Cyclone Biparjoy Landfall: ಗುಜರಾತ್ ರಾಜ್ಯದ ಗಾತ್ರಕ್ಕಿಂತ ದೊಡ್ಡದಾಗಿದೆ ಸೈಕ್ಲೋನ್!
ಅಹಮದಾಬಾದ್: ಗಾಳಿಗೆ ಹಾರಿ ಹೋಗುತ್ತಿರುವ ಬೋರ್ಡ್ಗಳು, ಸೈಕ್ಲೋನ್ ಸುಳಿಗೆ ಸಿಕ್ಕ ವಸ್ತುಗಳೆಲ್ಲಾ ಚಿಂದಿ ಚಿಂದಿ. ಅಂದಹಾಗೆ ಗುಜರಾತ್ನ ಸೌರಾಷ್ಟ್ರ ಹಾಗೂ ಕಚ್ಛ್ ಕರಾವಳಿ ಭಾಗಕ್ಕೆ 100 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಿರುವ 'ಬಿಪರ್ಜಾಯ್' ಚಂಡಮಾರುತ ಸೃಷ್ಟಿಸಿರುವ ಅವಾಂತರ ಇದು. ಚಂಡಮಾರತ ಅಪ್ಪಳಿಸಿದ ನಂತರ ಗುಜರಾತ್ ರಾಜ್ಯದ ಪರಿಸ್ಥಿತಿ ಕೈಮೀರಿ ಹೋಗಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಇಷ್ಟೊತ್ತು ಬರೀ 'ಬಿಪರ್ಜಾಯ್' ಅಬ್ಬರಕ್ಕೆ ಬೆಚ್ಚಿದ್ದ ಜನರಿಗೆ ಮತ್ತೊಂದು ಆಘಾತವೂ ಎದುರಾಗಿದೆ. ಅದೇನೆಂದರೆ ಬಿಪರ್ಜಾಯ್ ಚಂಡಮಾರುತದ ಉಪಗ್ರಹ ಚಿತ್ರ ಭಾರತೀಯ ಹವಾಮಾನ ಇಲಾಖೆಯಿಂದ ರಿಲೀಸ್ ಆಗಿದ್ದು, ಸೈಕ್ಲೋನ್ ಗಾತ್ರ ಬರೋಬ್ಬರಿ ಗುಜರಾತ್ ರಾಜ್ಯಕ್ಕಿಂತಲೂ ದೊಡ್ಡದಾಗಿದೆ. ದೇಶದಲ್ಲೇ 5ನೇ ದೊಡ್ಡ ರಾಜ್ಯ ಎಂಬ ಹೆಗ್ಗಳಿಕೆ ಕೂಡ ಇದೇ ಗುಜರಾತ್ ರಾಜ್ಯಕ್ಕಿದೆ. ಇಂತಹ ದೇಶದ 5ನೇ ಅತಿದೊಡ್ಡ ರಾಜ್ಯದಷ್ಟು ಗಾತ್ರದ ಚಂಡಮಾರುತ ಈಗ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅಲ್ಲದೆ ಕ್ಷಣಕ್ಷಣಕ್ಕೂ ತನ್ನ ಗಾತ್ರವನ್ನು 'ಬಿಪರ್ಜಾಯ್' ಚಂಡಮಾರುತ ಹಿಗ್ಗಿಸಿಕೊಳ್ಳುತ್ತಿರುವುದು ಭಯವನ್ನು ಹೆಚ್ಚಿಸುತ್ತಿದೆ.

10 ದಿನ ಸಮುದ್ರದಲ್ಲೇ ಇದ್ದ ಸೈಕ್ಲೋನ್!
ಸಮುದ್ರದಲ್ಲೇ ಚಂಡಮಾರುತಗಳು ಹುಟ್ಟಿಕೊಳ್ಳುವುದು. ಆದ್ರೆ ಸಾಮಾನ್ಯವಾಗಿ ಸೈಕ್ಲೋನ್ ಹುಟ್ಟಿಕೊಂಡ ನಂತರ 6-7 ದಿನ ಸಮುದ್ರದಲ್ಲೇ ಸುತ್ತುತ್ತವೆ. ಈ ಪ್ರಕ್ರಿಯೆ ನಡೆದ ನಂತರ ಭೂಮಿಗೆ ಅಪ್ಪಳಿಸುತ್ತವೆ. ಅದ್ರಲ್ಲಿ ಅರಬ್ಬಿ ಸಮುದ್ರದಲ್ಲಿ ಹುಟ್ಟಿಕೊಳ್ಳುವ ಸೈಕ್ಲೋನ್ಗಳು ಕೆಲ ದಿನದಲ್ಲಿ ಭೂಮಿ ಅಪ್ಪಳಿಸುವುದು ಮಾಮೂಲಿ. ಆದ್ರೆ ಬಿಪರ್ಜಾಯ್ ಚಂಡಮಾರುತ ಸುಮಾರು 10ಕ್ಕೂ ಹೆಚ್ಚು ದಿನದಿಂದ ತಾನು ಹುಟ್ಟಿದ ಜಾಗದಲ್ಲೇ ಅಂದರೆ ಅರಬ್ಬಿ ಸಮುದ್ರದಲ್ಲೇ ಸುತ್ತುತ್ತಿತ್ತು. ಹೀಗಾಗಿ ಅದರ ಗಾತ್ರ ಭೀಕರವಾಗಿ ಭಯ ಹುಟ್ಟಿಸುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಹವಾಮಾನ ಇಲಾಖೆ ಅಧಿಕಾರಿಗಳು ಕೂಡ ಎಚ್ಚರಿಕೆ ರವಾನಿಸಿದ್ದಾರೆ.
ಭಯಾನಕ ಫೋಟೋ ರಿಲೀಸ್ ಮಾಡಿದ ನಾಸಾ!
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ 'ಬಿಪರ್ಜಾಯ್'ನ ಉಪಗ್ರಹ ಚಿತ್ರ ಹಂಚಿಕೊಂಡಿದೆ. ನಾಸಾ ರಿಲೀಸ್ ಮಾಡಿರುವ ಫೋಟೋ ಕೂಡ ಭಯ ಹುಟ್ಟಿಸುವ ರೀತಿ ಇದೆ. ಬಹುದೊಡ್ಡ ಗಾತ್ರದ ಈ ಸುಳಿಗಾಳಿಯು ಬಾಹಾಕ್ಯಾಶದಿಂದ ಕೂಡ ಭಯಾನಕವಾಗಿ ಕಾಣ್ತಿದೆ. ಭಾರತದ ಪಶ್ಚಿಮ ಕರಾವಳಿಯನ್ನು ಈ ಸುಳಿಗಾಳಿ ಆವರಿಸಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇಂಟರ್ನೆಟ್ನಲ್ಲೂ ನಾಸಾ ಫೋಟೋ ಈಗ ವೈರಲ್ ಆಗುತ್ತಿದೆ.

ರಾತ್ರಿ ಬಿಟ್ಟೂ ಬಿಡದೆ ಸುರಿಯುತ್ತೆ ಮಳೆ!
ಗುಜರಾತ್ನ ಸದ್ಯದ ಸ್ಥಿತಿ ಹೇಗಾಗಿದೆ ಎಂದರೆ, ಮಳೆ ಬೇಡ ಎಂದರೂ ಸುರಿಯುತ್ತಿದೆ. ಈ ರಾಜ್ಯದ ಬಹುತೇಕ ಕಡೆ ಮರುಭೂಮಿ ಅಥವಾ ಬರಡು ಭೂಮಿ ಇದೆ. ಆದ್ರೆ ಈಗಿನ ಸ್ಥಿತಿ ನೋಡಿದರೆ, ಗುಜರಾತ್ ಥೇಟ್ ಅಮೆಜಾನ್ ಪ್ರದೇಶವಾಗಿ ಬದಲಾಗಿದೆ ಎನ್ನಬಹುದು. ಈ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಈಗ ತಾನೆ ಚಂಡಮಾರುತ ಬೇರೆ ಅಪ್ಪಳಿಸಿದೆ, ಹೀಗಾಗಿ ರಾತ್ರಿ ಪೂರ್ತಿ ಮಳೆ ಅಬ್ಬರಿಸಿ ಬೊಬ್ಬಿರಿಯಲಿದೆ ಅಂತಿದ್ದಾರೆ ದೇಶದ ಹವಾಮಾನ ತಜ್ಞರು. ಭಾರತೀಯ ಹವಾಮಾನ ಇಲಾಖೆ ಕೂಡ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.
ಈ ಮೂಲಕ 'ಬಿಪರ್ಜಾಯ್' ಚಂಡಮಾರುತ ಕೊನೆಗೂ ನೆಲಕ್ಕೆ ಅಪ್ಪಳಿಸಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ತನ್ನ ಉಗ್ರರೂಪ ತೋರಿಸಿ, ನಂತರ ಈ ಚಂಡಮಾರುತ ಸೈಲೆಂಟ್ ಆಗುವ ನಿರೀಕ್ಷೆ ಇದೆ. ಸೈಕ್ಲೋನ್ ನೆಲಕ್ಕೆ ಅಪ್ಪಳಿಸಿದ ಬಳಿಕ ಅದರ ಪ್ರಭಾವ ಕೂಡ ಕಡಿಮೆ ಆಗುತ್ತದೆ. ಆದರೆ 'ಬಿಪರ್ಜಾಯ್' ಚಂಡಮಾರುತದ ಗಾತ್ರವೇ ಈಗ ಮತ್ತಷ್ಟು ಟೆನ್ಷನ್ ಹೆಚ್ಚು ಮಾಡುತ್ತಿದೆ. ಹೀಗಾಗಿ ಕ್ಷಣಕ್ಷಣಕ್ಕೂ ಪರಿಸ್ಥಿತಿಯ ಅವಲೋಕನ ಮಾಡ್ತಿದೆ ಹವಾಮಾನ ಇಲಾಖೆ. ಇದೇ ಕಾರಣಕ್ಕೆ ಸೂಕ್ಷ್ಮ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ 1 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಕೇಂದ್ರ ಸರ್ಕಾರ ಕ್ಷಣಕ್ಷಣಕ್ಕೂ ಮಾಹಿತಿ ಪಡೆಯುತ್ತಿದ್ದು, ಸೇನೆ ಕೂಡ ಸಜ್ಜಾಗಿದೆ.












Click it and Unblock the Notifications