಸುವ ವಕೀಲ ಅಬಿನಾಶ್ ಕುಮಾರ್ ಹೇಳಿದ್ದಾರೆ. ಪೂನಾವಾಲಾ ಅವರೊಂದಿಗೆ ಮಾತನಾಡಿದ ನಂತರ ಕುಮಾರ್ ಅವರು "ವಾಕರ್ ಅವರನ್ನು ಕೊಂದಿರುವುದಾಗಿ ನ್ಯಾಯಾಲಯದಲ್ಲಿ ಅಫ್ತಾಬ್ ಎಂದಿಗೂ ಒಪ್ಪಿಕೊಂಡಿಲ್ಲ" ಎಂದು ಹೇಳಿದ್ದಾರೆ. ಇದರಿಂದ ಪ್ರಕರಣದ ಗಂಭೀರತೆಯನ್ನು ಕಡಿಮೆ ಮಾಡುವ ಕೆಲಸಗಳು ಆಗುತ್ತಿವೆ ಎಂದು ಶ್ರದ್ಧಾ ತಂದೆ ದೂರಿದ್ದಾರೆ.
ವಕೀಯಲ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರದ್ಧಾ ತಂದೆ,' ಅಫ್ತಾಬ್ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿಲ್ಲವಂತಾದರೆ, ಈ ಹಿಂದೆ ಶ್ರದ್ಧಾ ಮಾಡಿದ ಆರೋಪಗಳೇನು? ಆತ ಕೋಪದಿಂದ ಕೊಲೆ ಮಾಡಿದ್ದರೆ, ಕೋಪ ತಣ್ಣಗಾದ ಮೇಲೆ ಪ್ರಕರಣ ಯಾಕೆ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದ? ಆಕೆಯ ದೇಹವನ್ನು ತುಂಡಾಗಿಸಲು ಕಾರಣವೇನು? ಮಾತ್ರವಲ್ಲದೇ ಆತ ಆಕೆಯ ದೇಹದ ತುಂಡುಗಳನ್ನು ಮನಬಂದಂತೆ ಎಸೆದಿದ್ದಾನೆ' ಎಂದು ಆಕ್ರೋಶಗೊಂಡರು. ಇದೊಂದು ಉದ್ದೇಶಪೂರ್ವಕವೋ ಉದ್ದೇಶ ರಹಿತವೋ ಆತ ನನ್ನ ಮಗಳನ್ನು ಕೊಂದಿದ್ದಾನೆ. ಕ್ರೂರವಾಗಿ ಹಿಂಸಿಸಿ ಕೊಂದಿದ್ದಾನೆ. ಆತನಿಗೆ ಶಿಕ್ಷೆ ಆಗಲೇಬೇಕು ಎಂದು ಶ್ರದ್ಧಾ ತಂದೆ ದೂರಿದ್ದಾರೆ.
ಇಬ್ಬರೂ ವಾಸಿಸುತ್ತಿದ್ದ ಫ್ಲಾಟ್ನಲ್ಲಿ ರಕ್ತದ ಕಲೆಗಳು ಸೇರಿದಂತೆ ತನಿಖಾಧಿಕಾರಿಗಳು ಹೆಚ್ಚಿನ ಪುರಾವೆಗಳನ್ನು ಪತ್ತೆ ಹಚ್ಚಿದ್ದಾರೆ. ನಗರ ನ್ಯಾಯಾಲಯ ದೆಹಲಿ ಪೊಲೀಸರಿಗೆ ಅನುಮತಿ ನೀಡಿದ ನಂತರ ಅಫ್ತಾಬ್ ಗೆ ಮಂಗಳವಾರ ಸಂಜೆ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಯಿತು. ಪೂನಾವಾಲಾಗೆ ಮಂಗಳವಾರ ದೆಹಲಿ ನ್ಯಾಯಾಲಯ ಪೊಲೀಸ್ ಕಸ್ಟಡಿಯನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಿದೆ.