Government Employee: ಪಿಂಚಣಿದಾರರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ನವದೆಹಲಿ, ಸೆಪ್ಟೆಂಬರ್ 05: ಪಿಂಚಣಿ ಪಡೆಯುವ ನಿವೃತ್ತ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಇನ್ನು ಮುಂದೆ ಭಾರತದ ಯಾವುದೇ ಬ್ಯಾಂಕ್ ಖಾತೆಗಳಿಂದ ಪಿಂಚಣಿ ಪಡೆಯಬಹುದು. ಈ ಯೋಜನೆಯಿಂದಾಗಿ ಸುಮಾರು 78 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದ್ದು, ಇದರಿಂದಾಗಿ ಅವರು ತಮ್ಮ ಖಾತೆ ಇರುವ ನಗರದ ಬ್ಯಾಂಕ್ಗಳನ್ನು ಹುಡುಕಿಕೊಂಡು ಹೋಗುವುದು ಸಹ ತಪ್ಪಲಿದೆ.
ನಿವೃತ್ತಿ ನಂತರ ಮೊದಲ ಬಾರಿಗೆ ಪಿಂಚಣಿ ಬಿಡುಗಡೆಯಾದ ಬಳಿಕ ನಿವೃತ್ತ ಉದ್ಯೋಗಿಗಳು ಬ್ಯಾಂಕ್ಗೆ ಭೇಟಿ ನೀಡಿ ಪಿಂಚಣಿ ಸಂಬಂಧಿತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದೆ. ಇದಕ್ಕಾಗಿ ಅವರು ತಮ್ಮ ಖಾತೆ ಇರುವ ನಗರದ ಬ್ಯಾಂಕ್ ಅನ್ನು ಹುಡುಕಿಕೊಂಡು ಹೋಗಬೇಕಿತ್ತು.

ಆದರೆ ಹೊಸ ಪಿಂಚಣಿ ಯೋಜನೆ ಪ್ರಕಾರ ನಿವೃತ್ತರಾದ ಬಳಿಕ ಸರ್ಕಾರಿ ನೌಕರರ ಪಿಂಚಣಿಯನ್ನು ತಕ್ಷಣ ಬಿಡುಗಡೆ ಮಾಡಲಾಗುತ್ತದೆ. ನಿವೃತ್ತ ನೌಕರರು ಬ್ಯಾಂಕ್ಗೆ ಹೋಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪರಿಶೀಲನೆಗೊಳಪಡುವ ಅಗತ್ಯವೂ ಸಹ ಇಲ್ಲ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಎಪಿಎಫ್ ನೌಕರರ ಪಿಂಚಣಿ ಯೋಜನೆ, ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ.
ಇದರಿಂದಾಗಿ ರಾಷ್ಟ್ರೀಯ ಮಟ್ಟದ ಕೇಂದ್ರೀಕೃತ ವ್ಯವಸ್ಥೆ ಜಾರಿಯಾಗಲಿದ್ದು, ನಿವೃತ್ತ ಉದ್ಯೋಗಿಗಳು ಬ್ಯಾಂಕುಗಳಿಗೆ ಅಲೆದಾಡುವುದನ್ನು ಸಿಪಿಪಿಎಸ್ ತಪ್ಪಿಸಲಿದೆ. ಅಲ್ಲದೇ ಈ ವ್ಯವಸ್ಥೆ ಅನ್ವಯ ಭಾರತದಾದ್ಯಂತ ಯಾವುದೇ ಬ್ಯಾಂಕ್, ಯಾವುದೇ ಶಾಖೆಯ ಮೂಲಕ ಪಿಂಚಣಿ ವಿತರಣೆ ಮಾಡುವ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಲಾಗುತ್ತದೆ.
ಅನುಕೂಲ ಹೇಗೆ?; ಹೊಸ ಯೋಜನೆಯ ಅನ್ವಯ ಸರ್ಕಾರ ಆಧಾರ್ ಆಧಾರಿತ ಪಾವತಿ ಸೇತುವೆ ವ್ಯವಸ್ಥೆ ಮೂಲಕ ಬ್ಯಾಂಕ್ ಖಾತೆಗೆ ಪಿಂಚಣಿಯನ್ನು ಬಿಡುಗಡೆ ಮಾಡುತ್ತದೆ. ಈ ಹೊಸ ಆನ್ಲೈನ್ ವ್ಯವಸ್ಥೆಯಿಂದ ನೌಕರರು ತಮ್ಮ ನಗರ/ ಪಟ್ಟಣದ ಬ್ಯಾಂಕ್ ಖಾತೆಗೆ ಹೋಗಿ ಪಿಂಚಣಿ ಪಡೆಯಬಹುದು. ಇದರಿಂದಾಗಿ ಪಿಂಚಣಿದಾರರು ತಮ್ಮ ಪಿಂಚಣಿಗಳನ್ನು ಯಾವುದೇ ಬ್ಯಾಂಕ್ನಿಂದ, ಯಾವುದೇ ಶಾಖೆಯಿಂದ, ದೇಶದ ಯಾವ ಭಾಗದಿಂದಲಾದರೂ ಸ್ವೀಕರಿಸಲು ಅವಕಾಶ ಮಾಡಿಕೊಡುತ್ತದೆ.
ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ, "ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ ಅನುಮೋದನೆಯು ಇಪಿಎಫ್ಒನ ಆಧುನೀಕರಣದಲ್ಲಿ ಮಹತ್ವದ ಮೈಲಿಗಲ್ಲು. ಪಿಂಚಣಿದಾರರು ತಮ್ಮ ಪಿಂಚಣಿಗಳನ್ನು ಯಾವುದೇ ಬ್ಯಾಂಕ್ನಿಂದ, ಯಾವುದೇ ಶಾಖೆಯಿಂದ, ದೇಶದ ಯಾವ ಭಾಗದಿಂದಲಾದರೂ ಸ್ವೀಕರಿಸಲು ಇದು ಅನುವು ಮಾಡಿಕೊಡಲಿದೆ" ಎಂದು ಹೇಳಿದ್ದಾರೆ.
"ಪಿಂಚಣಿದಾರರು ಎದುರಿಸುತ್ತಿದ್ದ ದೀರ್ಘಕಾಲೀನ ಸವಾಲುಗಳನ್ನು ಇದು ಪರಿಹರಿಸುತ್ತದೆ. ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯು ಇಪಿಎಫ್ಒದ 78 ಲಕ್ಷಕ್ಕೂ ಹೆಚ್ಚು ಇಪಿಎಸ್ ಪಿಂಚಣಿದಾರರಿಗೆ ಅನುಕೂಲ ಮಾಡಿಕೊಡಲಿದೆ. ಪಿಂಚಣಿದಾರರು ಸ್ಥಳವನ್ನು ಬದಲಾಯಿಸಿದಾಗ ಅಥವಾ ಅವರ ಬ್ಯಾಂಕ್ ಅಥವಾ ಶಾಖೆಯನ್ನು ಬದಲಾಯಿಸಿದಾಗ ಪಿಂಚಣಿ ಪಾವತಿ ಆದೇಶಗಳನ್ನು ಒಂದು ಕಛೇರಿಯಿಂದ ಇನ್ನೊಂದಕ್ಕೆ ವರ್ಗಾಯಿಸುವ ಅಗತ್ಯವಿಲ್ಲ. ಭಾರತದಾದ್ಯಂತ ಪಿಂಚಣಿ ವಿತರಣೆಯನ್ನು ಸಿಪಿಪಿಎಸ್ ಖಚಿತಪಡಿಸುತ್ತದೆ. ನಿವೃತ್ತಿಯ ನಂತರ ಸ್ವಗ್ರಾಮಕ್ಕೆ ತೆರಳುವ ಪಿಂಚಣಿದಾರರಿಗೆ ಇದು ಉತ್ತಮವಾಗಿದೆ" ಎಂದರು.
ಈ ಯೋಜನೆ 1ನೇ ಜನವರಿ 2025 ರಿಂದ ಜಾರಿಗೆ ಬರಲಿದೆ. ಇದಕ್ಕಾಗಿಯೇ ಸಿಪಿಪಿಎಸ್ ವ್ಯವಸ್ಥೆಯು ಅಸ್ತಿತ್ವದಲ್ಲಿರುವ ಇಪಿಎಫ್ಒದ ಪ್ರತಿಯೊಂದು ವಲಯ ಮತ್ತು ಪ್ರಾದೇಶಿಕ ಕಚೇರಿಯ ಬ್ಯಾಂಕ್ಗಳ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಪಿಂಚಣಿ ಪ್ರಾರಂಭದ ಸಮಯದಲ್ಲಿ ಪಿಂಚಣಿದಾರರು ಯಾವುದೇ ಪರಿಶೀಲನೆಗಾಗಿ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ ಮತ್ತು ಬಿಡುಗಡೆಯಾದ ತಕ್ಷಣ ಪಿಂಚಣಿಯನ್ನು ಜಮಾ ಮಾಡಲಾಗುತ್ತದೆ.












Click it and Unblock the Notifications