ಕೊರೊನಾ ಲೆಕ್ಕಿಸದೇ ಕುಂಭಮೇಳಕ್ಕೆ ಹರಿದುಬಂದ ಜನಸಾಗರ
ಉತ್ತರಾಖಂಡ, ಜನವರಿ 15: ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಈಚೆಗೆ ನಿಯಂತ್ರಣಕ್ಕೆ ಬರುತ್ತಿವೆ. ಜೊತೆಗೆ ಲಸಿಕಾ ಕಾರ್ಯಕ್ರಮವೂ ಆರಂಭವಾಗುತ್ತಿದ್ದು, ಸೋಂಕಿನ ಪ್ರಮಾಣ ಇನ್ನಷ್ಟು ತಗ್ಗುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ಈ ಸಾಂಕ್ರಾಮಿಕ ಭೀತಿ ನಡುವೆ ಕುಂಭಮೇಳ ಆರಂಭಗೊಂಡಿದ್ದು, ಗಂಗಾ ತಟದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
ಕೊರೊನಾ ಸಾಂಕ್ರಾಮಿಕ ಸೋಂಕಿಗೂ ಕುಂಭಮೇಳಕ್ಕೆ ಬರುವ ಭಕ್ತರನ್ನು ತಡೆಯುವಲ್ಲಿ ಸಾಧ್ಯವಾಗಿಲ್ಲ. ಉತ್ತರಾಖಂಡದ ಹರಿದ್ವಾರದಲ್ಲಿ ಈ ಬಾರಿ ಕುಂಭಮೇಳ ಆರಂಭವಾಗಿದ್ದು, ಕೊರೊನಾ ಕಾರಣದಿಂದಾಗಿ ಹೆಚ್ಚಿನ ಜನರು ಆಗಮಿಸುವುದಿಲ್ಲ ಎಂಬ ನಿರೀಕ್ಷೆಯಿತ್ತು. ಆದರೆ ಕೊರೊನಾ ಸೋಂಕನ್ನು ಲೆಕ್ಕಿಸದೇ ಗುರುವಾರ ಕುಂಭಮೇಳಕ್ಕೆ ಜನರು ಜಮಾಯಿಸಿದ್ದರು.
ಲಕ್ಷಾಂತರ ಮಂದಿ ಕುಂಭಮೇಳದಲ್ಲಿ ಭಾಗವಹಿಸಿದ್ದಾಗಿ ಉತ್ಸವ ಆಯೋಜಕ ಸಿದ್ಧಾರ್ಥ ಚಕ್ರಪಾಣಿ ತಿಳಿಸಿದ್ದಾರೆ. ಕುಂಭಮೇಳಕ್ಕೆ ಲಕ್ಷಾಂತರ ಜನರು ಬಂದಿದ್ದಾರೆ, ಮುಂಜಾಗ್ರತಾ ಕ್ರಮಗಳೊಂದಿಗೆ ಕುಂಭಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಈಗಷ್ಟೇ ಜನಜೀವನ ಸಹಜ ಸ್ಥಿತಿಗೆ ಬರುತ್ತಿದ್ದು, ಜನಜಂಗುಳಿ ಸೇರುವ ಇಂಥ ಉತ್ಸವಗಳಿಂದ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚುವ ಭೀತಿ ಉಂಟಾಗಿದೆ. ತಮಿಳುನಾಡಿನ ಜಲ್ಲಿಕಟ್ಟು, ಕೋಲ್ಕತ್ತಾದ ಗಂಗಾಸಾಗರ ಹಾಗೂ ಕುಂಭಮೇಳದಂಥ ಉತ್ಸವಗಳು ಸೋಂಕನ್ನು ಮತ್ತೆ ಹೆಚ್ಚಿಸುವ ಆತಂಕ ಶುರುವಾಗಿದೆ.












Click it and Unblock the Notifications