ಮಾಂಸಾಹಾರಿಗಳನ್ನು ಶಿಕ್ಷಿಸಲೆಂದೇ ಜನ್ಮ ತಾಳಿದ 'ಉಗ್ರಾವತಾರ' ಕೊರೊನಾ
ನವದೆಹಲಿ, ಜ 17: ಮಹಾಮಾರಿ ಕೊರೊನಾ (ಕೊವಿಡ್ 19) ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಚೀನಾದಲ್ಲಿ ಈ ಮಾರಣಾಂತಿಕ ರೋಗಕ್ಕೆ ಮೃತಪಟ್ಟವರ ಸಂಖ್ಯೆ 1,765ಕ್ಕೇರಿದೆ.
ಮೂರು ಸಾವಿರ ವರ್ಷಗಳ ಹಿಂದೆ ಅನುಸರಿಸುತ್ತಿದ್ದ ಚೀನಾ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಂಡು ಮಾರಕ ಸೋಂಕು ನಿವಾರಣೆಗೆ ಸರಕಾರ ಮುಂದಾಗಿದೆ. ಇತ್ತ, ಕೋಳಿ ಮಾಂಸ ತಿಂದರೆ ಕೊರೊನಾ ವೈರಸ್ ಬರುತ್ತದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ, ಕರ್ನಾಟಕ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಇದರ ಬೆನ್ನಲ್ಲೇ, ಹಿಂದೂ ಮಹಾಸಭಾದ ಮುಖಂಡರೊಬ್ಬರು ನೀಡಿರುವ ಹೇಳಿಕೆ ವ್ಯಾಪಕ ಟೀಕೆಗೊಳಗಾಗಿದೆ. "ಮಾಂಸಾಹಾರಿಗಳನ್ನು ಶಿಕ್ಷಿಸಲೆಂದೇ ತಾಳಿರುವ ಹೊಸ ಅವತಾರವೇ ಕೊರೊನಾ" ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಚಕ್ರಪಾಣಿ ಹೇಳಿಕೆಯನ್ನು ನೀಡಿದ್ದಾರೆ.

"ಪ್ರಾಣಿಗಳನ್ನು ಹಿಂಸಿತ್ತಿರುವುದಕ್ಕೆ ಚೀನಾದವರಿಗೆ ಈ ರೋಗ ಪಾಠ ಕಲಿಸುತ್ತಿದೆ. ಬಡಜೀವಿಗಳ ರಕ್ಷಣೆಗಾಗಿ ಬಂದಿರುವ ಹೊಸ ಅವತಾರವಿದು. ಯಾರೇ ಆಗಲಿ, ಇನ್ನು ಮುಂದೆಯಾದರೂ, ಮಾಂಸಾಹಾರವನ್ನು ತ್ಯಜಿಸಲಿ" ಎಂದು ಚಕ್ರಪಾಣಿ ಹೇಳಿದ್ದಾರೆ.
ಕೋಳಿ ಮಾಂಸವನ್ನು ತಿಂದರೆ ಕೊರೊನಾ ವೈರಸ್ ಹರುಡುತ್ತದೆ ಎಂದು ಸಾಮಾಜಿಕ ತಾಣದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ, ಆರೋಗ್ಯ ಇಲಾಖೆ, "ಕೋಳಿ ಮಾಂಸದಿಂದ ಕೊರೊನಾ ವೈರಸ್ ಹರಡುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರವಿಲ್ಲ. ವೈರಸ್ ಸೋಂಕಿತ ಮನುಷ್ಯರ ಸಂಪರ್ಕದಿಂದ ವೈರಸ್ ಹರಡುತ್ತದೆ. ವೈರಸ್ ಹರಡುವಿಕೆಯಲ್ಲಿ ಕೋಳಿಗಳ ಪಾತ್ರವಿಲ್ಲ" ಎನ್ನುವ ಸ್ಪಷ್ಟನೆಯನ್ನು ನೀಡಿತ್ತು.
ಚೀನಾದಲ್ಲಿ ಕೊರೊನಾ ಯಾವಮಟ್ಟಿಗೆ ಭೀತಿಯನ್ನು ತಂದಿದೆ ಎಂದರೆ, ಈ ವೈರಸ್ ನಿಂದ ತೀವ್ರವಾಗಿ ಹಾನಿಗೊಳಗಾದ ಕೆಲವು ಪ್ರದೇಶಗಳಲ್ಲಿನ ಆಸ್ಪತ್ರೆಗಳು, ಮಾರುಕಟ್ಟೆಗಳು ಮತ್ತು ಬಸ್ಗಳಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ನೋಟುಗಳನ್ನು ನಾಶಮಾಡಲು ಯೋಜನೆ ಮಾಡಿರುವುದಾಗಿ ಚೀನಾದ ಕೇಂದ್ರ ಬ್ಯಾಂಕ್ ಹೇಳಿದೆ.












Click it and Unblock the Notifications