ಕೊರೊನಾ: 40 ದಿನದ ಹಿಂದೆಯೇ ಸರಕಾರವನ್ನು ಎಚ್ಚರಿಸಿದ್ದ ರಾಹುಲ್ ಗಾಂಧಿ
ನವದೆಹಲಿ, ಮಾರ್ಚ್ 23: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ವಿಚಾರದಲ್ಲಿ ಕೇಂದ್ರ ಸರಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ತಾಜಾ ಬೆಳವಣಿಗೆಯಲ್ಲಿ, ದೇಶೀಯ ವಿಮಾನಯಾನ ಹಾರಾಟವನ್ನು ಸರಕಾರ ತಾತ್ಕಾಲಿಕವಾಗಿ ರದ್ದು ಪಡಿಸಿದೆ.
ಕೊರೊನಾ ವಿಚಾರದಲ್ಲಿ ಕೇಂದ್ರ ಸರಕಾರ ಉದಾಸೀನ ಧೋರಣೆ ತಾಳಿದೆ ಎಂದು ಕಾಂಗ್ರೆಸ್, ಮೋದಿ ಸರಕಾರದ ವಿರುದ್ದ ತಿರುಗಿಬಿದ್ದಿದೆ. "ಈ ಹೊತ್ತಿನಲ್ಲಿ ಚಪ್ಪಾಳೆ ಮುಖ್ಯವಲ್ಲ. ದೊಡ್ಡ ಫೈನಾನ್ಸಿಯಲ್ ಪ್ಯಾಕೇಜ್ ನೀಡುವುದು ಮುಖ್ಯ" ಎಂದು ರಾಹುಲ್ ಗಾಂಧಿ ಹೇಳಿದ್ದರು.
'ಅಬ್ ಕರೋ ದೇಶ್ ಕೀ ರಖ್ವಾಲಿ' ಎನ್ನುವ ಟ್ವಿಟ್ಟರ್ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದ್ದು, ಮೋದಿ ಸರಕಾರದ ಆರ್ಥಿಕ ನೀತಿಯನ್ನು ಒಂದೊಂದಾಗಿ ಕಾಂಗ್ರೆಸ್ ಹೊರಗೆಳೆಯುತ್ತಿದೆ. ಈ ಹಿಂದೆನೇ ರಾಹುಲ್ ಗಾಂಧಿ, ಕೊರೊನಾ ವಿಚಾರದಲ್ಲಿ ಸರಕಾರವನ್ನು ಎಚ್ಚರಿಸಿತ್ತು ಎಂದು ಕಾಂಗ್ರೆಸ್, ಕೇಂದ್ರ ಸರಕಾರದ ಕಿವಿಹಿಂಡುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಗ್ಲೋಬಲ್ ಹೆಲ್ತ್ ಎಮರ್ಜೆನ್ಸಿ ಎಂದು ಘೋಷಣೆ ಮಾಡಿತ್ತು. ಫೆಬ್ರವರಿ ಹನ್ನೆರಡರಂದೇ ರಾಹುಲ್ ಗಾಂಧಿ, ಮೋದಿ ಸರಕಾರವನ್ನು ಎಚ್ಚರಿಸಿತ್ತು. ಆದರೆ, ಕೇಂದ್ರ ಸರಕಾರ ನಿರ್ಲ್ಯಕ್ಷ ಧೋರಣೆ ತಾಳಿತು ಎಂದು ಕಾಂಗ್ರೆಸ್ ದೂರಿದೆ.
ಫೆಬ್ರವರಿ ಹನ್ನೆರಡರಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ, "ಕೊರೊನಾ ಎನ್ನುವುದು ಇಡೀ ಜಗತ್ತಿಗೆ ಬಹುದೊಡ್ಡ ಗಂಢಾಂತರವನ್ನು ತರಲಿದೆ. ಇದು ನಮ್ಮ ಜನರಿಗೆ ಮತ್ತು ನಮ್ಮ ಆರ್ಥಿಕತೆಗೆ ಪೆಟ್ಟನ್ನು ನೀಡಲಿದೆ. ಮೋದಿ ಸರಕಾರ, ಇದನ್ನು ಗಂಭೀರವಾಗಿ ತೆಗೆದುಕೊಂಡ ಹಾಗೇ ಕಾಣುವುದಿಲ್ಲ" ಎಂದು ರಾಹುಲ್ ಟ್ವೀಟ್ ನಲ್ಲಿ ಹೇಳಿದ್ದರು.
"ಕೇಂದ್ರ ಸರಕಾರ ದಿನಗೂಲಿ ನೌಕರರು, ವ್ಯಾಪಾರಸ್ಥರಿಗೆ ತುರ್ತಾಗಿ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಬೇಕಿದೆ. ಎಲ್ಲಾ ವಿಚಾರದಲ್ಲೂ ಮೋದಿ ಸರಕಾರ ಪಿಆರ್ ಕ್ಯಾಂಪೇನ್ ಮಾಡಬಾರದು" ಎಂದು ಈ ಹ್ಯಾಷ್ ಟ್ಯಾಗ್ ಮೂಲಕ ಲೇವಡಿ ಮಾಡಲಾಗುತ್ತಿದೆ.












Click it and Unblock the Notifications