ಅಂಗಡಿ ದೋಚಿದ ಕಳ್ಳ, ಅಧಾರ್ ಕಾರ್ಡ್ ಬಿಟ್ಟುಹೋಗಿ ಸಿಕ್ಕಿಬಿದ್ದ!
ಡೆಹ್ರಾಡೂನ್, ಜುಲೈ 19: ಅಂಗಡಿಯೊಂದಕ್ಕೆ ಕನ್ನ ಹಾಕಿದ್ದ ಕಿಡಿಗೇಡಿ ಕಳ್ಳನೊಬ್ಬ ಅಲ್ಲಿದ್ದ ಎಲ್ಲ ವಸ್ತುಗಳನ್ನೂ ದೋಚಿದ ಖುಷಿಯಿಂದ ಹೊರಟುಹೋಗಿದ್ದ. ಕಳ್ಳತನ ಮಾಡಿ ಸುಮಾರು 20 ದಿನಗಳ ಬಳಿಕ ಪೊಲೀಸರು ತನ್ನನ್ನು ಹುಡುಕಿಕೊಂಡು ಬಂದಾಗ ಕಂಗಾಲಾದ. ಆತನ ಬಂಧನಕ್ಕೆ ಕಾರಣವಾಗಿದ್ದು ಆಧಾರ್ ಕಾರ್ಡ್!
ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನೀರಜ್ ಎಂಬಾತ ಜೂನ್ ತಿಂಗಳಲ್ಲಿ ಅನಿಲ್ ಸೇಥಿ ಎಂಬುವವರ ಅಂಗಡಿಗೆ ಮೇಲ್ಭಾವಣಿ ಒಡೆದು ಕನ್ನ ಹಾಕಿದ್ದ. ಆತನ ಮುಖ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದರೂ ಆತನನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಕಳ್ಳತನವಾದ ವಸ್ತು ಮತ್ತು ಹಣ ವಾಪಸ್ ಸಿಗುವುದು ಅನುಮಾನ ಎಂದೇ ಅಂಗಡಿ ಮಾಲೀಕರು ಭಾವಿಸಿದ್ದರು.

ಬುಧವಾರ ಸೇಥಿ ಅವರು ಅಂಗಡಿಯ ಛಾವಣಿಯನ್ನು ಸ್ವಚ್ಛಗೊಳಿಸಲು ಮುಂದಾದರು. ಆಗ ಅಲ್ಲಿ ಬಿದ್ದಿದ್ದ ಪರ್ಸ್ ಒಂದು ಅವರ ಕಣ್ಣಿಗೆ ಗೋಚರಿಸಿತು. ಅದರೊಳಗೆ ನೀರಜ್ನ ಆಧಾರ್ ಕಾರ್ಡ್ ಪತ್ತೆಯಾಯಿತು. ಅದು ತಮ್ಮ ಅಂಗಡಿ ದೋಚಿದ್ದವನ ಕುರಿತಾದ ದೊಡ್ಡ ಸುಳಿವು ಎಂಬುದು ಅವರಿಗೆ ಗೊತ್ತಾಯಿತು. ಕೂಡಲೇ ಪೊಲೀಸರಿಗೆ ಅದನ್ನು ಒಪ್ಪಿಸಿದರು.
ಪೊಲೀಸರೂ ತಡಮಾಡದೆ, ಆಧಾರ್ ಕಾರ್ಡ್ನಲ್ಲಿದ್ದ ವಿಳಾಸದ ಮೇಲೆ ದಾಳಿ ನಡೆಸಿದರು. ಆದರೆ, ಆತ ಆ ವಿಳಾಸದಲ್ಲಿ ವಾಸಿಸುತ್ತಿರಲಿಲ್ಲ. ಆಧಾರ್ ಹಿಡಿದುಕೊಂಡೇ ಮತ್ತೆ ಹುಡುಕಾಟ ನಡೆಸಿದ ಪೊಲೀಸರಿಗೆ ಆತ ಸ್ಲಂ ಒಂದರಲ್ಲಿ ವಾಸಿಸುತ್ತಿದ್ದದ್ದು ಗೊತ್ತಾಯಿತು. ಅಲ್ಲಿ ದಾಳಿ ನಡೆಸಿ ಆತನನ್ನು ಬಂಧಿಸಿದರು.
ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದ ಆತ, 2012ರಲ್ಲಿ 65,000 ರೂ. ಮೌಲ್ಯದ ಮೊಬೈಲ್ ಫೋನ್ಗಳನ್ನು ಕದ್ದಿದ್ದಕ್ಕಾಗಿ ಜೈಲಿಗೆ ಹೋಗಿಬಂದಿದ್ದ.












Click it and Unblock the Notifications