ಕೊರೊನಾ ವಿರುದ್ಧದ ಹೋರಾಟ; ರಾಷ್ಟ್ರಪತಿಗಳ ದಿಟ್ಟ ತೀರ್ಮಾನ
ನವದೆಹಲಿ, ಮೇ 14 : ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಾರ್ಷಿಕ ಶೇ 30ರಷ್ಟು ಸಂಬಳ ಪಡೆಯದಿರಲು ತೀರ್ಮಾನಿಸಿದ್ದಾರೆ. ಮೊದಲು ಮಾರ್ಚ್ ತಿಂಗಳ ವೇತನವನ್ನು ಪ್ರಧಾನಿ ಕೋವಿಡ್ ಪರಿಹಾರ ನಿಧಿಗೆ ಅವರು ನೀಡಿದ್ದರು.
ರಾಷ್ಟ್ರಪತಿ ಕಾರ್ಯಾಲಯದ ಮಾಹಿತಿಯಂತೆ ಈ ಕುರಿತು ರಾಮನಾಥ್ ಕೋವಿಂದ್ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ. ವೇತನ ಕಡಿತ ಮಾತ್ರ ಅಲ್ಲದೇ ಪ್ರವಾಸ ಮತ್ತು ಭೋಜನ ಕೂಟ ಏರ್ಪಡಿಸುವುದನ್ನು ಕಡಿತಗೊಳಿಸಲು ಸೂಚಿಸಿದ್ದಾರೆ.
ಕೋವಿಡ್ - 19 ವಿರುದ್ಧದ ಹೋರಾಟಕ್ಕೆ ರಾಷ್ಟ್ರಪತಿಗಳು ಮಾರ್ಚ್ ತಿಂಗಳ ವೇತನವನ್ನು ಪ್ರಧಾನ ಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ನೀಡಿದ್ದರು. ಈಗ ಶೇ 30ರಷ್ಟು ವಾರ್ಷಿಕ ವೇತನವನ್ನು ಪಡೆಯದಿರಲು ತೀರ್ಮಾನಿಸಿದ್ದಾರೆ.

ವಿಶೇಷ ಸಂದರ್ಭಗಳ ಬಳಕೆಗಾಗಿ ಐಷಾರಾಮಿ ವಸ್ತುಗಳ ಖರೀದಿಯನ್ನು ಸಹ ಮಾಡಬಾರದು ಎಂದು ರಾಷ್ಟ್ರಪತಿಗಳು ಸೂಚನೆ ಕೊಟ್ಟಿದ್ದಾರೆ. ಪ್ರಸ್ತುತ ಇರುವ ವಸ್ತುಗಳನ್ನು ಬಳಕೆ ಮಾಡುವಂತೆ ರಾಷ್ಟ್ರಪತಿ ಭವನದ ಸಿಬ್ಬಂದಿಗೆ ಸೂಚನೆ ಕೊಡಲಾಗಿದೆ.
ಭಾರತದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳು ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರಾಗಿರುತ್ತಾರೆ. 2017ರ ತನಕ ರಾಷ್ಟ್ರಪತಿಗಳ ಮಾಸಿಕ ವೇತನ 1.50 ಲಕ್ಷ ಇತ್ತು. ಭತ್ಯೆ ಮತ್ತು ಇತರ ವೆಚ್ಚಗಳಿಗೆ ನೀಡಲಾಗುವ ಹಣವನ್ನು ಹೊರತುಪಡಿಸಿ ಇಷ್ಟು ವೇತನವಿತ್ತು.
2017ರಿಂದ ಅದನ್ನು ಜಾಸ್ತಿ ಮಾಡಲಾಗಿದ್ದು ಪ್ರಸ್ತುತ ಮಾಸಿಕ ವೇತನ 5 ಲಕ್ಷ ರೂ. ಇದೆ. ವೇತನ ಹೊರತುಪಡಿಸಿ ಭತ್ಯೆ, ಜೀವಮಾನವಿಡೀ ಉಚಿತ ವೈದ್ಯಕೀಯ ಚಿಕಿತ್ಸೆ, ಸೇರಿದಂತೆ ಇತರ ಹಲವು ಸೌಲಭ್ಯಗಳಿವೆ. ಸರ್ಕಾರ ರಾಷ್ಟ್ರಪತಿ ಭವನದ ನಿರ್ವಹಣೆಗೆ ವಾರ್ಷಿಕ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತದೆ.












Click it and Unblock the Notifications