Constitution Debate: ಸಂಸತ್ನಲ್ಲಿ ಸಂವಿಧಾನದ ಚರ್ಚೆ, ಪ್ರಧಾನಿ ನರೇಂದ್ರ ಮೋದಿ ಉತ್ತರ
ನವದೆಹಲಿ, ಡಿಸೆಂಬರ್ 14: ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಎರಡು ದಿನಗಳ ಕಾಲ ಭಾರತದ ಸಂವಿಧಾನದ ಕುರಿತು ಚರ್ಚೆಗಳು ನಡೆದಿವೆ. ಈ ಚರ್ಚೆಗಳಿಗೆ ಶನಿವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಉತ್ತರವನ್ನು ನೀಡುತ್ತಿದ್ದಾರೆ. ಇಂದು ಮಧ್ಯಾಹ್ನ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತದ ಸಂವಿಧಾನದ ಕುರಿತು ಕಲಾಪದಲ್ಲಿ ಭಾಷಣ ಮಾಡಿದ್ದರು. ಮೋದಿ ಉತ್ತರದ ಮೂಲಕ ಎರಡು ದಿನಗಳ ಕಾಲ ನಡೆದ ಚರ್ಚೆಗೆ ತೆರೆ ಬೀಳಲಿದೆ.
ಸಂವಿಧಾನ ಆಳವಡಿಕೆ ಮಾಡಿಕೊಂಡು 75ನೇ ವರ್ಷಾಚರಣೆ ಹಿನ್ನಲೆಯಲ್ಲಿ ಡಿಸೆಂಬರ್ 13, 14ರಂದು ಲೋಕಸಭೆಯಲ್ಲಿ ಸಂವಿಧಾನದ ಕುರಿತು ಚರ್ಚೆಗೆ ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ಎಲ್ಲಾ ಸಂಸದರು ಕಲಾಪಕ್ಕೆ ಹಾಜರಾಗಬೇಕು ಎಂದು ಬಿಜೆಪಿ, ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿಗೊಳಿಸಿತ್ತು.

ಎರಡು ದಿನಗಳ ಕಾಲ ಸಂವಿಧಾನದ ಕುರಿತ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ಉತ್ತರವನ್ನು ನೀಡುತ್ತಿದ್ದಾರೆ. ನರೇಂದ್ರ ಮೋದಿ ಲೋಕಸಭೆಗೆ ಆಗಮಿಸುತ್ತಿದ್ದಂತೆಯೇ ಸಂಸತ್ ಸದಸ್ಯರು ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುವ ಮೂಲಕ ಸ್ವಾಗತಿಸಿದರು. "ಗುಲಾಮ ಮನಸ್ಥಿತಿ ಸಂವಿಧಾನಕ್ಕೆ ಮಾರಕ. ಸಂವಿಧಾನದ ಮೂಲಕ ಭಾರತ ಏಕತೆಯನ್ನು ಸಾಧಿಸಿದೆ. ಸಂವಿಧಾನವನ್ನು ಪ್ರತಿಯೊಬ್ಬರು ಸಂಭ್ರಮಿಸುತ್ತಿದ್ದಾರೆ" ಎಂದು ನರೇಂದ್ರ ಮೋದಿ ಭಾಷಣವನ್ನು ಆರಂಭಿಸಿದರು.
ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು
* ನಾವು ವಿಕಸಿತ ಭಾರತವನ್ನು ಮಾಡುತ್ತಿದ್ದೇವೆ. ನಾವು ವಿವಿಧತೆಯನ್ನು ಸಂಭ್ರಮಿಸುತ್ತಿದ್ದೇವೆ. ಸಂವಿಧಾನ ಎಂಬುದು ಕೋಟ್ಯಾಂತರ ಜನರ ಭಾವನೆ, ಬದುಕಾಗಿದೆ. ಭಾರತದ ಏಕತೆ, ವೈವಿದ್ಯತೆಯ ಮೇಲೆ ದಾಳಿ ನಡೆದಿತ್ತು.
* ಗುಲಾಮ ಮನಸ್ಥಿತಿ ಸಂವಿಧಾನಕ್ಕೆ ಮಾರಕವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ಅಭಿವೃದ್ಧಿಗೆ ಅಡ್ಡಿಯಾಗಿತ್ತು. ಅದನ್ನು ನಾವು ರದ್ದುಗೊಳಿಸಿದ್ದೇವೆ.
* ದೇಶದ ಏಕತೆಗಾಗಿಯೇ ಒಂದು ದೇಶ ಒಂದು ರೇಷನ್ ಕಾರ್ಡ್ ಜಾರಿಗೆ ತಂದಿದ್ದೇವೆ. ಭಾರತದ ಏಕತೆಯ ಮೇಲೆ ದಾಳಿಯಾಗಿತ್ತು. ದೇಶದ ವಿವಿಧತೆಯಲ್ಲಿಯೂ ಅನೇಕರು ವಿರೋಧಗಳನ್ನು ಹುಡುಕುತ್ತಿದ್ದಾರೆ. ಏಕತೆಗಾಗಿಯೇ ಆಯುಷ್ಮಾನ್ ಕಾರ್ಡ್ ಸಹಕಾರಿಯಾಗಿದೆ.
* ನರೇಂದ್ರ ಮೋದಿ ಇಂದಿರಾ ಗಾಂಧಿ ಆಡಳಿತದ ತುರ್ತು ಪರಿಸ್ಥಿತಿ ಕುರಿತು ಮಾತನಾಡಿದರು. ತುರ್ತು ಪರಿಸ್ಥಿತಿ ಮೂಲಕ ಅಧಿಕಾರವನ್ನು ಲೂಟಿ ಮಾಡಲು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಮೋದಿ ಟೀಕೆಗಳನ್ನು ಮಾಡಿದರು.
* ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ. ಈ ಮೂಲಕ ಪ್ರಜಾಪ್ರಭುತ್ವದ ಕತ್ತನ್ನು ಹಿಸುಕಲಾಯಿತು. ಸಂವಿಧಾನದ ಮೂಲ ಶಕ್ತಿ ಅಡಗಿರುವುದು ಜನರ ಬೆಂಬಲದಲ್ಲಿ. ಸಂವಿಧಾನದ ಶಕ್ತಿಯ ಕುರಿತು ಚರ್ಚೆ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ.
* ದೇಶದ ಜನರು ಸಂಪೂರ್ಣ ಶಕ್ತಿಯ ಜೊತೆಗೆ ಸಂವಿಧಾನದ ಜೊತೆ ನಿಂತಿದ್ದಾರೆ. ಕೆಲವು ವ್ಯಕ್ತಿಗಳು ಸಂವಿಧಾನದಲ್ಲಿಯೂ ತಪ್ಪನ್ನು ಹುಡುಕುತ್ತಿದ್ದಾರೆ. ಒಂದೇ ಕುಟುಂಬದ ಅಧಿಕಾರವನ್ನು ನಡೆಸಿದರೂ ಏನೇನು ಆಯಿತು? ಎಲ್ಲರಿಗೂ ತಿಳಿದಿದೆ ಎಂದು ಮೋದಿ ಭಾಷಣದಲ್ಲಿ ಟೀಕಿಸಿದರು.
* ಸಂವಿಧಾನದ ಮೂಲಕವೇ ನಾನು ಇಲ್ಲಿಯ ತನಕ ಬಂದಿದ್ದೇನೆ. ದೇಶದ ಜನರಿಗೆ ಈ ಮೂಲಕ ನಾನು ಧನ್ಯವಾದ ಹೇಳುತ್ತೇನೆ. ನನ್ನನ್ನು ಪ್ರಧಾನಿ ಮಾಡಿದ್ದು ಸಂವಿಧಾನ. ಕಾಂಗ್ರೆಸ್ನ ಒಂದು ಕುಟುಂಬ ಸಂವಿಧಾನಕ್ಕೆ ಹಾನಿ ಮಾಡಲು ಹಿಂದೆ ಬಿದ್ದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಗಾಂಧಿ ಕುಟುಂಬದ ಹೆಸರು ಹೇಳುತ್ತಿದ್ದಂತೆಯೇ ವಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗುವ ಮೂಲಕ ಮೋದಿ ಭಾಷಣಕ್ಕೆ ಅಡ್ಡಿ ಪಡಿಸಿದರು. ಆದರೆ ಮೋದಿ ಭಾಷಣವನ್ನು ಮುಂದುವರೆಸಿದ್ದಾರೆ.
* ಸಂವಿಧಾನ ಒಂದು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ಒಂದು ಕುಟುಂಬದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಬಯಸಿತ್ತು. ನೆಹರು ಸಂವಿಧಾನ ಬದಲಾವಣೆ ಮಾಡಲು ಬಯಸಿದ್ದರು. ಈ ಕುರಿತು ದೇಶದ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದರು ಎಂದು ಮೋದಿ ಭಾಷಣದಲ್ಲಿ ಹೇಳಿದರು.
* ಕಾಂಗ್ರೆಸ್ ಕಾಲ ಕಾಲಕ್ಕೆ ಸಂವಿಧಾನದ ಮೇಲೆ ದಾಳಿ ಮಾಡುತ್ತಲೇ ಇದೆ. ಕಾಂಗ್ರೆಸ್ ಕೈಗೆ ಸಂವಿಧಾನ ಶಿಕಾರಿಯ ರಕ್ತ ಅಂಟಿದೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ನೇರ ಟೀಕೆಗಳನ್ನು ಮಾಡಿದರು. ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಹೆಸರು ಉಲ್ಲೇಖಿಸಿದರು.
* ಈಗ ಯುಗ ಬದಲಾಗಿದೆ, ಡಿಜಿಟಲ್ ಕ್ಷೇತ್ರದಲ್ಲಿ ಉಳ್ಳವರು ಮತ್ತು ಇಲ್ಲದಿರುವುದು ನಮಗೆ ಬೇಕಾಗಿಲ್ಲ. ಅದಕ್ಕಾಗಿಯೇ, ನಾವು ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸಲು ಪ್ರಯತ್ನಿಸಿದ್ದೇ ಡಿಜಿಟಲ್ ಇಂಡಿಯಾ ಯಶಸ್ಸಿನ ಕಥೆಗೆ ಕಾರಣ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ ಎಂದು ಮೋದಿ ಭಾಷಣದಲ್ಲಿ ತಿಳಿಸಿದರು.
* ಹಿಂದಿನ ಸರ್ಕಾರಗಳ ಆಡಳಿತವನ್ನು ಮೋಟಿ ಟೀಕಿಸಿದರು. ದೇಶದ ಒಂದು ಭಾಗದಲ್ಲಿ ವಿದ್ಯುತ್ ಇತ್ತು. ಆದರೆ ಅದನ್ನು ಸರಬರಾಜು ಮಾಡಲಿಲ್ಲ, ಆದ್ದರಿಂದ, ಇನ್ನೊಂದು ಭಾಗದಲ್ಲಿ ಕತ್ತಲೆಯಾಗಿತ್ತು. ನಾವು ಹಳ್ಳಿ ಹಳ್ಳಿಗೂ ವಿದ್ಯುತ್ ಸರಬರಾಜು ಮಾಡಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಪಂಚದ ಮುಂದೆ ಭಾರತದ ಮಾನಹಾನಿ ಮಾಡಿದ್ದನ್ನು ನೋಡಿದ್ದೇವೆ ಎಂದರು.
* ಭಾರತದ ಪ್ರಜಾಪ್ರಭುತ್ವ, ಗತಕಾಲದಿಂದಲೂ ಸಮೃದ್ಧವಾಗಿದೆ. ಇದು ಒಂದು ಪ್ರೇರಣೆ, ಇದಕ್ಕಾಗಿಯೇ ಇಂದು ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆಯಲಾಗುತ್ತದೆ. ನಾವು ಕೇವಲ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ರಾಷ್ಟ್ರವಲ್ಲ. ಪ್ರಜಾಪ್ರಭುತ್ವದ ತಾಯಿಯೂ ಹೌದು ಎಂದು ಮೋದಿ ಹೇಳಿದರು.
* ಸಂವಿಧಾನಕ್ಕೆ ನಾವು ಅಪಾರ ಗೌರವ ನೀಡುತ್ತೇವೆ. ಅದಕ್ಕಾಗಿ ನಾವು ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ವೋಟ್ ಬ್ಯಾಂಕ್ಗಾಗಿ ನಾವು ಸಂವಿಧಾನದ ಆಶಯಗಳನ್ನು ಬಲಿಕೊಟ್ಟಿಲ್ಲ. ಪ್ರಧಾನಮಂತ್ರಿ ವಿರುದ್ಧ ತೀರ್ಪು ನೀಡಿದ ಕಾರಣಕ್ಕೆ ಒಬ್ಬರನ್ನು ಹಿರಿತನವಿದ್ದರೂ ಸಹ ಮುಖ್ಯ ನ್ಯಾಯಮೂರ್ತಿಯನ್ನಾಗಿ ಮಾಡಲಿಲ್ಲ ಎಂದು ಮೋದಿ ಟೀಕಿಸಿದರು.












Click it and Unblock the Notifications