ಜಾಕಿರ್ ನಾಯಕ್ ಅರ್ಜಿ ತಿರಸ್ಕರಿಸಿದ ಸುಪ್ರೀಂ
ಕಳೆದ ವರ್ಷ ನವೆಂಬರ್ ನಲ್ಲಿ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಐಆರ್ ಎಫ್) ವಿರುದ್ಧ ನಿಷೇಧ ಹೇರಿದ್ದ ಕೇಂದ್ರ ಸರ್ಕಾರ; ಸರ್ಕಾರದ ಆದೇಶದ ಪ್ರತಿಯಲ್ಲಿ ನಿರ್ದಿಷ್ಟ ಕಾರಣ ಹೇಳಿಲ್ಲವೆಂದು ನ್ಯಾಯಾಲಯದಲ್ಲಿ ಸಂಘಟನೆ ಹೆಸರಿನಲ್ಲಿ ದೂರು ಸಲ್ಲಿಸಿದ್ದ
ನವದೆಹಲಿ, ಮಾರ್ಚ್ 16: ತಮ್ಮ ಸಂಘಟನೆಯಾದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ನನ್ನು (ಐಆರ್ ಎಫ್) ನಿಷೇಧಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಇಸ್ಲಾಂ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಗೆ ಹಿನ್ನಡೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ತೀರ್ಪು ನೀಡಿರುವ ಹೈಕೋರ್ಟ್, ''ಐಆರ್ ಎಫ್ ಸಂಘಟನೆಯು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥ ಕೆಲಸಗಳನ್ನು ಮಾಡುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ '' ಎಂದಿದೆ.[ಮುಸ್ಲಿಂ ಯುವತಿಯ ಬಹಿರಂಗ ಹಾಡುಗಾರಿಕೆ ವಿರುದ್ಧ ಫತ್ವಾ]
ಅಲ್ಲದೆ, ತನ್ನಲ್ಲಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿಯೇ, ''ಕೇಂದ್ರ ಸರ್ಕಾರವು ಈ ಸಂಘಟನೆಯನ್ನು ನಿಷೇಧಿಸಿದೆ ಭಾರತದ ಐಕ್ಯತೆ ಹಾಗೂ ಭದ್ರತೆಯ ದೃಷ್ಟಿಯಿಂದ ಐಆರ್ ಎಫ್ ಸಂಘಟನೆಯನ್ನು ನಿಷೇಧಿಸಿರುವುದು ಸರಿಯಾಗಿದೆ'' ಎಂದು ಖಡಾಖಂಡಿತವಾಗಿ ಹೇಳಿದೆ.[ಸುಹಾನಾ ಸೈಯದ್ ಭಕ್ತಿ ಗೀತೆ ವಿವಾದ]
ಕಳೆದ ವರ್ಷ ನವೆಂಬರ್ 17ರಂದು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ಐಆರ್ ಎಫ್ ಮೇಲೆ ತಾತ್ಕಾಲಿಕ ನಿಷೇಧ ಹೇರಿ ಆದೇಶ ಜಾರಿಗೊಳಿಸಿತ್ತು. ಅಲ್ಲದೆ, ಆದೇಶ ಪ್ರತಿಯಲ್ಲಿ ಐಆರ್ ಎಫ್ ಸಂಘಟನೆಯು, ಭಾರತದ ಭದ್ರತೆಗೆ ಧಕ್ಕೆಯಾಗುವ ನಿಟ್ಟಿನಲ್ಲಿ ಪ್ರಚೋದಿಸುತ್ತಿದೆ. ಹಾಗಾಗಿ, ಸಂಘಟನೆಯ ಮೇಲೆ ನಿಷೇಧ ಹೇರಲಾಗಿದೆ ಎಂದೂ ಸ್ಪಷ್ಟವಾಗಿ ಹೇಳಿತ್ತು.
ಆದರೆ, ಸರ್ಕಾರದ ನಿರ್ಧಾರದ ವಿರುದ್ಧ ಐಆರ್ ಎಫ್ ಹೆಸರಿನಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದ ಜಾಕಿರ್ ಹುಸೇನ್, ನಿಷೇಧದ ಆದೇಶವಿರುವ ಪ್ರತಿಯಲ್ಲಿ ನಿಷೇಧದ ಹಿಂದಿನ ಕಾರಣವನ್ನು ಸ್ಪಷ್ಟವಾಗಿ ತಿಳಿಸಿಲ್ಲ ಎಂದು ಅನೇರವಾಗಿ ವಾದಿಸಿದ್ದರು.