ನೂತನ ರಾಷ್ಟ್ರಪತಿ ಮೊರೆ ಹೋಗಲು ಸಿದ್ಧವಾದ ನ್ಯಾ. ಕರ್ಣನ್
ನಿವೃತ್ತ ನ್ಯಾ. ಸಿ.ಎಸ್. ಕರ್ಣನ್ ಅವರಿಂದ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಕೆ ಸಂಭವ. ಸುಪ್ರೀಂ ಕೋರ್ಟ್ ನಿಂದ ಆರು ತಿಂಗಳ ಜೈಲು ಶಿಕ್ಷೆಗೆ ಒಳಗಾಗಿರುವ ನ್ಯಾ. ಕರ್ಣನ್. ಶಿಕ್ಷೆಯ ವಿರುದ್ಧ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಲು ನಿರ್ಧರ
ನವದೆಹಲಿ, ಜುಲೈ 25: ನ್ಯಾಯಾಂಗ ನಿಂದನೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿಂದ ಆರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕೋಲ್ಕತಾ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕರ್ಣನ್ ಅವರು, ತಮ್ಮ ಶಿಕ್ಷೆಯ ವಿರುದ್ಧ ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಮಂಗಳವಾರ, ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾ. ಕರ್ಣನ್ ಅವರ ವಕೀಲರಾದ ಮ್ಯಾಥ್ಯೂಸ್ ಜೆ. ನೆಡುಂಪರಾ ಅವರು, ''ನೂತನ ರಾಷ್ಟ್ರಪತಿಯವರಿಗೆ ನ್ಯಾ. ಕರ್ಣನ್ ಪ್ರಕರಣ ಮರುಪರಿಶೀಲಿಸುವಂತೆ ನೀಡುವಂತೆ ಮನವಿ ಸಲ್ಲಿಸಲಾಗುವುದು'' ಎಂದು ತಿಳಿಸಿದರು.
ಇತ್ತೀಚೆಗೆ, ಕರ್ಣನ್ ಅವರು, ಇದೇ ವಿಚಾರವಾಗಿ ಪಶ್ಚಿಮ ಬಂಗಾಳದ ರಾಜ್ಯಪಾಲರಿಗೂ ಮನವಿ ಸಲ್ಲಿಸಿದ್ದರು. ಆ ಅರ್ಜಿಯ ಬಗ್ಗೆ ಇನ್ನೂ ರಾಜ್ಯಪಾಲರು ನಿರ್ಧಾರ ಕೈಗೊಂಡಿಲ್ಲ. ಅದಕ್ಕೂ ಮೊದಲೇ, ಈಗ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲು ಸಜ್ಜಾಗಿದ್ದಾರೆ.
ತಾವು ಹಿಂದೆ ಸೇವೆ ಸಲ್ಲಿಸುತ್ತಿದ್ದ ಮದ್ರಾಸ್ ಹೈಕೋರ್ಟ್ ನಲ್ಲಿ ಹಿಂದುಳಿದ ಜಾತಿಗೆ ಸೇರಿದವರಾದ ತಮ್ಮನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂದು ದೂರಿದ್ದ ನ್ಯಾ. ಕರ್ಣನ್, ಆನಂತರ, ತಮ್ಮ ಸಹೋದ್ಯೋಗಿಗಳಾದ ಹಲವಾರು ನ್ಯಾಯಮೂರ್ತಿಗಳ ವಿರುದ್ಧ ಲಂಚ, ಮತ್ತಿತರ ಗಂಭೀರ ಆರೋಪಗಳನ್ನು ಮಾಡಿದ್ದರು.
ಹಾಗಾಗಿ, ಅವರನ್ನು ಕೋಲ್ಕತಾ ಹೈಕೋರ್ಟ್ ಗೆ ವರ್ಗಾವಣೆ ಮಾಡಲಾಗಿತ್ತು. ಆನಂತರ, ಸುಪ್ರೀಂ ಕೋರ್ಟ್ ಜಾರಿಗೊಳಿಸಿದ ಯಾವುದೇ ವಾರೆಂಟ್ ಗೂ ಅವರು ಕ್ಯಾರೇ ಅನ್ನದ ಕಾರಣ ಅವರ ವಿರುದ್ಧ ಬಂಧನ ವಾರಂಟ್ ಜಾರಿಗೊಂಡಿತ್ತು.