4 ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆಗೈದ ಸಿಆರ್ಪಿಎಫ್ ಸೈನಿಕ
ರಾಯಪುರ, ಡಿಸೆಂಬರ್ 10: ಸಿಆರ್ಪಿಎಫ್ ಸೈನಿಕನೋರ್ವ ತನ್ನ ನಾಲ್ವರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಛತ್ತೀಸ್ ಗಢದ ಬಿಜಾಪುರ್ ನಲ್ಲಿ ಶನಿವಾರ ನಡೆದಿದೆ.
ತನ್ನ ಸಹೊದ್ಯೋಗಿಗಳ ಜತೆ ಕಾದಾಟಕ್ಕಿಳಿದಿದ್ದ ಸಿಆರ್ಪಿಎಫ್ ಸೈನಿಕ ತಾಳ್ಮೆ ಕಳೆದುಕೊಂಡು ತನ್ನ ಎಕೆ-47 ರೈಫಲ್ ನಿಂದ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ ನಾಲ್ವರು ಸಹೋದ್ಯೋಗಿಗಳು ಸಾವನ್ನಪ್ಪಿದ್ದು ಇನ್ನೋರ್ವ ಅರೆ ಸೇನಾ ಪಡೆ ಸೈನಿಕ ಗಾಯಗೊಂಡಿದ್ದಾರೆ.
35 ವರ್ಷ ವಯಸ್ಸಿನ ಸನತ್ ಕುಮಾರ್ ಗುಂಡಿ ಹಾರಿಸಿ ಕೊಲೆ ಮಾಡಿರುವ ಸೈನಿಕನಾಗಿದ್ದು ಆತನನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಘಟನೆ ಹೇಗೆ ನಡೆಯಿತು, ಯಾಕೆ ನಡೆಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಛತ್ತೀಸ್ ಗಢದ ಬಿಜಾಪುರ್ ನಲ್ಲಿ ನಕ್ಸಲರ ಉಪಟಳ ಹೆಚ್ಚಾಗಿದ್ದು ಈ ಹಿನ್ನಲೆಯಲ್ಲಿ ಇಲ್ಲಿಗೆ ಸಿಆರ್ಪಿಎಫ್ ಪಡೆಯನ್ನು ನಿಯೋಜಿಸಲಾಗಿತ್ತು. ಇದರಲ್ಲಿ ಸಿಆರ್ಪಿಎಫ್ 168ನೇ ಬೆಟಾಲಿಯನ್ ನ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿದೆ.
#Visuals from Chhattisgarh: 1 injured jawan & bodies of 4 killed in firing by a CRPF jawan in Bijapur's Basaguda CRPF 168 Battalion Camp brought to hospital in Jagdalpur, accused apprehended & special team formed to probe the case pic.twitter.com/E7PpNQKk6h
— ANI (@ANI) December 9, 2017
ಸನತ್ ಕುಮಾರ್ ಗುಂಡಿಗೆ ಎಸ್ಐ ವಿಕಿ ಶರ್ಮಾ, ಮೇಘ್ ಸಿಂಗ್, ಎಎಸ್ಐ ರಾಜೀವ್ ಸಿಂಗ್ ಹಾಗೂ ಕಾನ್ಸ್ಟೇಬಲ್ ಸಂಕರ ರಾವ್ ಮೃತಪಟ್ಟಿದ್ದಾರೆ. ಎಎಸ್ಐ ಗಜಾನಂದ್ ಗಾಯಗೊಂಡಿದ್ದು ಅವರನ್ನು ಹೆಲಿಕಾಪ್ಟರ್ ಮೂಲಕ ರಾಯಪುರಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗಿದೆ.
ಇವರೆಲ್ಲಾ ಸನತ್ ಕುಮಾರ್ ಗಿಂತ ಹಿರಿಯರಾಗಿದ್ದು ರಜೆ ನೀಡುವ ವಿಷಯದಲ್ಲಿ ಕಾದಾಟ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿದೆ.