Delhi Assembly Election 2025: ದೆಹಲಿ ಚುನಾವಣೆಗೆ ಭರ್ಜರಿ ಸಿದ್ಧತೆ, ಹೈ - ಅಲರ್ಟ್!
Delhi Assembly Election 2025: ದೆಹಲಿ ವಿಧಾನಸಭೆ ಚುನಾವಣೆ ನಾಳೆ ಫೆಬ್ರವರಿ 5ರಂದು ನಡೆಯಲಿದೆ. ದೆಹಲಿ ವಿಧಾನಸಭೆ ಚುನಾವಣೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು. ನಾಳೆ ದೆಹಲಿ ಮತದಾರರು ರಾಜಕೀಯ ಪಕ್ಷಗಳ ಹಾಗೂ ಮುಖಂಡರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ನಾಳೆ ಮತದಾನ ನಡೆಯಲಿದ್ದು, ಬಹಿರಂಗ ಚುನಾವಣೆ ಪ್ರಚಾರಗಳು ಸೋಮವಾರ ಸಂಜೆ 6ಕ್ಕೆ ಮುಕ್ತಾಯವಾಗಿದೆ.
ದೆಹಲಿ ಪೊಲೀಸರು ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದಾರೆ. ದೆಹಲಿಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಸಾಮಾನ್ಯವಾಗಿಯೇ ಬಿಗಿ ಭದ್ರತಾ ವ್ಯವಸ್ಥೆ ಇರುತ್ತದೆ. ಇದೀಗ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಳ ಮಾಡಲಾಗಿದೆ. ದೆಹಲಿಯಲ್ಲಿ ಚುನಾವಣೆಯ ಕೊನೆ ಕ್ಷಣದ ಸಿದ್ಧತೆ ಹೇಗಿದೆ ಎನ್ನುವ ವಿವರ ಹಾಗೂ ಎಲ್ಲಾ ಪಕ್ಷಗಳಿಗೂ ಇರುವ ಸವಾಲಿನ ವಿವರ ಇಲ್ಲಿದೆ.

ದೆಹಲಿ ವಿಧಾನಸಭೆ ಚುನಾವಣೆ 2025ಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಪ್ಯಾರಾ ಮಿಲಿಟರಿ ಪಡೆಗಳು, ಪೊಲೀಸ್ ಸಿಬ್ಬಂದಿ, ಸಿಸಿಟಿವಿ ಕ್ಯಾಮೆರಾ, ಎಐ ಸುಧಾರಿತ ಕ್ಯಾಮೆರಾಗಳು, ಡ್ರೋನ್ ಸೇರಿದಂತೆ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದೆಹಲಿ ಚುನಾವಣೆಗಾಗಿ 35,626 ಪೊಲೀಸ್ ಸಿಬ್ಬಂದಿ ಹಾಗೂ ತರಬೇತಿ ಪಡೆಯದ 6,525 ವಿಶೇಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಕ್ರಮಗಳಿಗೆ ತಡೆ: ಇನ್ನು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮವನ್ನು ತಡೆಯಲಾಗುತ್ತಿದೆ. ಜನವರಿ 7ರಿಂದ ಫೆಬ್ರವರಿ 2ರ ವರೆಗೆ ದೆಹಲಿಯಲ್ಲಿ 11.23 ಕೋಟಿ ರೂಪಾಯಿ ಮೌಲ್ಯದ ನಗದು ಹಾಗೂ 3.59 ಕೋಟಿ ರೂಪಾಯಿ ಮೌಲ್ಯದ ಬರೋಬ್ಬರಿ 1,08,258 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದ ಮೇಲೆ ದೆಹಲಿಯಲ್ಲಿ 1,315 ಎಫ್ಐಆರ್ಗಳನ್ನು ದಾಖಲಿಸಿಕೊಳ್ಳಲಾಗಿದ್ದು. ಚುನಾವಣಾ ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇಲೆ 1,353 ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಎಎಪಿ ಭದ್ರಕೋಟೆಗೆ ಬಿಜೆಪಿ ?
ದೆಹಲಿಯಲ್ಲಿ ಕಳೆದ 10 ವರ್ಷಗಳಿಂದ ಎಎಪಿ ಆಡಳಿತದಲ್ಲಿ ಇದೆ. ಆದರೆ ಈ ಬಾರಿ ದೆಹಲಿಯಲ್ಲಿ ಎಎಪಿ ಪರವಾದ ಅಲೆ ಕಳೆದ ಬಾರಿಯಂತೆ ಇಲ್ಲ. ದೆಹಲಿಯಲ್ಲಿ ಮೊದಲ ಹಂತದಲ್ಲಿ ಹಲವು ಮಹತ್ವದ ಯೋಜನೆಗಳನ್ನು ಆಮ್ ಆದ್ಮಿ ಪಾರ್ಟಿ ಜಾರಿ ಮಾಡಿತ್ತು. ಅಲ್ಲದೆ ದೆಹಲಿ ಶಾಲೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ ಕೊಟ್ಟಿತ್ತು. ಹೊಸ ಯೋಜನೆಗಳನ್ನು ಜಾರಿ ಮಾಡುವುದಕ್ಕೆ ಎಎಪಿಗೆ ಸಮಯ ಸಿಕ್ಕಿತ್ತು. ಆದರೆ, ಈ ಬಾರಿ ಮದ್ಯ ನೀತಿ ಹಗರಣದ ವಿಚಾರದಲ್ಲಿ ಎಎಪಿಯನ್ನು ಕಟ್ಟಿ ಹಾಕುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.
ಇದೇ ಕಾರಣಕ್ಕೆ ಎಎಪಿಯ ಭದ್ರಕೋಟೆಯಾಗಿರುವ ದೆಹಲಿಗೆ ಬಿಜೆಪಿ ಈ ಬಾರಿ ನುಗ್ಗಲಿದೆಯೇ ಎನ್ನುವ ಚರ್ಚೆ ಜೋರಾಗಿದೆ. ಅದು ಮಾತ್ರವಲ್ಲ ಈ ಬಾರಿ ಬಿಜೆಪಿ ಕಳೆದ ಒಂದು ವರ್ಷದಿಂದಲೇ ದೆಹಲಿ ಚುನಾವಣೆ ಗೆಲ್ಲುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದೆ. ದೆಹಲಿಯಲ್ಲಿ ಆರ್ಎಸ್ಎಸ್ ಹಾಗೂ ಬಿಜೆಪಿ ಸೇರಿ ಸಣ್ಣ ಸಣ್ಣ ಸಭೆಗಳನ್ನು ನಡೆಸಿವೆ. ಅಲ್ಲದೆ ಎಎಪಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಇದೇ ಕಾರಣಕ್ಕೆ ಈ ಪಕ್ಷದ ಘಟಾನುಘಟಿ ನಾಯಕರು ಜೈಲು ಸೇರಿದ್ದರು ಎಂದು ಹೇಳಿದೆ. ಇದೆಲ್ಲ ಬಿಜೆಪಿಗೆ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸಿಂಪತಿ ಸಹ ವರ್ಕ್ ಆಗಲಿದೆ ಎನ್ನಲಾಗಿದೆ.












Click it and Unblock the Notifications