ಅಬ್ದುಲ್ ಕಲಾಂ ಸಮಾಧಿ ಸುತ್ತ ಏನಿದೆಲ್ಲ ಹೊಲಸು, ಛೀಛೀ
ರಾಮೇಶ್ವರಂ, ಡಿಸೆಂಬರ್ 21 : ಭಾರತ ಕಂಡ ಅತ್ಯಂತ ಪ್ರತಿಭಾನ್ವಿತ ವಿಜ್ಞಾನಿ, ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಅಸುನೀಗಿ ಇನ್ನೂ ಐದು ತಿಂಗಳೂ ಆಗಿಲ್ಲ, ಆದರೆ ರಾಮೇಶ್ವರಂನ ಪೀ ಕರುಂಬುನಲ್ಲಿರುವ ಅವರ ಸಮಾಧಿ ಸ್ಥಳ ದಿವ್ಯ ನಿರ್ಲಕ್ಷ್ಯಕ್ಕೆ ಈಡಾಗಿದೆ.
ನಾಯಿ, ಹಸುಗಳು ಬಂದು ಸಮಾಧಿ ಸ್ಥಳದಲ್ಲಿಯೇ ಒಂದು ಎರಡು ಎರಡನ್ನೂ ಮಾಡುತ್ತಿವೆ. ಅವನ್ನು ತಡೆಯುವವರಿಲ್ಲ, ಕಟ್ಟಿಹಾಕುವವರಿಲ್ಲ. ಇನ್ನು ಸಮಾಧಿ ನೋಡಲು ಬಂದ ಪ್ರಜ್ಞಾವಂತ ಪ್ರಜೆಗಳು ಅಲ್ಲಿಯೇ ಏನೆಲ್ಲಾ ತಿಂದು ಪ್ಲಾಸ್ಟಿಕ್ ಕವರುಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಫೋಟೋ ತೆಗೆಯುವ ಹುಮ್ಮಸ್ಸಿನಲ್ಲಿ ಬ್ಯಾರಿಕೇಡ್ ದಾಟಿ ನುಗ್ಗಿ ಹಾವಳಿ ಎಬ್ಬಿಸುತ್ತಿದ್ದಾರೆ. [ಅಗಲಿದ ಅಬ್ದುಲ್ ಕಲಾಂಗೆ ಟ್ವಿಟ್ಟರ್ ನಲ್ಲಿ ಅಶ್ರುತರ್ಪಣ]
ಇದೆಲ್ಲ ಘಟನೆಗಳಿಂದಾಗಿ ಅಬ್ದುಲ್ ಕಲಾಂ ಕುಟುಂಬಸ್ಥರಿಗೆ ಸಹಜವಾಗಿ ನೋವಾಗಿದೆ. ಸ್ಮಾರಕದ ಕಾಮಗಾರಿ ತಡಾವಗುತ್ತಿರುವುದಕ್ಕೆ ಕೂಡ ರಾಜ್ಯ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂಷಿಸುತ್ತಿದ್ದಾರೆ. ಕಲಾಂ ಸತ್ತಾಗ ನೀಡಿದ್ದ ಭರವಸೆಯನ್ನು ರಾಜಕಾರಣಿಗಳು ಮರೆತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.
"ಈ ಸ್ಥಳದಲ್ಲಿ ಕಲಾಂ ಅವರನ್ನು ಸಮಾಧಿ ಮಾಡುವುದು ಸರಕಾರದ ಇಚ್ಛೆಯಾಗಿತ್ತು. ಇಲ್ಲದಿದ್ದರೆ, ನಾವೇ ನಿರ್ವಹಣೆ ಮಾಡುತ್ತಿರುವ ಅಬಿಲ್ ಕಬಿಲ್ ದರ್ಗಾದಲ್ಲಿ ಕಲಾಂ ಅವರ ದೇಹವನ್ನು ಸಮಾಧಿ ಮಾಡುತ್ತಿದ್ದೆವು" ಎಂದು ಕಲಾಂ ಅವರ ಅಣ್ಣ 99 ವಯಸ್ಸಿನ ವಯೋವೃದ್ಧ ಎಪಿಜೆಎಂ ಮರೈಕಯಾರ್ ಅವರು ಒನ್ಇಂಡಿಯಾ ಜೊತೆ ತಮ್ಮ ನೋವು ಹಂಚಿಕೊಂಡರು. [ಗುರು ಅಬ್ದುಲ್ ಕಲಾಂ ಆಸ್ತಿ ಎಷ್ಟು? ಯಾರಿಗೆ ಸೇರಲಿದೆ?]
ಜನರ ಬೆಂಬಲದೊಂದಿಗೆ ಸ್ಮಾರಕ ನಿರ್ಮಾಣ
"ನಮಗೆ ತುಂಬಾ ನೋವಾಗಿದೆ. ಈ ವಯಸ್ಸಿನಲ್ಲಿ ನಾನು ಇದಕ್ಕೆಲ್ಲಾ ಅಲೆದಾಡಬೇಕೆ? ಕಲಾಂ ಅವರ ಸ್ಮಾರಕ ನಿರ್ಮಿಸಲು ಸರಕಾರಕ್ಕೆ ಇಚ್ಛೆ ಇಲ್ಲದಿದ್ದರೆ, ಇಡೀ ವಿಶ್ವದಾದ್ಯಂತ ಇರುವ ಕಲಾಂ ಅವರ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳ ಸಹಕಾರದೊಂದಿಗೆ ಸ್ಮಾರಕವನ್ನು ನಿರ್ಮಿಸುತ್ತೇವೆ" ಎಂದು ಮರೈಕಯಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
"ಈ ಜಾಗವನ್ನು ಸ್ವಚ್ಛವಾಗಿಡುವುದು ಪೊಲೀಸ್ ಕರ್ತವ್ಯವಲ್ಲ. ಮೂರು ದಿನಗಳಿಗೊಮ್ಮೆ ಸಮಾಧಿ ಸ್ಥಳವನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ನಮಗೆ ಹಲವರು ಹೇಳಿದ್ದಾರೆ. ದಿನಕ್ಕೆ ನೂರಾರು ಜನರು ಬಂದು ಸಮಾಧಿಯನ್ನು ಸಂದರ್ಶಿಸುತ್ತಾರೆ. ಈ ಜಾಗವನ್ನು ಈ ಕಾರಣಕ್ಕಾದರೂ ಸ್ವಚ್ಛವಾಗಿಡಬೇಕು ಮತ್ತು ಕಲಾಂ ಗೌರವ ಕಾಪಾಡಬೇಕು" ಎಂದು ಅವರು ಕಳಕಳಿ ವ್ಯಕ್ತಪಡಿಸಿದರು.
ಇದು ಕೇಂದ್ರದ ಕರ್ತವ್ಯ : ಸಂಸದ ಅನ್ವರ್ ರಾಜಾ
ರಾಮೇಶ್ವರಂನ ಎಐಎಡಿಎಂಕೆಯ ಸಂಸದ ಎ ಅನ್ವರ್ ರಾಜಾ ಅವರು ಹೇಳುವುದೇನೆಂದರೆ, ರಾಜ್ಯ ಸರಕಾರ ಸ್ಮಾರಕಕ್ಕಾಗಿ ಒಂದೂವರೆ ಎಕರೆ ಜಮೀನನ್ನು ನೀಡಿದೆ. ಡಾ. ಕಲಾಂ ಗೌರವಾರ್ಥವಾಗಿ ನಮ್ಮ ನಾಯಕಿ ಜೆ ಜಯಲಲಿತಾ ಅವರು ಹಲವಾರು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಇನ್ನು ಇದನ್ನು ಮುಂದುವರೆಸಿಕೊಂಡು ಹೋಗಬೇಕಾಗಿರುವುದು ಕೇಂದ್ರ ಸರಕಾರದ ಕರ್ತವ್ಯ.
"ಕಳೆದ ವಾರ ಶೂನ್ಯ ಅವಧಿಯಲ್ಲಿ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದೆ. ಆದರೆ, ಬಿಜೆಪಿ ಸರಕಾರದಿಂದ ಕಲಾಂ ಗೌರವವನ್ನು ಎತ್ತಿಹಿಡಿಯುವಂತಹ ಯಾವುದೇ ಹೇಳಿಕೆಗಳು ಬಂದಿಲ್ಲ. ರಾಜ್ಯ ಸರಕಾರ ಮಾಡಬೇಕಾಗಿರುವುದನ್ನೆಲ್ಲ ಮಾಡಿದೆ. ಇನ್ನು ಸ್ಮಾರಕದ ನಿರ್ಮಾಣ ವಿಳಂಬವಾಗುತ್ತಿದ್ದರೆ ಅದಕ್ಕೆ ಕೇಂದ್ರ ಸರಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣ. ರಕ್ಷಣಾ ಸಚಿವಾಲಯ ಸ್ಮಾರಕದ ನಿರ್ಮಾಣದ ಹೊಣೆಯನ್ನು ಹೊರಬೇಕು" ಎಂದು ಅನ್ವರ್ ಮರುದೂರಿದರು.