India Lockdown: ಕೇಂದ್ರ ಸರ್ಕಾರದ ಈ ನಿಯಮಗಳ ಪಾಲನೆ ಕಡ್ಡಾಯ
ನವದೆಹಲಿ, ಮಾರ್ಚ್.25: ಮನೆಯಲ್ಲಿರಿ.. ಮನೆಯಲ್ಲಿರಿ.. ಮನೆಯಲ್ಲೇ ಇರಿ. ಕೊರೊನಾ ವೈರಸ್ ಸೋಂಕಿನಿಂದ ದೇಶವನ್ನು ರಕ್ಷಿಸಲು ಸಾಮಾಜಿಕ ಅಂತರವೊಂದೇ ಮೂಲಮಂತ್ರ ಎಂದು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಜೆಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.
ಮಾರ್ಚ್.24ರ ಮಧ್ಯರಾತ್ರಿ 12 ಗಂಟೆಯಿಂದ 21 ದಿನಗಳ ಕಾಲ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡುವುದಕ್ಕೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಮಾರಕ ರೋಗವನ್ನು ದೇಶದಿಂದ ಓಡಿಸುವುದಕ್ಕೆ ಪಣ ತೊಡುವಂತೆ ಭಾರತೀಯರಿಗೆ ಪ್ರಧಾನಮಂತ್ರಿ ಕರೆ ಕೊಟ್ಟಿದ್ದಾರೆ.
ಮಧ್ಯರಾತ್ರಿ 12 ಗಂಟೆಯಿಂದ 21 ದಿನ ಭಾರತಕ್ಕೆ ಭಾರತವೇ ಬಂದ್!
ಭಾರತೀಯರಿಗೆ ಈ ಲಾಕ್ ಡೌನ್ ನಿಂದ ಯಾವುದೇ ರೀತಿ ಅನಾನೂಕೂಲವಾಗದಂತೆ ಸರ್ಕಾರವೇ ನೋಡಿಕೊಳ್ಳಲಿದೆ. ಕೇಂದ್ರದ ನೆರವಿನ ಜೊತೆಗೆ ರಾಜ್ಯ ಸರ್ಕಾರಗಳು ಕೂಡಾ ಕೈಜೋಡಿಸಿದ್ದು, ಮನೆ ಮನೆಗೆ ಆಹಾರ ವಿತರಣೆ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದರ ಮಧ್ಯೆ ದೇಶದಲ್ಲಿನ ಲಾಕ್ ಡೌನ್ ನಿಯಮವನ್ನು ಹೇಗೆ ಪಾಲಿಸಬೇಕು ಎಂದು ಕೇಂದ್ರ ಸರ್ಕಾರವೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರ ಮತ್ತು ಸ್ವಾಯತ್ತ ಸಂಸ್ಥೆಗಳು ಬಂದ್
ಭಾರತದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಎಲ್ಲ ಕಚೇರಿಗಳನ್ನು ಮುಂದಿನ 21 ದಿನಗಳವರೆಗೂ ಬಂದ್ ಮಾಡಬೇಕು. ಇದರ ಜೊತೆಗೆ ಸಹಕಾರಿ ಸಂಘ ಮತ್ತು ಸಂಸ್ಥೆಗಳು ಕೂಡಾ ಬಂದ್ ಮಾಡಬೇಕು. ಆದರೆ ವಿಪತ್ತು ನಿರ್ವಹಣಾ ಪಡೆ, ವಿದ್ಯುತ್ ಕೇಂದ್ರ ಮತ್ತು ಘಟಕಗಳ ಸಿಬ್ಬಂದಿ, ಅಂಚೆ ಕಚೇರಿ, ರಾಷ್ಟ್ರೀಯ ಮಾಹಿತಿ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ರಾಜ್ಯ ಸರ್ಕಾರ ಅಧೀನದ ಕಚೇರಿಗಳಿಗೆ ಬೀಗ
ಕೇಂದ್ರ ಸರ್ಕಾರವಷ್ಟೇ ಅಲ್ಲ ರಾಜ್ಯ ಸರ್ಕಾರ ಅಡಿಯಲ್ಲಿ ಬರುವ ಬಹುತೇಕ ಕಚೇರಿಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ಇದರ ನಡುವೆ ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೊಲೀಸ್, ಹೋಮ್ ಗಾರ್ಡ್, ಸಿವಿಲ್ ಡಿಫೆನ್ಸ್, ಅಗ್ನಿಶಾಮಕ ದಳ ಸಿಬ್ಬಂದಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಖಜಾನೆ, ವಿದ್ಯುತ್, ಜಲಸಂಪನ್ಮೂಲ, ಮಹಾನಗರ ಪಾಲಿಗೆ, ಪುರಸಭೆಗಳಿಗೆ ವಿನಾಯಿತಿ ನೀಡಲಾಗಿದೆ. ಕೆಲವು ಸರ್ಕಾರಿ ಕಚೇರಿಗಳಲ್ಲಿ ಸೀಮಿತ ಸಿಬ್ಬಂದಿಯನ್ನಷ್ಟೇ ಬಳಸಿಕೊಂಡು ಕಾರ್ಯ ನಿರ್ವಹಿಸಬೇಕು. ಉಳಿದ ಸಿಬ್ಬಂದಿ ಮನೆಯಲ್ಲಿ ಇದ್ದುಕೊಂಡೇ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.
ದೇಶದ ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಇಲ್ಲ
ಇನ್ನು, ದೇಶದಲ್ಲಿ ವೈದ್ಯಕೀಯ ಸೇವೆಗಳಿಗೆ ವ್ಯತ್ಯಯ ಆಗುವುದಿಲ್ಲ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಸೇರಿದ ವೈದ್ಯಕೀಯ ತಪಾಸಣಾ ಕೇಂದ್ರ, ಆರೋಗ್ಯ ಸುರಕ್ಷತಾ ವಸ್ತುಗಳ ಉತ್ಪಾದನೆ ಮತ್ತು ವಿತರಣಾ ಘಟಕಗಳು, ಔಷಧಿ ಉಪಕರಣಗಳು, ಲ್ಯಾಬೋರೇಟರಿ, ಔಷಧಿ ಅಂಗಡಿಗಳು, ನರ್ಸಿಂಗ್ ಹೋಮ್, ಆಂಬುಲೆನ್ಸ್ ಸೇವೆಗಳಲ್ಲಿ ತೊಂದರೆ ಆಗುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ವಾಣಿಜ್ಯ ಅಂಗಡಿ ಮುಂಗಟ್ಟುಗಳೆಲ್ಲ ಬಂದ್
ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಎಲ್ಲ ರೀತಿ ಖಾಸಗಿ ವಾಣಿಜ್ಯ ಮಳಿಗೆಗಳು ಬಂದ್ ಮಾಡುವಂತೆ ಸೂಚಿಸಲಾಗಿದೆ. ರೇಷನ್ ಅಂಗಡಿ, ದಿನಸಿ ಅಂಗಡಿ, ತರಕಾರಿ ಮತ್ತು ಹಣ್ಣುಗಳ ಅಂಗಡಿ, ಹಾಲು, ಮಾಂಸ ಮತ್ತು ಮೀನು ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆಗಳಿಗೆ ಪೂರೈಸುವ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ಬ್ಯಾಂಕ್, ವಿಮಾ ಕಂಪನಿಗಳು, ಎಟಿಎಂಗಳು, ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಟೆಲಿ ಕಮ್ಯೂನಿಕೇಷನ್, ಅಂತರ್ಜಾಲ ವ್ಯವಸ್ಥೆ, ಬ್ರಾಡ್ ಕಾಸ್ಟಿಂಗ್ ಆಂಡ್ ಕೇಬಲ್ ಸರ್ವಿಸ್ ಮತ್ತು ಐಟಿಗೆ ಸಂಬಂಧಿಸಿದ ಕಂಪನಿಗಳ ಸಿಬ್ಬಂದಿಯು ಸಾಧ್ಯವಾದಷ್ಟು ಹೋಮ್ ಟು ವರ್ಕ್ ಗೆ ಮಾಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಪೆಟ್ರೋಲ್ ಬಂಕ್ ಗಳು ಎಂದಿನಂತೆ ಓಪನ್
ಇನ್ನು, ಲಾಕ್ ಡೌನ್ ಆಗಿದ್ದರೂ ಕೂಡಾ ಕೆಲವು ಅಗತ್ಯ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಪೆಟ್ರೋಲ್ ಬಂಕ್, ಅಡುಗೆ ಅನಿಲ ವಿತರಣೆ ಮತ್ತು ಸಂಗ್ರಹಣಾ ಕೇಂದ್ರ, ಕೋಲ್ಡ್ ಸ್ಟೋರೇಜ್ ಮತ್ತು ಖಾಸಗಿ ಸುರಕ್ಷತಾ ಪಡೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ವಾಣಿಜ್ಯ ಉತ್ಪಾದನಾ ಘಟಕಗಳು, ಕಾರ್ಖಾನೆಗಳು ಬಂದ್ ಆಗಲಿವೆ. ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗಳು ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ಕಾರ್ಯ ನಿರ್ವಹಿಸಬಹುದು.
ದೇಶದಲ್ಲಿ ರೈಲ್ವೆ ಮತ್ತು ಬಸ್ ಸಂಚಾರದಲ್ಲಿ ಬಂದ್
ಭಾರತದಲ್ಲಿ ಸರಕು ಮತ್ತು ಸಾಗಣಿಯ ಗೂಡ್ಸ್ ರೈಲು ಮತ್ತು ವಾಹನಗಳನ್ನು ಹೊರತುಪಡಿಸಿದಂತೆ ಎಲ್ಲ ಸಾರ್ವಜನಿಕ ರೈಲು ಮತ್ತು ಬಸ್ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಅಗ್ನಿಶಾಮಕ ವಾಹನ ಮತ್ತು ಕಾನೂನು ಸುವ್ಯವಸ್ಥೆಗೆ ಅಗತ್ಯವಾಗಿರುವ ವಾಹನಗಳ ಸಂಚಾರಕ್ಕಷ್ಟೇ ಅನುಮತಿ ನೀಡಲಾಗಿದೆ.
ಪಿಜಿ, ಲಾಡ್ಜ್, ಹೋಟೆಲ್ ಗಳೆಲ್ಲ ಬಂದ್
ಇನ್ನು, ದೇಶದಲ್ಲಿ ಲಾಕ್ ಡೌನ್ ಘೋಷಿಸಿದ ಹಿನ್ನೆಲೆ ಹೋಟೆಲ್, ಲಾಡ್ಜ್, ಪಿಜಿ, ಹೋಮ್ ಸ್ಟೇ, ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸಿ ಮಂದಿರಗಳನ್ನು ಬಂದ್ ಮಾಡುವುದಕ್ಕೆ ಸೂಚನೆ ನೀಡಲಾಗುತ್ತಿದೆ. ಎಲ್ಲ ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಕೇಂದ್ರ, ಸಂಶೋಧನಾ ಕೇಂದ್ರಗಳನ್ನು ಬಂದ್ ಮಾಡುವಂತೆ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಇದರ ಜೊತೆಗೆ ಎಲ್ಲ ದೇವಸ್ಥಾನ ಮಂದಿರ ಮಸೀದಿ ಮತ್ತು ಚರ್ಚ್ ಗಳನ್ನು ತೆರೆಯದಂತೆ ಸೂಚನೆ ನೀಡಲಾಗಿದೆ.
ಎಲ್ಲ ಕಾರ್ಯಕ್ರಮಗಳಿಗೂ ಖಡಕ್ ನಿರ್ಬಂಧ
ದೇಶದಲ್ಲಿ ಎಲ್ಲ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡಾ ಮತ್ತು ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಮದುವೆ ಮತ್ತು ಸಾಂಸ್ಕೃತಿಕ ಹಬ್ಬ ಹರಿದಿನಗಳನ್ನೂ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಇನ್ನು, ಸಾವಿನ ನಂತರದಲ್ಲಿ ನಡೆಸುವ ಅಂತ್ಯಕ್ರಿಯೆಯಲ್ಲೂ 20ಕ್ಕೂ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ ಎಂದು ಸೂಚಿಸಲಾಗಿದೆ.