ಆಪ್ ತೊರೆಯುವಂತೆ ಒತ್ತಡ; ಡಿಸಿಎಂ ಸಿಸೋಡಿಯಾ ಆರೋಪ ತಳ್ಳಿ ಹಾಕಿದ ಸಿಬಿಐ!
ನವದೆಹಲಿ, ಅಕ್ಟೋಬರ್ 17: ಆಮ್ ಆದ್ಮಿ ಪಕ್ಷವನ್ನು ತೊರೆಯುವಂತೆ ಒತ್ತಡ ಹೇರಲಾಗಿದ್ದು, ದೆಹಲಿ ಮುಖ್ಯಮಂತ್ರಿ ಸ್ಥಾನವನ್ನು ನೀಡುವುದಾಗಿ ಆಫರ್ ಕೊಟ್ಟಿದ್ದರು ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ)ವು ಮನೀಶ್ ಸಿಸೋಡಿಯಾ ಅವರನ್ನು ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಈ ವಿಚಾರಣೆ ನಂತರ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಸೋಡಿಯಾ, ''ಬಿಜೆಪಿ 1000 ಕೋಟಿ ಅಬಕಾರಿ ಹಗರಣ ನಡೆದಿದೆ ಎಂದು ಹೇಳುತ್ತಿದೆ. ಸಿಬಿಐ ಕಚೇರಿಯಲ್ಲಿ ಯಾವುದೇ ಹಗರಣ ನಡೆದಿಲ್ಲ ಮತ್ತು ಇಡೀ ಪ್ರಕರಣವೇ ನಕಲಿ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ದೆಹಲಿಯಲ್ಲಿ ಬಿಜೆಪಿಯ 'ಆಪರೇಷನ್ ಕಮಲ'ವನ್ನು ಯಶಸ್ವಿಗೊಳಿಸಲು ನನ್ನ ವಿರುದ್ಧದ ನಕಲಿ ಪ್ರಕರಣದ ಷಡ್ಯಂತ್ರವನ್ನು ಮಾಡಲಾಗಿದೆ," ಎಂದು ಮನೀಶ್ ಸಿಸೋಡಿಯಾ ಆರೋಪಿಸಿದರು.

ಆಪ್ ತೊರೆಯುವಂತೆ ಒತ್ತಡ:
ಎಎಪಿ ತೊರೆಯುವಂತೆ ಒತ್ತಡ ಹೇರಲಾಗಿದೆ ಎಂದು ಮನೀಶ್ ಸಿಸೋಡಿಯಾ ಆರೋಪಿಸಿದರು. "ಎಎಪಿ ತೊರೆಯುವಂತೆ ನನ್ನ ಮೇಲೆ ಒತ್ತಡ ಹೇರಲಾಯಿತು. ನನಗೆ ದೆಹಲಿ ಸಿಎಂ ಸ್ಥಾನ ಬೇಕೋ ಅಥವಾ ಜೈಲು ಶಿಕ್ಷೆಯನ್ನು ಎದುರಿಸುತ್ತಿಯೋ," ಎಂದು ಬೆದರಿಸಲಾಗಿದೆ ಎಂದು ದೂಷಿಸಿದರು.
ಮನೀಶ್ ಸಿಸೋಡಿಯಾ ಆರೋಪ ತಳ್ಳಿ ಹಾಕಿದ ಸಿಬಿಐ:
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಗಳನ್ನು ಸಿಬಿಐ ತಳ್ಳಿಹಾಕಿತು. ಅವರನ್ನು ವೃತ್ತಿಪರ ಮತ್ತು ಕಾನೂನು ರೀತಿ ಪ್ರಶ್ನಿಸಲಾಗಿದೆ. ಎಫ್ಐಆರ್ನಲ್ಲಿ ಇರುವ ಆರೋಪಗಳು ಮತ್ತು ತನಿಖೆಯ ಸಂದರ್ಭದಲ್ಲಿ ಇದುವರೆಗೆ ಸಂಗ್ರಹಿಸಲಾದ ಸಾಕ್ಷ್ಯಗಳ ಬಗ್ಗೆ ಸಿಸೋಡಿಯಾ ಅವರನ್ನು ಕಟ್ಟುನಿಟ್ಟಾಗಿ ಪ್ರಶ್ನಿಸಲಾಯಿತು ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ. "ಅವರ ಹೇಳಿಕೆಯನ್ನು ಸರಿಯಾದ ಸಮಯದಲ್ಲಿ ಪರಿಶೀಲಿಸಲಾಗುವುದು ಮತ್ತು ತನಿಖೆಯ ಅಗತ್ಯತೆಗಳ ಪ್ರಕಾರ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು" ಎಂದು ಸಂಸ್ಥೆ ಹೇಳಿದೆ.

ಸಿಬಿಐ ಅಧಿಕಾರಿಗಳ ಸ್ಪಷ್ಟನೆಗೆ ಕಾರಣವೇನು?
ಸಿಬಿಐ ಕಚೇರಿಯಿಂದ ಹೊರಬಂದ ನಂತರ, ಸಿಸೋಡಿಯಾ ಅವರು ತಮ್ಮ ವಿಚಾರಣೆಯ ಸಮಯದಲ್ಲಿ, ತಮ್ಮ ರಾಜಕೀಯ ಪಕ್ಷವನ್ನು ತೊರೆಯುವಂತೆ ಬೆದರಿಕೆ ಹಾಕಿದ್ದಾರೆ ಎಂಬ ಹೇಳಿಕೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಈ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. "ಸಿಬಿಐ ಈ ಆರೋಪಗಳನ್ನು ಬಲವಾಗಿ ನಿರಾಕರಿಸುತ್ತದೆ. ಎಫ್ಐಆರ್ನಲ್ಲಿ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕಾನೂನು ರೀತಿಯಲ್ಲಿ ಕಟ್ಟುನಿಟ್ಟಾಗಿ ವಿಚಾರಣೆ ನಡೆಸಲಾಗಿದೆ ಎಂದು ಪುನರುಚ್ಚರಿಸುತ್ತದೆ. ಈ ಪ್ರಕರಣದ ತನಿಖೆಯು ಕಾನೂನಿನ ಪ್ರಕಾರ ಮುಂದುವರಿಯುತ್ತದೆ," ಎಂದು ಅದು ಹೇಳಿದೆ.












Click it and Unblock the Notifications