ಸೆಲೆಬ್ರಿಟಿಯಾದರು ಡ್ಯಾನ್ಸಿಂಗ್ ಅಂಕಲ್; ಸುನಿಲ್ ಶೆಟ್ಟಿಯಿಂದ ಸಿನಿಮಾ ಆಫರ್
ಭೋಪಾಲ್, ಜೂನ್ 5: ಕಳೆದ ನಾಲ್ಕೈದು ದಿನಗಳಿಂದ ಇಂಟರ್ನೆಟ್ನಲ್ಲಿ ತಮ್ಮದೇ 'ಹವಾ' ಸೃಷ್ಟಿಸಿರುವ 'ಡ್ಯಾನ್ಸಿಂಗ್ ಅಂಕಲ್' ಈಗ ಬಾಲಿವುಡ್ನ ಸ್ಟಾರ್ ನಟರಂತೆಯೇ ದೊಡ್ಡ ಸೆಲೆಬ್ರಿಟಿಯಾಗಿದ್ದಾರೆ.
'ಆಪ್ ಕೆ ಆ ಜಾನೇ ಸೇ' ಹಾಡಿಗೆ ನಟ ಗೋವಿಂದ ಅವರಿಗೆ ಸವಾಲು ಹಾಕುವಂತೆ ನರ್ತಿಸಿ ರಾತ್ರೋ ರಾತ್ರಿ ಜನಪ್ರಿಯರಾದ ಡ್ಯಾನ್ಸಿಂಗ್ ಅಂಕಲ್, ಸಂಜೀವ್ ಶ್ರೀವಾಸ್ತವ ಅವರು ಮುಂಚಿನಂತೆ ಈಗ ಆರಾಮಾಗಿ ಹೊರಗೆ ಅಡ್ಡಾಡುವುದು ಸುಲಭವಲ್ಲ.
ಮಧ್ಯಪ್ರದೇಶದ ಭೋಪಾಲ್ನ ಭಾಭಾ ಎಂಜಿನಿಯರಿಂಗ್ ರೀಸರ್ಚ್ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ 46 ವರ್ಷದ ಶ್ರೀವಾಸ್ತವ್, ಅವರಿಗೆ ಈ ಕೆಲವು ದಿನಗಳಿಂದ ಕಾಲೇಜಿಗೆ ಹೋಗುವುದೂ ಕಷ್ಟವಾಗಿದೆ.
ಇಂಟರ್ನೆಟ್ನಲ್ಲಿ ಧೂಳೆಬ್ಬಿಸಿರುವ ಡಾನ್ಸರ್ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ
ಅವರಿಗೆ ಈಗ ಫೋನ್ ಕರೆಗಳನ್ನು ಸ್ವೀಕರಿಸಿ ಮಾತನಾಡಲು ಮತ್ತು ಜನರನ್ನು ಭೇಟಿ ಮಾಡಲೂ ಸಮಯ ಸಾಲುತ್ತಿಲ್ಲ.
'ಕಳೆದ ಮೂರು ನಾಲ್ಕು ದಿನಗಳಿಂದ ನಿದ್ದೆ ಬರುತ್ತಿಲ್ಲ. ರಾತ್ರಿ ಬೆಳಗಾಗುವುದರೊಳಗೆ ನನ್ನ ಬದುಕು ಬದಲಾಗಿದೆ. ನನ್ನ ಕುಟುಂಬ, ಮುಖ್ಯವಾಗಿ ನನ್ನ ಮಕ್ಕಳಿಗೆ ಏನಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ' ಎಂದು ಶ್ರೀವಾಸ್ತವ್ ಹೇಳಿಕೊಂಡಿದ್ದಾರೆ.
ಡ್ಯಾನ್ಸಿಂಗ್ ಅಂಕಲ್ ಅವರನ್ನು ಕಂಡೊಡನೆ ಜನರು ಎಲ್ಲಿದ್ದರೂ ಓಡಿ ಬಂದು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
'ಡ್ಯಾನ್ಸಿಂಗ್ ಅಂಕಲ್' ಈಗ ಸರಕಾರದ ಬ್ರ್ಯಾಂಡ್ ಅಂಬಾಸಿಡರ್
'ಭೋಪಾಲ್ ಅಥವಾ ಮುಂಬೈ ಎಲ್ಲಿಯೇ ಹೋಗಲಿ. ವಿಮಾನ ನಿಲ್ದಾಣಗಳಲ್ಲಿಯೂ ಜನರು ಬಂದು ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ನನಗೆ ಆಕಾಶದಲ್ಲಿ ಹಾರಿದ ಅನುಭವ ಆಗುತ್ತಿದೆ' ಎಂದು ಸಂತಸ ಹಂಚಿಕೊಂಡಿದ್ದಾರೆ ಅವರು.
ಬಾಲಿವುಡ್ ಕೂಡ ಮುಗಿಬೀಳುತ್ತಿದೆ...
ಶ್ರೀವಾಸ್ತವ್ ಅವರ ಡ್ಯಾನ್ಸ್, ಬಾಲಿವುಡ್ ಸ್ಟಾರ್ಗಳ ಗಮನವನ್ನೂ ಸೆಳೆದಿದೆ. ಇತ್ತೀಚೆಗೆ ಮುಂಬೈಗೆ ತೆರಳಿದ್ದ ಶ್ರೀವಾಸ್ತವ್, ನಟ ಸುನೀಲ್ ಶೆಟ್ಟಿ ಅವರನ್ನು ಭೇಟಿ ಮಾಡಿದ್ದರು.
'ನನಗೆ ಮೊದಲ ಆಹ್ವಾನ ಬಂದಿದ್ದು ಸುನೀಲ್ ಶೆಟ್ಟಿ ಅವರಿಂದ. ಅವರನ್ನು ಭೇಟಿ ಮಾಡಿದ್ದೆ. ಶೀಘ್ರದಲ್ಲಿಯೇ ನನಗಾಗಿ ಒಂದು ಯೋಜನೆಯನ್ನು ರೂಪಿಸುವುದಾಗಿ ಅವರು ತಿಳಿಸಿದ್ದಾರೆ' ಎಂದು ಶ್ರೀವಾಸ್ತವ್ ಹೇಳಿದ್ದಾರೆ.
1987ರಲ್ಲಿ ಬಿಡುಗಡೆಯಾದ 'ಖುದ್ಗಾರ್ಜ್' ಸಿನಿಮಾದ 'ಆಪ್ ಕೆ ಆ ಜಾನೇ ಸೇ' ಹಾಡಿನಲ್ಲಿ ನಟ ಗೋವಿಂದ ಜತೆ ಹೆಜ್ಜೆ ಹಾಕಿದ್ದ ನಟಿ ನೀಲಂ ಅವರನ್ನೂ ಡ್ಯಾನ್ಸಿಂಗ್ ಅಂಕಲ್ ಭೇಟಿ ಮಾಡಿದ್ದಾರೆ.
'ನೀಲಂ ಅವರನ್ನು ಭೇಟಿ ಮಾಡಿದ್ದೆ. ಬಹುಕಾಲ ಬಳಿಕ ಆ ಹಾಡಿಗೆ ಮತ್ತೆ ಜೀವ ತುಂಬಿದ್ದಕ್ಕಾಗಿ ಅವರು ನನಗೆ ಅಭಿನಂದನೆ ಹೇಳಿದರು. ಅವರು ನನ್ನ ನೃತ್ಯವನ್ನು ಶ್ಲಾಘಿಸಿದರು. ಅದರಲ್ಲಿಯೂ ಮೂಲ ಹಾಡಿನಲ್ಲಿ ಅವರು ಕಾಣಿಸಿಕೊಂಡಿರುವ ಸನ್ನಿವೇಶಗಳಲ್ಲಿನ ನನ್ನ ನರ್ತನವನ್ನು ಬಹುವಾಗಿ ಮೆಚ್ಚಿಕೊಂಡರು' ಎಂದಿದ್ದಾರೆ.
ನಟ ಗೋವಿಂದ ಶ್ಲಾಘನೆ
ಈ ಹಾಡಿನ ನೃತ್ಯಕ್ಕೆ ಗೋವಿಂದ ಅವರಿಂದ ಸ್ಫೂರ್ತಿ ಪಡೆದಿದ್ದಾಗಿ ಶ್ರೀವಾಸ್ತವ್ ಹೇಳಿದ್ದರು.
ವಿಡಿಯೋ ನೋಡಿದ್ದ ಗೋವಿಂದ ಅವರು, 'ನೀವು ನರ್ತಿಸುವಾಗ ಎಂಜಾಯ್ ಮಾಡುತ್ತಿದ್ದುದ್ದನ್ನು ನೋಡಿದೆ. ನಿಮ್ಮೊಳಗೆ ಎಂಜಾಯ್ ಮಾಡುವುದನ್ನು ಮುಂದುವರಿಸಿ. ವೇದಿಕೆಯಲ್ಲಿ ನಿಮ್ಮ ಪತ್ನಿ ಕೂಡ ನರ್ತಿಸಿದ್ದು ಇಷ್ಟವಾಯಿತು' ಎಂದು ಗೋವಿಂದ ಮಾಧ್ಯಮವೊಂದರ ಮುಂದೆ ಹೇಳಿದ್ದರು.
ಆದರೆ, ಶ್ರೀವಾಸ್ತವ ಅವರಿಗೆ ಗೋವಿಂದ ಅವರನ್ನು ಭೇಟಿ ಮಾಡುವ ಅವಕಾಶ ಇನ್ನೂ ಸಿಕ್ಕಿಲ್ಲ. ಗೋವಿಂದ ಮಾತ್ರವಲ್ಲ, ಡ್ಯಾನ್ಸಿಂಗ್ನಲ್ಲಿ ತಮಗೆ ಹೃತಿಕ್ ರೋಷನ್ ಕೂಡ ಬಲು ಇಷ್ಟ ಎಂದು ಶ್ರೀವಾಸ್ತವ್ ಹೇಳಿದ್ದಾರೆ.
ಶಿವರಾಜ್ ಸಿಂಗ್ ಶುಭಾಶಯ
ಬಾಲಿವುಡ್ ಸೆಲೆಬ್ರಿಟಿಗಳು ಮಾತ್ರವಲ್ಲ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೂ ಡ್ಯಾನ್ಸಿಂಗ್ ಅಂಕಲ್ನ ನೃತ್ಯ ಮೆಚ್ಚಿ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯದ ಪೋಸ್ಟ್ ಹಾಕಿದ್ದಾರೆ.
'ಮುಖ್ಯಮಂತ್ರಿಯಂತಹ ಸದಾ ಬಿಜಿಯಾಗಿರುವ ವ್ಯಕ್ತಿಯೂ ನನಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಾಕಲು ಸಮಯ ನೀಡುತ್ತಾರೆ ಎನ್ನುವುದು ದೊಡ್ಡ ಸಂಗತಿ' ಎಂದು ಶ್ರೀವಾಸ್ತವ ಸಂಭ್ರಮಿಸಿದ್ದಾರೆ.
|
'ನೃತ್ಯ ನನ್ನತನದ ಭಾಗ'
'10ನೇ ವಯಸ್ಸಿನಿಂದ ನಾನು ನೃತ್ಯ ಮಾಡುತ್ತಿದ್ದೇನೆ. ನೃತ್ಯದ ಬಗ್ಗೆ ಅತಿಯಾದ ಪ್ರೀತಿ ನನಗೆ. ಮುಖ್ಯವಾಗಿ ಅದು ನನ್ನತನದ ಭಾಗ. ನೃತ್ಯಕ್ಕೆ ನನ್ನ ಮೊದಲ ಆದ್ಯತೆ' ಎಂದಿದ್ದಾರೆ ಅವರು.
1992-98ರ ಅವಧಿಯಲ್ಲಿ ಅವರು ನಿರಂತರವಾಗಿ ವೇದಿಕೆ ನೃತ್ಯ ಕಾರ್ಯಕ್ರಮಗಳನ್ನುನ ನೀಡುತ್ತಿದ್ದರು. 1998ರಲ್ಲಿ ಕೆಳಕ್ಕೆ ಬಿದ್ದು, ಕಾಲಿಗೆ ಪೆಟ್ಟಾದ ಬಳಿಕ ಅವರಿಗೆ ನರ್ತಿಸಲು ಸಮಸ್ಯೆಯಾಗತೊಡಗಿತು. ಹೀಗಾಗಿ ವೇದಿಕೆ ಪ್ರದರ್ಶನಗಳನ್ನು ಸ್ಥಗಿತಗೊಳಿಸಿದ್ದ ಅವರು, ಕಾಲೇಜು ಮತ್ತು ಕೌಟುಂಬಿಕ ಸಮಾರಂಭಗಳ ವೇಳೆ ನರ್ತಿಸುವುದನ್ನು ಮುಂದುವರಿಸಿದ್ದರು.
|
ನೃತ್ಯಕ್ಕೆ ಭಾನುವಾರ ಮೀಸಲು
ಕಾಲೇಜು ತರಗತಿಗಳ ಕಾರಣ ಶ್ರೀವಾಸ್ತವ ಅವರಿಗೆ ನರ್ತಿಸಲು ಹೆಚ್ಚು ಸಮಯ ಸಿಗುತ್ತಿಲ್ಲ. ಆದರೆ, ಕಡೇಪಕ್ಷ ಭಾನುವಾರದ ಕೆಲವು ಸಮಯವನ್ನಾದರೂ ಅದಕ್ಕೆ ಮೀಸಲಿಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಇಷ್ಟು ಅಲ್ಪಾವಧಿಯಲ್ಲಿ ಸ್ಟಾರ್ಗಿರಿ ಪಡೆದಿದ್ದು ಚಮತ್ಕಾರವೇ ಸರಿ ಎನ್ನುವುದು ಅವರ ಅಭಿಪ್ರಾಯ. ಭಾರತ ಮಾತ್ರವಲ್ಲ, ಅವರಿಗೆ ವಿದೇಶಗಳಲ್ಲಿಯೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
ಇದೆಲ್ಲವೂ ದೇವರ ಕೃಪೆ ಮತ್ತು ತಂದೆ ತಾಯಿಗಳ ಆಶೀರ್ವಾದದ ಫಲ ಎನ್ನುತ್ತಾರೆ ಶ್ರೀವಾಸ್ತವ್.