ಯಾಸ್ ಚಂಡಮಾರುತ: ಅಪಾಯಕಾರಿ ಪ್ರದೇಶದಿಂದ ಜನರ ಸ್ಥಳಾಂತರಕ್ಕೆ ಪ್ರಧಾನಿ ಸೂಚನೆ
ನವದೆಹಲಿ, ಮೇ 23: ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಯಾಸ್ ಚಂಡಮಾರುತ ಎದುರಿಸುವ ನಿಟ್ಟಿನಲ್ಲಿ ಪೂರ್ವಸಿದ್ಧತಾ ಪರಿಶೀಲನಾ ಸಭೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಚಂಡಮಾರುತದಿಂದಾಗಿ ಹೆಚ್ಚಿನ ಅಪಾಯವುಂಟಾಗಬಹುದಾದ ಸ್ಥಳದಲ್ಲಿರುವ ಜನರನ್ನು ಸೂಕ್ತ ಸಮಯದಲ್ಲಿ ಸ್ಥಳಾಂತರಿಸಲು ಸೂಚನೆಯನ್ನು ನೀಡಿದ್ದಾರೆ.
ಹೆಚ್ಚಿನ ಅಪಾಯವನ್ನು ಹೊಂದಿರುವ ಸ್ಥಳದಲ್ಲಿರುವ ಜನರನ್ನು ಸ್ಥಳಾಂತರ ಮಾಡುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳೊಂದಿಗೆ ಸೂಕ್ತ ರೀತಿಯಲ್ಲಿ ಸಮನ್ವಯ ಮಾಡಿಕೊಳ್ಳಬೇಕು. ಸಮುದ್ರದಲ್ಲಿ ಚಟುವಟಿಕೆಯನ್ನು ಹೊಂದಿರುವವರಿಗೆ ಸೂಕ್ತ ಸಮಯದಲ್ಲಿ ಸ್ಥಳಾಂತರ ಮಾಡುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಸೂಚನೆಯನ್ನು ನೀಡಿದ್ದಾರೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಯಾಸ್ ಚಂಡಮಾರುತ: ಹಿರಿಯ ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಭೆ
ಇನ್ನು ವಿದ್ಯುತ್ ಸಂಪರ್ಕದ ಕಡಿತದ ಅವಧಿಯ ಅಗತ್ಯದ ಬಗ್ಗೆಯೂ ಪ್ರಧಾನಿ ಈ ಸಂದರ್ಭದಲ್ಲಿ ಮಾತನಾಡಿದ್ದಾರೆ. ಜೊತೆಗೆ ಸಂವಹನ ಜಾಲದ ಮರುಸ್ಥಾಪನೆಗೆ ತ್ವರಿತ ಕಾರ್ಯಕೈಗೊಳ್ಳುವ ಬಗ್ಗೆಯೂ ಸೂಚಿಸಿದ್ದಾರೆ. ಈ ಅವಧಿಯಲ್ಲಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ಮತ್ತು ಲಸಿಕೆಗೆ ಯಾವುದೇ ಅಡೆತಡೆಗಳು ಉಂಟಾಗದಂತೆ ರಾಜ್ಯ ಸರ್ಕಾರಗಳೊಂದಿಗೆ ಸರಿಯಾದ ಸಮನ್ವಯ ಸಾಧಿಸಿ ಯೋಜನೆಯನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇನ್ನು ಈ ಸಭೆಯ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ "ಯಾಸ್ ಚಂಡಮಾರುತವನ್ನು ಎದುರಿಸಲು ಸಿದ್ಧತೆಯ ಪರಿಶೀಲನೆ ನಡೆಸಲಾಗಿದೆ. ತೊಂದರೆಗೊಳಗಾಗಬಹುದಾದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಹಕಾರಿಯಾಗುವಂತೆ ವಿವಿಧ ಅಗತ್ಯ ಕ್ರಮಗಳ ಬಗ್ಗೆ ವಿವರಿಸಲಾಯಿತು" ಎಂದಿದ್ದಾರೆ.
ಯಾಸ್ ಚಂಡಮಾರುತ: ಒಡಿಶಾದ 3 ಜಿಲ್ಲೆಗೆ ಹೆಚ್ಚು ಅಪಾಯ ಎಂದ ಹವಾಮಾನ ಇಲಾಖೆ
ಇನ್ನು ಯಾಸ್ ಚಂಡಮಾರುತವನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. 5 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ದೋಣಿಗಳು, ಮರ ಕತ್ತರಿಸುವವರು, ಟೆಲಿಕಾಂ ಉಪಕರಣಗಳನ್ನು ಹೊಂದಿದ 46 ತಂಡಗಳನ್ನು ಎನ್ಡಿಆರ್ಎಫ್ ಈಗಾಗಲೇ ನಿಯೋಜಿಸಿದೆ. ಅಲ್ಲದೆ 13 ತಂಡಗಳನ್ನು ಇಂದು(ಭಾನುವಾರ) ವಿಮಾನದಲ್ಲಿ ಕಳುಹಿಸಲಾಗುತ್ತದೆ. 10 ತಂಡಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಎನ್ಡಿಆರ್ಎಫ್ ಮೀಸಲಿರಿಸಿಕೊಂಡಿದೆ.