'ಜ್ಯೋತಿ' ಆರಿಸಿದ ಬಾಲಾಪರಾಧಿ ಜೈಲಿಂದ ಹೊರಬರುವುದು ಖಚಿತ
ನವದೆಹಲಿ, ಡಿಸೆಂಬರ್, 18: ದೆಹಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಬಾಲಾಪರಾಧಿ(ಬಾಲ ರಾಕ್ಷಸ) ಡಿಸೆಂಬರ್ 20 ರ ನಂತರ ಸ್ವತಂತ್ರ ಹಕ್ಕಿ. ಬಾಲಾಪರಾಧಿ ಬಿಡುಗಡೆಗೆ ತಡೆ ನೀಡಲು ದಿಲ್ಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದ್ದು ಅಪರಾಧಿಗೆ ಹೊರಗೆ ಬರಲು ದಾರಿ ಸುಗಮವಾಗಿದೆ.
2012ರ ಡಿಸೆಂಬರ್ 16 ರಂದು ಮೆಡಿಕಲ್ ವಿದ್ಯಾರ್ಥಿನಿ ಜ್ಯೋತಿ ಸಿಂಗ್ ಮೇಲೆ ಆರು ಮಂದಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿ, ಚಿತ್ರಹಿಂಸೆ ಕೊಟ್ಟಿದ್ದರು. ಆ ಸಂದರ್ಭದಲ್ಲಿ ಈ ಬಾಲಾಪರಾಧಿಯೂ ಒಬ್ಬನಾಗಿದ್ದು ಪ್ರಕರಣದಲ್ಲಿ 3 ವರ್ಷ ಜೈಲುಶಿಕ್ಷೆ ಅನುಭವಿಸಿದ್ದಾನೆ. ಉಳಿದವರಿಗೆ ಗಲ್ಲು ಶಿಕ್ಷೆಯಾದರೆ ಬಾಲಕನಾಗಿದ್ದ ಕಾರಣ ಈತ ಹೊರಕ್ಕೆ ಹೆಜ್ಜೆ ಇಡುತ್ತಿದ್ದಾನೆ.['ನನ್ನ ಮಗಳ ಹೆಸರು ಜ್ಯೋತಿ, ನೀವೂ ಹಾಗೆಯೇ ಕರೆಯಿರಿ']
15 ದಿನ ಜೀವನ್ಮರಣದ ನಡುವೆ ಹೋರಾಟ ನಡೆಸಿದ ಜ್ಯೋತಿ ಸಿಂಗಪುರದ ಆಸ್ಪತ್ರೆಯೊಂದರಲ್ಲಿ ಕೊನೆ ಉಸಿರೆಳೆದಿದ್ದಳು. ದೇಶಾದ್ಯಂತ ಪ್ರತಿಭಟನೆಗಳು ನಡೆದು ಕಾನೂನು ತಿದ್ದುಪಡಿ ಕೂಡಾ ಮಾಡಲಾಗಿತ್ತು.[ದಿಲ್ಲಿ ರೇಪ್: ಬಾಲ ಅತ್ಯಾಚಾರಿಗೆ ಮೂರೇ ವರ್ಷ ಜೈಲು]
ಬಾಲಪರಾಧಿಯನ್ನು ಬಿಡುಗಡೆ ಮಾಡಬಾರದು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ದೆಹಲಿ ಹೈ ಕೋರ್ಟ್ ಅರ್ಜಿಯನ್ನು ನಿರಾಕರಣೆ ಮಾಡಿದೆ.[ಚಲಿಸುತ್ತಿದ್ದ ವಾಹನದಲ್ಲಿ ನಡೆದ ಹತ್ತು ಅತ್ಯಾಚಾರಗಳು]
ಚಿಕ್ಕ ವಯಸ್ಸಿನಲ್ಲಿಯೇ ಘನಘೋರ ಕೃತ್ಯ ಎಸಗಿದ್ದ ಬಾಲರಾಕ್ಷಸನನ್ನು ಹೊರಕ್ಕೆ ಬಿಡಬಾರದು. ಆತ ಸಮಾಜಕ್ಕೆ ಕಂಟಕವಾಗುವ ಸಾಧ್ಯತೆ ಹೆಚ್ಚಿದೆ ಎಂದು ಸ್ವಾಮಿ ಅರ್ಜಿಯಲ್ಲಿ ಹೇಳಿದ್ದರು.
ಖಾಸಗಿ ವಾಹಿನಿಯೊಂದಕ್ಕೆ ಇತ್ತಿಚೇಗೆ ಸಂದರ್ಶನ ನೀಡಿದ್ದ ನಿರ್ಭಯಾ ತಾಯಿ ನನ್ನ ಮಗಳ ಹೆಸರು ಜ್ಯೋತಿ ಸಿಂಗ್, ಅವಳ ಹೆಸರು ಹೇಳಲು ನಾಚಿಕೆಯಿಲ್ಲ ಎಂದು ನೋವು ತೋಡಿಕೊಂಡಿದ್ದರು. ತಂದೆ ಮಗಳ ಆತ್ಮಕ್ಕೆ ಶಾಂತಿ ಕೊಡಿಸಲು ಸಾಧ್ಯವಾಗಿಲ್ಲ ಎಂದು ನೊಂದು ನುಡಿದಿದ್ದರು.