Cyclone Fengal: ಇಂದು ಚಂಡಮಾರುತದ ತೀವ್ರತೆ ಹೆಚ್ಚಳ, ಭೂಮಿಯಿಂದ ಎಷ್ಟು ದೂರವಿದೆ?: ಮುನ್ಸೂಚನೆ ಏನು!
ಬೆಂಗಳೂರು, ನವೆಂಬರ್ 27: ಬಂಗಾಳಕೊಲ್ಲಿ ಸಮುದ್ರ ಮೇಲ್ಮೈನಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಚಂಡಮಾರುತ ಪರಿಚಲನೆಯಾಗಿ ಬದಲಾಗಿದೆ. ತೀವ್ರ ಸ್ವರೂಪ ಪಡೆದುಕೊಳ್ಳಲು, ಭೂಮಿಗೆ ಅಪ್ಪಳಿಸಲು ಕೆಲವೇ ಗಂಟೆಗಳು ಬಾಕಿ ಇವೆ ಎನ್ನಲಾಗಿದೆ. ಈ ಚಂಡಮಾರುತಕ್ಕೆ 'ಫೆಂಗಲ್ ಚಂಡಮಾರುತ' (Fengal Cyclone) ಎಂದು ಕರೆಯಲಾಗುತ್ತಿದೆ. ಸದ್ಯ ಇದು ಕರ್ನಾಟಕ, ಚೆನ್ನೈ, ತಮಿಳುನಾಡು ಕರಾವಳಿಗೆ ಭಾಗದಿಂದ ಎಷ್ಟು ದೂರದಲ್ಲಿದೆ?, ಯಾವ ಸ್ಥಿತಿಯಲ್ಲಿದೆ? ಇಂದಿನ ಹವಾಮಾನದ ಅಪ್ಡೇಟ್ ಏನು? ಇಲ್ಲಿದೆ ಮಾಹಿತಿ.
ಬಂಗಾಳಕೊಲ್ಲಿಯ ನೈಋತ್ಯ ಭಾಗದ ಸಮುದ್ರದ ಮೇಲೆ ಆಳವಾದ ಖಿನ್ನತೆ, ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇದು ಕಳೆದ 24 ಗಂಟೆಗಳಿಗಿಂತಲೂ ಹೆಚ್ಚಿನ ವೇಗ ಪಡೆದುಕೊಂಡಿದೆ. ಇಂದು ನವೆಂಬರ್ 27ರಂದು ಸ್ಪಷ್ಟ ಚಂಡಮಾರುತವಾಗಿ ಬದಲಾಗುವ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ಮುಖ್ಯಸ್ಥರು ಮತ್ತು ವಿಜ್ಞಾನಿ ಡಾ. ಎನ್.ಪುವಿಯರಸನ್ ಅವರು ತಿಳಿಸಿದ್ದಾರೆ.

ಈ ಚಂಡಮಾರುತವು ಭೂಮಿಯ ಅಕ್ಷಾಂಶ 8.5°N ಮತ್ತು ರೇಖಾಂಶ 82.3°E ಬಳಿ ಸೃಷ್ಟಿಯಾದ ತನ್ನ ಮೂಲ ಕೇಂದ್ರದದಿಂದ ಕರಾವಳಿಯತ್ತ ಚಲಿಸುತ್ತಿದೆ. ಇದರ ಗಾಳಿಯ ಬೀಸುವಿಕೆಯು ವೇಗ ಪಡೆದುಕೊಂಡಿದೆ. ತನ್ನ ಮೂಲ ಸ್ಥಾನದಿಂದ ಬುಧವಾರ (ನವೆಂಬರ್ 27) ಬೆಳಗ್ಗೆ 6 ಗಂಟೆಗಳಲ್ಲಿ ಪ್ರತಿ ಗಂಟೆಗೆ 13 ಕಿಲೋ ಮೀಟರ್ಗೆ ವೇಗದಲ್ಲಿ ಚಲಿಸಿದೆ. ಇದು ಭೂಮಿಗೆ ಅಪ್ಪಳಿಸುವಾಗ ಇದರ ಗಾಳಿಯ ವೇಗ ಬರೋಬ್ಬರಿ 100-120 kmph ತಲುಪುವ ನಿರೀಕ್ಷೆಗಳು ಇವೆ. ಇಷ್ಟು ವೇಗದಲ್ಲಿ ಬಂದಪ್ಪಳಿಸಿದರೆ ಕರಾವಳಿ ರಾಜ್ಯಗಳ ಜಿಲ್ಲೆಗಳಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಸಲಿದೆ. ಭಾರೀ ಮಳೆ ಜೊತೆಗೆ ಪ್ರವಾಹ ಉಂಟಾಗಿ, ಸಾಕಷ್ಟು ನಷ್ಟವಾಗುತ್ತದೆ.
ಫೆಂಗಲ್ ಭೂಮಿಯಿಂದ ಎಷ್ಟು ದೂರದಲ್ಲಿದೆ?
ಕೇಲವ ಮೂರು ನಾಲ್ಕು ಗಂಟೆಗಳಲ್ಲಿ ನೂರಾರು ಕಿಲೋ ಮೀಟರ್ ದೂರದವರೆಗೆ ಕ್ರಮಿಸುವ ಈ ಚಂಡಮಾರುತ ಸದ್ಯಕ್ಕೆ ಕರಾವಳಿ ಭೂಭಾಗಗಳಿಂದ ಕೊಂಚ ದೂರದಲ್ಲಿದೆ. 'ಫೆಂಗಲ್' ತನ್ನ ಮೂಲ ಸ್ಥಳದಿಂದ ಟ್ರಿಂಕೋಮಲಿಯ ಪೂರ್ವ ಆಗ್ನೇಯಕ್ಕೆ ಸುಮಾರು 120 ಕಿ.ಮೀ ದೂರದಲ್ಲಿದೆ. ಆಗ್ನೇಯ ದಿಕ್ಕಿನ ನಾಗಪಟ್ಟಿಣಂನಿಂದ 370 ಕಿ.ಮೀ ಹಾಗೂ ಪುದುಚೇರಿ ಪ್ರದೇಶದಿಂದ ಆಗ್ನೇಯಕ್ಕೆ 470 ಕಿ.ಮೀ ದೂರದಲ್ಲಿದೆ. ಇನ್ನೂ ತಮಿಳುನಾಡು ಜಿಲ್ಲೆಯ ಚೆನ್ನೈ ಮಹಾನಗರದಿಂದ ಆಗ್ನೇಯಕ್ಕೆ 550 ಕಿ.ಮೀ. ದೂರದಲ್ಲಿದೆ ಎಂದು ಹವಾಮಾನ ತಜ್ಞರು ವಿವರಿಸಿದ್ದಾರೆ.
ಎತ್ತ ಚಲಿಸಲಿದೆ 'ಫೆಂಗಲ್' ಚಂಡಮಾರುತ?
ಚಂಡಮಾರುತವು ಮತ್ತಷ್ಟು ತೀವ್ರಗೊಂಡು ಮುಂದಿನ ಕೇವಲ 12 ಗಂಟೆಗಳಲ್ಲಿ ಉತ್ತರ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆ ಇದೆ. ಅಲ್ಲಿಂದ ಇದು ತೀವ್ರ ಚಂಡಮಾರುತವಾಗಿ ಮತ್ತಷ್ಟು ಬದಲಾಗಲಿದೆ. ಗಾಳಿಯ ವೇಗ ಹೆಚ್ಚಲಿದೆ. ಮುಂದಿನ 2 ದಿನಗಳಲ್ಲಿ ಇದು ಉತ್ತರ-ವಾಯುವ್ಯವಾಗಿ ತಮಿಳುನಾಡು ಕರಾವಳಿಯ ಕಡೆಗೆ ಶ್ರೀಲಂಕಾ ಕರಾವಳಿಯ ಕಡೆಗೆ ಚಲಿಸುವ ಮೂಲಕ ಆ ಭಾಗದಲ್ಲಿ ವಿಪರೀತ ಮಳೆ ಸುರಿಸಲಿದೆ. ಒಟ್ಟಾರೆಯಾಗಿ ಇಂದು ನವೆಂಬರ್ 27 ಚಂಡಮಾರುತದ ಬದಲಾವಣೆಗೆ ನೀರ್ಣಾಯಕ ಎನ್ನಲಾಗಿದೆ.

ಮೀನುಗಾರರಿಗೆ ಎಚ್ಚರಿಕೆ: ರಾಜ್ಯದ ಮಳೆ ಮುನ್ಸೂಚನೆ
ಮಳೆಗಾಲ ಅಂತ್ಯಗೊಂಡಿತು ಎನ್ನುಷ್ಟರದಲ್ಲಿ ಮತ್ತೊಂದು ಚಂಡಮಾರುತ ಅಬ್ಬರಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಸದ್ಯ ಕರ್ನಾಟಕ, ತಮಿಳುನಾಡು, ಚೆನ್ನೈ ಭಾಗದ ಕರಾವಳಿ ಪ್ರದೇಶಗಳಲ್ಲಿ ಗಾಳಿ ವೇಗ ಕ್ರಮೇ ಹೆಚ್ಚಾಗಲಿದೆ. ಹೀಗಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೊಡಲಾಗಿದೆ.
ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಕಳೆದ 24 ಗಂಟೆಗಳಿಂದ ಮಬ್ಬು ವಾತಾವರಣ ಅತೀವ ಚಳಿ ಕಂಡು ಬರುತ್ತಿದೆ. ಈ ವಾರಾಂತ್ಯಕ್ಕೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ನಿರೀಕ್ಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದೆ.












Click it and Unblock the Notifications