ಆರ್ಟಿಕರ್ 370 ಪರಾಮರ್ಶೆ ನಡೆಸಲಿದ್ದೇವೆ ಎಂದ ದಿಗ್ವಿಜಯ್ ಸಿಂಗ್: ಬಿಜೆಪಿ ವಾಗ್ದಾಳಿ
ನವದೆಹಲಿ, ಜೂನ್ 13: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕ್ಲಬ್ಹೌಸ್ ಸಾಮಾಜಿಕ ಜಾಲತಾಣದಲ್ಲಿ ಆಡಿದ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಈ ಮಾತುಕತೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿರುವುದು ಹಾಗೂ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದಕ್ಕೆ ದಿಗ್ವಿಜಯ್ ಸಿಂಗ್ ಬೇಸರವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ಮೋದಿ ಸರ್ಕಾರದ ಅವಧಿಯ ಬಳಿಕ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ವಿಚಾರದಲ್ಲಿ ಮರು ಪರಿಶೀಲನೆ ನಡೆಸುವುದಾಗಿಯೂ ಈ ಆಡಿಯೋ ಸಂವಾದದಲ್ಲಿ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಈ ಆಡಿಯೋ ಸಂವಾದದ ವಿಚಾರವಾಗಿ ಬಿಜೆಪಿ ಈಗ ತೀವ್ರ ಟೀಕೆಯನ್ನು ಮಾಡುತ್ತಿದ್ದು ದಿಗ್ವಿಜಯ್ ಸಿಂಗ್ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದೆ. ಜೊತೆಗೆ ಪಾಕಿಸ್ತಾನದ ಜೊತೆಗೆ ಅವರು ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ಕಟು ಟೀಕೆಯನ್ನು ಮಾಡಿದೆ.
ಇನ್ನು ಕ್ಲಬ್ಹೌಸ್ ಸಾಮಾಜಿಕ ಜಾಲತಾಣದ ಆಡಿಯೋ ಸಂವಾದದಲ್ಲಿ ದಿಗ್ವಿಜಯ್ ಸಿಂಗ್ ಈ ಮಾತುಕತೆಗಳನ್ನು ಆಡಿರುವುದು ಪಾಕಿಸ್ತಾನ ಮೂಲದ ಪತ್ರಕರ್ತೆಯ ಜೊತೆಗೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸ್ಪಷ್ಟನೆಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ದಿಗ್ವಿಜಯ ಸಿಂಗ್ ಅವರು ಭಾರತದ ವಿಷಕಾರುತ್ತಿದ್ದು ಪಾಕಿಸ್ತಾನದ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಇದೇ ವ್ಯಕ್ತಿ ಪುಲ್ವಾಮ ದಾಳಿಯನ್ನು ಅಪಘಾತ ಎಂದು ಕರೆದಿದ್ದು 26/11 ಮುಂಬೈ ದಾಳಿ ಆರ್ಎಸ್ಎಸ್ನ ಪಿತೂರಿ ಎಂದು ಕರೆದಿದ್ದರು ಎಂದು ಸಂಬಿತ್ ಪಾತ್ರ ಟೀಕಿಸಿದ್ದಾರೆ. ಮುಂದುವರಿದು ಮಾತನಾಡಿದ ಸಂಬಿತ್ ಪಾತ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮಣಿಶಂಕರ್ ಅಯ್ಯರ್ ಹೇಳಿಕೆಗಳನ್ನು ಉಲ್ಲೇಖಿಸಿ ಪಾಕಿಸ್ತಾನದೊಂದಿಗೆ ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ಕೈಜೋಡಿಸಿದ್ದು ದಿಗ್ವಿಜಯ್ ಸಿಂಗ್ ಅವರ ಈ ಮಾತು ಅದು ಭಾಗವಾಗಿದೆ ಎಂದಿದ್ದಾರೆ. ಬಿಜೆಪಿ ಹೊರ ತಂದಿರುವ ಟೂಲ್ಕಿಟ್ನ ಭಾಗ ಇದು. ಮೋದಿ ವಿರುದ್ಧ ಹಾಗೂ ಭಾರತದ ವಿರುದ್ಧ ದ್ವೇಶವನ್ನು ಹರಡಲು ಕಾಂಗ್ರೆಸ್ ಚೀನಾ ಹಾಗೂ ಪಾಕಿಸ್ತಾನದೊಂದಿಗೆ ಕೈಜೋಡಿಸುವ ಮಟ್ಟಿಗೆ ಮುಂದುವರಿದಿದೆ ಎಂದಿದ್ದಾರೆ.
ಇನ್ನು ತನ್ನ ಹೇಳಿಕೆಗೆ ಬಿಜೆಪಿ ನಾಯಕರು ಭಾರೀ ಪ್ರಮಾಣದಲ್ಲಿ ಟೀಕೆ ವ್ಯಕ್ತಪಡಿಸಲು ಆರಂಭಿಸಿದ ಬಳಿಕ ದಿಗ್ವಿಜಯ್ ಸಿಂಗ್ ಸರಣಿ ಟ್ವೀಟ್ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. "ಅಶಿಕ್ಷಿತ ಜನರು 'ಷಲ್' ಮತ್ತು 'ಕನ್ಸಿಡರ್' ಪದಗಳ ಅರ್ಥ ವ್ಯತ್ಯಾಸವನ್ನು ತಿಳಿದಿಲ್ಲ" ಎಂದಿದ್ದಾರೆ.












Click it and Unblock the Notifications