ಸಾವಿನ ಹಿಂದಿನ ಸತ್ಯ: ಕೊರೊನಾವೈರಸ್ 2ನೇ ಅಲೆ ಅಪಾಯಕಾರಿಯೇ?
ನವದೆಹಲಿ, ಮೇ 25: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯು ಜನರ ಉಸಿರು ಕಿತ್ತುಕೊಳ್ಳುತ್ತಿದೆ. ಮೂರ್ನಾಲ್ಕು ತಿಂಗಳಿನಲ್ಲಿ ಅತಿಹೆಚ್ಚು ಕೊವಿಡ್-19 ಸೋಂಕಿತರು ಪ್ರಾಣ ಕಳೆದುಕೊಂಡಿರುವುದು ಅಂಕಿ-ಅಂಶಗಳ ಸಹಿತ ಸಾಬೀತಾಗಿದೆ.
ದೇಶದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಈ ಪೈಕಿ ಶೇ.50ರಷ್ಟು ಮಂದಿಯು ಫೆಬ್ರವರಿ ತಿಂಗಳಿಂದ ಆರಂಭವಾದ ಕೊವಿಡ್-19 ಎರಡನೇ ಅಲೆಯಿಂದ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಮಾರ್ಚ್ ತಿಂಗಳ ನಂತರದ ಏಳು ವಾರಗಳಲ್ಲಿ 1.40 ಲಕ್ಷ ಜನರು ಕೊರೊನಾವೈರಸ್ ಸೋಂಕಿನಿಂದಲೇ ಜೀವ ಕಳೆದುಕೊಂಡಿದ್ದಾರೆ.
ಸಖತ್ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ನಿವಾರಣೆಗೆ UV-C ಬೆಳಕಿನ ಕಿರಣ!
ಜಗತ್ತಿನಲ್ಲಿ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ದಾಖಲಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಕೊವಿಡ್-19 ಸೋಂಕಿನಿಂದ ಅಮೆರಿಕಾದಲ್ಲಿ 5.84 ಲಕ್ಷ ಜನರು ಸಾವನ್ನಪ್ಪಿದ್ದರೆ, ಬ್ಪೆಜಿಲ್ ನಲ್ಲಿ 4.48 ಲಕ್ಷ ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿ 3.07 ಲಕ್ಷ ಜನರು ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಅತಿಹೆಚ್ಚು ಸಾವಿನ ಸಂಖ್ಯೆಯನ್ನು ದಾಖಲಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ದೇಶವು ಮೂರನೇ ಸ್ಥಾನದಲ್ಲಿದೆ. ಕೊರೊನಾವೈರಸ್ ಮೂರನೇ ಅಲೆಯ ಭೀತಿಯಲ್ಲಿ ಇರುವ ಭಾರತದಲ್ಲಿ 2ನೇ ಅಲೆ ಎಷ್ಟೊಂದು ಅಪಾಯಕಾರಿ ಎನಿಸಿದೆ. ಈ ಅವಧಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವುದಕ್ಕೆ ಕಾರಣವೇನು ಎಂಬ ಇತ್ಯಾದಿ ಪ್ರಶ್ನೆಗಳಿಗೆ ಸೂಕ್ತ ಉತ್ತರ ಇಲ್ಲಿದೆ ಓದಿ...
ದೇಶದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ
ಕೊರೊನಾವೈರಸ್ ಎರಡನೇ ಅಲೆಯು ಭಾರತದಲ್ಲಿ ಮರಣಮೃದಂಗ ಬಾರಿಸುತ್ತಿದೆ. ಮೇ 6ರಿಂದ ದೇಶದಲ್ಲಿ ಪ್ರತಿನಿತ್ಯ 4,000ಕ್ಕೂ ಅಧಿಕ ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿರುವುದು ವರದಿಯಾಗಿದೆ. ಕಳೆದ ಎರಡು ವಾರಗಳಿಂದ ದಿನವೂ 4,000 ಜನರು ಕೊರೊನಾವೈರಸ್ ಸೋಂಕಿನಿಂದಲೇ ಜೀವ ಕಳೆದುಕೊಂಡಿದ್ದಾರೆ. ಏಳು ದಿನಗಳಲ್ಲಿ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಏರಿಳಿತ ಕಂಡು ಬಂದಿದೆ. ಆದರೆ ಸರಾಸರಿ ಸಾವಿನ ಸಂಖ್ಯೆಯು 4,190 ಆಗಿದೆ.
ಮೇ ತಿಂಗಳಿನಲ್ಲೇ 92,000 ಜನ ಸಾವು
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಆರಂಭವಾದ ದಿನಗಳಿಂದ ಇಂದಿನವರೆಗಿನ ಲೆಕ್ಕವನ್ನು ನೋಡಿದರೆ ಮೇ ತಿಂಗಳು ಅತಿಹೆಚ್ಚು ಅಪಾಯಕಾರಿ ಎನಿಸಿದೆ. ಮೇ ತಿಂಗಳ ಕಳೆದ 25 ದಿನಗಳಲ್ಲೇ 92,000 ಮಂದಿ ಕೊವಿಡ್-19 ಸೋಂಕಿನಿಂದ ಉಸಿರು ನಿಲ್ಲಿಸಿದ್ದಾರೆ. ಇದರ ಮಧ್ಯೆ ಭರವಸೆ ಮೂಡಿಸುವ ಒಂದು ಅಂಶವೂ ಇದೆ. ಇಂದು ಲೆಕ್ಕಕ್ಕೆ ತೆಗೆದುಕೊಳ್ಳುವ ಸಾವಿನ ಸಂಖ್ಯೆಯು ಎರಡು ವಾರಗಳ ಹಿಂದೆಯೇ ಗತಿಸಿರುವ ಅಂಶ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಶೇ.50ರಷ್ಟು ಸಾವಿನ ಪ್ರಕರಣಗಳು ಇದೇ ರೀತಿಯಲ್ಲಿ ದಾಖಲಾಗಿವೆ ಎಂದು ತಿಳಿದು ಬಂದಿದೆ.
ಕರ್ನಾಟಕದಲ್ಲಿ ಕೊರೊನಾವೈರಸ್ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಹೇಗೆ?
ಉದಾಹರಣೆ: ಮಹಾರಾಷ್ಟ್ರದಲ್ಲಿ ಭಾನುವಾರ 1320 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ ಎಂದು ವರದಿಯಾಗುತ್ತದೆ. ಆದರೆ ಈ ಪೈಕಿ 726ಕ್ಕೂ ಹೆಚ್ಚು ಮಂದಿ ಎರಡು ವಾರಗಳ ಹಿಂದೆಯೇ ಮೃತಪಟ್ಟಿದ್ದು, ಅದನ್ನು ಇಂದಿನ ಲೆಕ್ಕಕ್ಕೆ ಸೇರಿಸಲಾಗುತ್ತಿದೆ. ಅತಿಹೆಚ್ಚು ಸಾವಿನ ಪ್ರಕರಣಗಳು ವರದಿಯಾಗುತ್ತಿರುವ ಕರ್ನಾಟಕ ಮತ್ತು ತಮಿಳುನಾಡಿನಲ್ಲೂ ಇದೇ ರೀತಿ ಆಗುತ್ತಿದೆ.
ಸಾವಿನ ಲೆಕ್ಕಾಚಾರದಲ್ಲೂ ಹಿಂದುಳಿದ ಕರ್ನಾಟಕ
ಪ್ರಸ್ತುತ ವಿದ್ಯಮಾನದಲ್ಲಿ ದಾಖಲಾಗುತ್ತಿರುವ ಕೊರೊನಾವೈರಸ್ ಸಾವಿನ ಪ್ರಕರಣಗಳು ಹೊಸತೇನಲ್ಲ. ಕರ್ನಾಟಕದಲ್ಲಿ ಇಂದಿಗೂ ಮಾರ್ಚ್ ತಿಂಗಳಿನಲ್ಲಿ ಕೊವಿಡ್-19 ಸೋಂಕಿನಿಂದ ಮೃತಪಟ್ಟವರನ್ನು ಲೆಕ್ಕಕ್ಕೆ ಸೇರಿಸಿಲ್ಲ. ಸಾವಿನ ಸಂಖ್ಯೆ ದಾಖಲಾತಿಯಲ್ಲೂ ಹಿಂದೆ ಉಳಿದುಕೊಂಡಿದ್ದು, ಇತ್ತೀಚಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವುದಕ್ಕೆ ಒಂದು ಕಾರಣವಾಗಿದೆ. ಮೇ 25ರಂದು ಕೊರೊನಾವೈರಸ್ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಲೆಕ್ಕವನ್ನು ಮುಂದಿನ ಎರಡು ಮೂರು ವಾರಗಳ ನಂತರದಲ್ಲಿ ವರದಿ ಮಾಡಲಾಗುತ್ತಿದೆ. ಈ ಹಿಂದುಳಿಯುವಿಕೆಯೇ ಕರ್ನಾಟಕದಲ್ಲಿ ಕೊವಿಡ್-19 ಸಾವಿನ ಸಂಖ್ಯೆ ಏರಿಕೆಯಾಗಲು ಕಾರಣ ಎಂದು ತಿಳಿದು ಬಂದಿದೆ.
ಕೊರೊನಾವೈರಸ್ ಸಾವಿನ ಸಂಖ್ಯೆ ಏಕಾಏಕಿ ಏರಿಕೆ?
ಭಾರತದಲ್ಲಿ ಕೆಲವು ವಾರಗಳ ಹಿಂದೆ ಏಕಾಏಕಿ ಕೊರೊನಾವೈರಸ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡು ಬರಲಿಲ್ಲ. ಕಳೆದ 10 ದಿನಗಳಲ್ಲಿ ಕೊವಿಡ್-19 ಸಾವಿನ ಪ್ರಮಾಣದಲ್ಲಿ ಮೊದಲು ಏರಿಕೆ, ಬಳಿಕ ಸ್ಥಿರತೆ ಹಾಗೂ ಅಂತಿಮವಾಗಿ ಇಳಿಕೆಯಾಗುತ್ತಿದೆ. ಈ ವಾರದ ದಾಖಲಾಗಿರುವ ಸಾವಿನ ಸಂಖ್ಯೆಯು ಎರಡು ವಾರಗಳ ಹಿಂದಿನ ಲೆಕ್ಕಕ್ಕೆ ಸೇರಬೇಕಿತ್ತು. ಆದರೆ ಅದನ್ನು ಈ ವಾರಕ್ಕೆ ಸೇರ್ಪಡೆ ಮಾಡಲಾಗುತ್ತಿದೆ. ಆದ್ದರಿಂದ ಪ್ರಸ್ತುತ ಕೊವಿಡ್-19 ಸಾವಿನ ದರ ಹೆಚ್ಚಾಗಿ ಗೋಚರಿಸುತ್ತಿದೆ.
ಸಾವಿನ ಹಿಂದೆ ಬೆಡ್, ಆಕ್ಸಿಜನ್, ಐಸಿಯು ಕೊರತೆ ಕಾರಣ!
ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್, ವೈದ್ಯಕೀಯ ಆಮ್ಲಜನಕ ಹಾಗೂ ತುರ್ತು ನಿಗಾ ಘಟಕ ಸಿಗದೇ ಪ್ರಾಣ ಬಿಟ್ಟಿರುವುದೇ ಹೆಚ್ಚಾಗಿದೆ. ಕಳೆದ ಮಾರ್ಚ್ ತಿಂಗಳ ಎರಡನೇ ವಾರದಿಂದ ಜನರು ಚಿಕಿತ್ಸೆ ಸಿಗದೇ ಜೀವ ಕಳೆದುಕೊಂಡಿದ್ದು, ಏಪ್ರಿಲ್ ತಿಂಗಳಾಂತ್ಯದ ವೇಳೆಯಲ್ಲಿ ಅತಿಹೆಚ್ಚು ಸಾವಿನ ಸಂಖ್ಯೆ ದಾಖಲಾಗಿತ್ತು. ಏಪ್ರಿಲ್ ತಿಂಗಳ 3 ಮತ್ತು 4ನೇ ವಾರದಲ್ಲಿ ವರದಿಯಾದ ಕೊವಿಡ್-19 ಸಾವಿನ ಪ್ರಮಾಣವು ದೇಶದ ಒಟ್ಟು ಸಾವಿನ ಪ್ರಮಾಣವನ್ನೂ ಮೀರಿಸುವಂತಿದೆ.
10 ಸಾವಿರ ಕೊವಿಡ್-19 ಸೋಂಕಿತರಲ್ಲಿ 14 ಸಾವು
ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಾವಿನ ಪ್ರಮಾಣವು ಇತ್ತೀಚಿಗೆ ಹೆಚ್ಚಾಗಿದೆ. ಏಪ್ರಿಲ್ ತಿಂಗಳ ಎರಡು ವಾರಗಳಲ್ಲಿ ಸರಾಸರಿ ಸಾವಿನ ಪ್ರಮಾಣವು ದೇಶದ ಒಟ್ಟು ಸಾವಿನ ಪ್ರಮಾಣಕ್ಕಿಂತ ಅಧಿಕವಾಗಿದೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು ಕೊರೊನಾವೈರಸ್ ಸಾವಿನ ದರ ಶೇ.1.07ರಷ್ಟಿದೆ. ಕಳೆದ ಎರಡು ವಾರಗಳಲ್ಲಿ ಕೊವಿಡ್-19 ಸೋಂಕಿತರ ಸಾವಿನ ದರ ಶೇ. 1.34ರಷ್ಟಿದೆ. ದೇಶದಲ್ಲಿ 10,000 ಕೊರೊನಾವೈರಸ್ ಸೋಂಕಿತರ ಪೈಕಿ 107 ಮಂದಿ ಪ್ರಾಣ ಬಿಟ್ಟಿದ್ದರೆ, ಕಳೆದ ಎರಡು ವಾರಗಳಲ್ಲಿ 10,000 ಸೋಂಕಿತರಲ್ಲಿ 134 ಜನರು ಸಾವನ್ನಪ್ಪಿದ್ದಾರೆ.
ಯಾವ ರಾಜ್ಯದಲ್ಲಿ ಕೊರೊನಾವೈರಸ್ ಸಾವಿನ ಪ್ರಕರಣ?
ಭಾರತದಲ್ಲಿ ಕೊವಿಡ್-19 ಸೋಂಕಿನಿಂದ ಛತ್ತೀಸ್ ಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅತಿಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿವೆ. ಇತ್ತೀಚಿಗೆ ಈ ರಾಜ್ಯಗಳಲ್ಲಿ ಸಾವಿನ ಸಂಖ್ಯೆ ಇಳಿಮುಖವಾಗಿದೆ. ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಪ್ರತಿನಿತ್ಯ 800 ರಿಂದ 1,000 ಮಂದಿ ಕೊರೊನಾವೈರಸ್ ಸೋಂಕಿನಿಂದ ಮೃತಪಡುತ್ತಿದ್ದಾರೆ. 3 ದಿನಗಳಲ್ಲಿ ಕೇರಳದಲ್ಲಿ 634ಕ್ಕೂ ಹೆಚ್ಚು ಮಂದಿಗೆ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ.
ಕೊರೊನಾವೈರಸ್ ಪ್ರಕರಣ ಮತ್ತು ಸಾವಿನ ಸಂಖ್ಯೆ
ದೇಶದಲ್ಲಿ ಕೊರೊನಾವೈರಸ್ ಸೋಂಕಿನಿಂದ ಒಂದೇ ದಿನ 3,511 ಮಂದಿ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 3,07,231ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ1,96,427 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 3,26,850 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾರತದಲ್ಲಿ ಒಟ್ಟು 2,69,48,874 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,40,54,861 ಸೋಂಕಿತರು ಗುಣಮುಖರಾಗಿದ್ದು, ಇದರ ಹೊರತಾಗಿ 25,86,782 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.
ಒಂದೇ ದಿನ 20 ಲಕ್ಷ ಜನರಿಗೆ ಕೊವಿಡ್-19 ತಪಾಸಣೆ
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪತ್ತೆಗೆ ತಪಾಸಣೆ ವೇಗವನ್ನು ಹೆಚ್ಚಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 20,58,112 ಜನರ ಮಾದರಿಯನ್ನು ತಪಾಸಣೆಗೊಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 33,25,94,176 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.