ಹರಿದ್ವಾರದ ಕುಂಭಮೇಳದಿಂದ ದೂರ ಉಳಿದ 2 ಅಖಾದಾ
ನವದೆಹಲಿ, ಏಪ್ರಿಲ್ 16: ಉತ್ತರಾಖಂಡದ ಹರಿದ್ವಾರದಲ್ಲಿ ಕೊರೊನಾವೈರಸ್ ಸೋಂಕಿನ ಅಪಾಯ ಹೆಚ್ಚುತ್ತಿದೆ. ಈ ಹಿನ್ನೆಲೆ 13 ಅಖಾದಗಳ ಪೈಕಿ ನಿರಂಜನಿ ಅಖಾದಾ ಮತ್ತು ತಪೋವನದ ಶ್ರೀ ಆನಂದ ಅಖಾದಾ ಕುಂಭಮೇಳದಿಂದ ಹೊರಗುಳಿಯಲು ನಿರ್ಧರಿಸಿವೆ.
ಕುಂಭಮೇಳದ ಕೇಂದ್ರವಾಗಿರುವ ಶಾಹಿಸ್ನಾನ್ ಆಚರಣೆಯು ಏಪ್ರಿಲ್ 14ರ ಮೇಷ ಸಂಕ್ರಾಂತಿದ ದಿನ ಪೂರ್ಣಗೊಂಡಿದೆ. ನಿರಂಜನಿ ಅಖಾದಾದ ಹಲವು ಸದಸ್ಯರಲ್ಲಿ ಕೊರೊನಾವೈರಸ್ ಸೋಂಕಿತ ಲಕ್ಷಣಗಳು ಕಾಣಿಸಿಕೊಂಡಿವೆ. ಆದ್ದರಿಂದ ನಮ್ಮ ಪಾಲಿಗೆ ಕುಂಭಮೇಳ ಮುಕ್ತಾಯವಾಗಿದೆ ಎಂದು ನಿರಂಜನಿ ಅಖಾದಾ ಕಾರ್ಯದರ್ಶಿ ರವೀಂದ್ರ ಪುರಿ ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ನಡೆಸಿದ ಕೊರೊನಾವೈರಸ್ ಸೋಂಕಿನ ಪರೀಕ್ಷೆಗಳಲ್ಲಿ ಅತಿಹೆಚ್ಚು ಜನರಿಗೆ ಸೋಂಕು ತಗುಲಿರುವುದು ದೃಢಪಡುತ್ತಿದೆ. ಅಖಿಲ ಭಾರತೀಯ ಅಖಾದಾ ಪರಿಷತ್ ಅಧ್ಯಕ್ಷ ನರೇಂದ್ರ ಗಿರಿ ಅವರಿಗೆ ಕೊವಿಡ್-19 ಸೋಂಕು ತಗುಲಿದ್ದು, ರಿಷಿಕೇಶ್ ನ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೊರೊನಾ ಸೋಂಕಿನಿಂದ ಕಪಿಲ್ ಸ್ವಾಮಿ ಸಾವು:
ಮಧ್ಯಪ್ರದೇಶದ ಮಹಾಮಂಡಲೇಶ್ವರ ಮಹಾನಿರ್ವಾಣಿ ಅಖಾದಾದ ಸ್ವಾಮಿ ಕಪಿಲ್ ದಾಸ್ ಅವರು ಕೊರೊನಾವೈರಸ್ ಸೋಂಕಿನಿಂದ ಏಪ್ರಿಲ್.13ರಂದು ಪ್ರಾಣ ಬಿಟ್ಟಿದ್ದಾರೆ. ಇದರ ಬೆನ್ನಲ್ಲೇ ಏಪ್ರಿಲ್ 17ರಿಂದ ಕುಂಭಮೇಳದಲ್ಲಿ ಭಾಗವಹಿಸದಿರಲು ನಿರಂಜನಿ ಆಖಾದಾ ಮತ್ತು ತಪೋವನ ಅಖಾದ ನಿರ್ಧರಿಸಿವೆ.
ಉತ್ತರಾಖಂಡದಲ್ಲಿ ಹೆಚ್ಚಿದ ಕೊರೊನಾ ಅಪಾಯ:
ರಾಜ್ಯದಲ್ಲಿ ಒಂದೇ ದಿನ 2220 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 9 ಮಂದಿ ಮಹಾಮಾರಿಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 1802ಕ್ಕೆ ಏರಿಕೆಯಾಗಿದೆ. ಈವರೆಗೂ 1,16,244 ಸೋಂಕಿತ ಪ್ರಕರಣಗಳು ವರದಿಯಾಗಿವೆ.
ಹರಿದ್ವಾರದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಏರಿಕೆ ಆಗುತ್ತಿದ್ದರೂ ಏಪ್ರಿಲ್ 27 ಮತ್ತು ಏಪ್ರಿಲ್ 30ರವರೆಗೂ ಶಾಹಿ ಸ್ನಾನ್ ನಡೆಯಲಿದೆ. 12 ವರ್ಷಗಳಿಗೆ ಒಂದು ಬಾರಿ ನಡೆಯುವ ಕುಂಭಮೇಳವು ಸಾಮಾನ್ಯವಾಗಿ 4 ತಿಂಗಳವರೆಗೂ ನಡೆಯುತ್ತದೆ. ಆದರೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಏಪ್ರಿಲ್ 1 ರಿಂದ 30ರವರೆಗೂ ಮಾತ್ರ ಕುಂಭಮೇಳ ನಡೆಸುವುದಕ್ಕೆ ಅನುಮತಿ ನೀಡಲಾಗಿದೆ.












Click it and Unblock the Notifications