In Pics: ದೇಶದೆಲ್ಲೆಡೆ ನವರಾತ್ರಿ ರಂಗು
ದೇಶದೆಲ್ಲೆಡೆ ನವರಾತ್ರಿ ರಂಗು ಆವರಿಸಿದೆ. ಎಲ್ಲಾ ರಾಜ್ಯಗಳಲ್ಲಿ, ಪುಣ್ಯ ಕ್ಷೇತ್ರಗಳಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ದುರ್ಗಾಪೂಜೆಯನ್ನು ಪ್ರಮುಖವಾಗಿ ಆರಾಧಿಸುವ ಪಶ್ಚಿಮ ಬಂಗಾಳದಲ್ಲಂತೂ ಇದು ಅದ್ಧೂರಿಯ ಆಚರಣೆಯಾಗಿದೆ.
ಉಗ್ರರ ಪೀಡಿತವಾಗಿರುವ ಜಮ್ಮು ಕಾಶ್ಮೀರದಲ್ಲೂ ಉತ್ತಮವಾಗಿ ದಸರಾ ಮಹೋತ್ಸವವನ್ನು ಆಚರಿಸಿರುವುದಾಗಿ ವರದಿಯಾಗಿದೆ. ಅಲ್ಲಿ ದುರ್ಗಾ ಮಾತೆಯ ಮೂರ್ತಿಗಳನ್ನು ಒಂಭತ್ತು ದಿನಗಳ ಕಾಲ ಪೂಜಿಸಿ ಅವುಗಳನ್ನು ನವಮಿಯ ಸಂಜೆ ನೀರಿನಲ್ಲಿ ವಿಸರ್ಜನೆ ಮಾಡುವ ಸಂಪ್ರದಾಯವಿದೆ. ಆ ಆಚರಣೆ ಅಲ್ಲಿ ಯಶಸ್ವಿಯಾಗಿ, ಯಾವುದೇ ಬಾಧೆಯಿಲ್ಲದೆ ನೆರವೇರಿದೆ.
ಇನ್ನು, ಉತ್ತರ ಭಾರತದ ಹಲವೆಡೆ, ರಾವಣ ಹಾಗೂ ಕುಂಭಕರ್ಣನ ದೈತ್ಯ ಪ್ರತಿಕೃತಿಗಳನ್ನು ದಹಿಸುವ ಆಚರಣೆಯನ್ನೂ ಅದ್ಧೂರಿಯಾಗಿ ನಡೆಸಲಾಗಿದೆ.
ನವದೆಹಲಿಯ ಕೆಂಪುಕೋಟೆಯ ಮೈದಾನದಲ್ಲಿ ಇಂಥ ದೈತ್ಯ ಪ್ರತಿಕೃತಿಗಳನ್ನು ದಹಿಸುವುದಲ್ಲದೆ, ಅಲ್ಲಿ ಶುಕ್ರವಾರ (ಸೆ. 29) ರಾತ್ರಿ ರಾಮಾಯಣದ ನಾಟಕ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಆ ನಾಟಕದಲ್ಲಿ ಬಾಲಿವುಡ್ ನ ಹೆಸರಾಂತ ನಟರೂ ನಟಿಸಿದ್ದು ವಿಶೇಷವಾಗಿತ್ತು.
ಇನ್ನು, ಅಲ್ಲಲ್ಲಿ, ಜನಪ್ರಿಯ ಸಿನಿ ನಟರೂ ದುರ್ಗಾ ದೇವಿಯ ಆರಾಧನೆ ಸೇರಿದಂತೆ ಇತರ ದಸರಾ ಮಹೋತ್ಸವಗಳಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ನೀತಾ ನಮನ
ಗುಜರಾತ್ ನ ಬನಸ್ಕಾಂತ್ರ ಜಿಲ್ಲೆಯಲ್ಲಿರುವ ಪ್ರಖ್ಯಾತ ಅಂಬಾಜಿ ದೇವಿಯ ದೇಗುಲದಲ್ಲಿ ರಿಯಲನ್ಸ್ ಸಂಸ್ಥೆಯ ಒಡತಿ ನೀತಾ ಅಂಬಾನಿ ಹಾಗೂ ಅವರ ತಾಯಿ ಪೂಜಾ, ದೇವರ ಆಶೀರ್ವಾದ ಪಡೆದರು.
ನವಮಿ ಪೂಜಾ ಕೈಂಕರ್ಯ
ಮಹಾನವಮಿ ಪ್ರಯುಕ್ತ ಕೋಲ್ಕತಾದ ದುರ್ಗಾ ದೇವಿಯ ವಿಗ್ರಹದ ಮುಂದೆ ಪುರೋಹಿತರು ಪೂಜಾ ಕೈಂಕರ್ಯ ಕೈಗೊಂಡಿರುವುದು.
ಕಲಾವಿದರ ಕಲಾ ಸೇವೆ
ನವದೆಹಲಿಯ ಶ್ರೀರಾಮ ಭಾರತೀಯ ಕಲಾ ಕೇಂದ್ರದ ವಿದ್ಯಾರ್ಥಿಗಳು ದಸರಾ ಹಬ್ಬದ ಪ್ರಯುಕ್ತ 'ಶ್ರೀರಾಮ' ಎಂಬ ನೃತ್ಯ ಕಲಾ ಪ್ರಾಕಾರವನ್ನು ಪ್ರಸ್ತುತಪಡಿಸಿದರು.
ರಾವಣ, ಕುಂಭಕರ್ಣರ ಪ್ರತಿಕೃತಿ
ನವದೆಹಲಿಯ ಕೆಂಪುಕೋಟೆಯ ಮೈದಾನಲ್ಲಿ ಏರ್ಪಡಿಸಲಾಗಿರುವ ದಸರಾ ಆಚರಣೆಯ ಹಿನ್ನೆಲೆಯಲ್ಲಿ ರಾವಣ ಹಾಗೂ ಕುಂಭಕರ್ಣರ ಪ್ರತಿಕೃತಿಗಳನ್ನು ನಿಲ್ಲಿಸಲಾಗಿರುವುದು.
ಮೋನಿಕಾ ನೃತ್ಯ
ಭೋಪಾಲ್ ನಲ್ಲಿ ನಡೆದ ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಗಾರ್ಬಾ ನೃತ್ಯ ಪ್ರಾಕಾರದಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟಿ ಮೋನಿಕಾ ಬೇಡಿ.
ರಾವಣನ ಸಾಗಣೆ!
ಅಮೃತಸರದಲ್ಲಿ ದಸರಾ ಉತ್ಸವ ಜೋರಾಗಿದೆ. ಅಲ್ಲಿ ರಾವಣನ ಪ್ರತಿಕೃತಿಯನ್ನು ಕೊಂಡೊಯ್ಯುತ್ತಿರುವ ದೃಶ್ಯವಿದು.
ಜಮ್ಮುವಿನಲ್ಲಿ 'ಸಾಖ್' ಉತ್ಸವ
ಜಮ್ಮು ಕಾಶ್ಮೀರದಲ್ಲಿ ನವರಾತ್ರಿಯ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ 'ಸಾಖ್' ಉತ್ಸವದ ಅಂಗವಾಗಿ ದುರ್ಗಾ ಮಾತೆಯ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಇಂಥದ್ದೇ ಒಂದು ಸನ್ನಿವೇಶದಲ್ಲಿ ದುರ್ಗೆಗೆ ವಂದಿಸುತ್ತಿರುವ ಭಕ್ತರು.
ರಾವಣನ 'ಪ್ರತಿಷ್ಠಾಪನೆ'
ಬಿಹಾರದ ರಾಜಧಾನಿ ಪಾಟ್ನಾದಲ್ಲಿನ ಗಾಂಧಿ ಮೈದಾನದಲ್ಲಿ ದಸರಾ ಆಚರಣೆಗಾಗಿ ರಾವಣನ ದೈತ್ಯ ಪ್ರತಿಕೃತಿ ನಿಲ್ಲಿಸುವುದಕ್ಕಾಗಿ ಕ್ರೇನ್ ಬಳಸುತ್ತಿರುವುದು.
ಕಾಜೋಲ್ ಝಲಕ್
ಬಾಲಿವುಡ್ ನಟಿ ಕಾಜೋಲ್, ಅವರ ತಾಯಿ ತನುಜಾ ಹಾಗೂ ಸಹೋದರಿ ತನಿಶಾಸ್ ಮುಖರ್ಜಿ ಅವರು ಮುಂಬೈನಲ್ಲಿ ನಡೆದಿದ್ದ ದಸರಾ ಹಬ್ಬದ ಆಚರಣೆಯೊಂದರಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಬಾಲಿವುಡ್ ಸ್ಪರ್ಶ
ನವದಹೆಲಿಯ ಕೆಂಪು ಕೋಟೆಯ ಚಾರಿತ್ರಿಕ ರಾಮಲೀಲಾ ಆಚರಣೆ ಹಿನ್ನೆಲೆಯಲ್ಲಿ ನಡೆದ ರಾಮಾಯಣ ನಾಟಕದಲ್ಲಿ ಬಾಲಿವುಡ್ ನಟರಾದ ಮುಖೇಶ್ ರಿಷಿ ಹಾಗೂ ರಾಝಾ ಮುರಾದ್ ಭಾಗವಹಿಸಿದ್ದರು.