ನ್ಯಾಷನಲ್ ಹೆರಾಲ್ಡ್: ಕಾಂಗ್ರೆಸ್ ನಾಯಕರಿಗೀಗ ಚಂದಾದಾರರ ಚಿಂತೆ
ಬೆಂಗಳೂರು, ಜೂನ್ 16: ಬೆಂಗಳೂರಿನಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಸ್ಮರಣ ಸಂಚಿಕೆ ಬಿಡುಗಡೆಯಾಗಿದೆ. ಇದೇ 20ರಂದು ದೆಹಲಿಯಲ್ಲಿ ಪತ್ರಿಕೆ ಉದ್ಘಾಟನೆಯಾಗಲಿದೆ. ಆದರೆ ಪತ್ರಿಕೆಗೆ ಚಾಲನೆ ಸಿಗುವ ಮೊದಲೇ ಚಂದಾದರರನ್ನು ಹುಡುಕುವ 'ಹೊರೆ'ಯನ್ನು ಕಾಂಗ್ರೆಸ್ ನಾಯಕರಿಗೆ ನೀಡಲಾಗಿದೆ.
ಎಲ್ಲಾ ರಾಜ್ಯಗಳ ಕಾಂಗ್ರೆಸ್ ಘಟಕಗಳಿಗೆ ಚಂದಾದಾರರಾಗಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಓದುವಂತೆ ಸಲಹೆ ನೀಡಿರುವ ಹೈಕಮಾಂಡ್ ಜತೆಗೆ ಚಂದಾದಾರರನ್ನು ಹೊಂದಿಸುವಂತೆಯೂ ಹೇಳಿದೆ. ಸದ್ಯ ಪತ್ರಿಕೆ ಆನ್ಲೈನಿನಲ್ಲಿ ಮಾತ್ರ ಲಭ್ಯವಿದ್ದು ಸದ್ಯದಲ್ಲೇ ಮುದ್ರಣ ಪ್ರತಿಯೂ ಹೊರ ಬರಲಿದೆ.

ನೀಲಭ್ ಮಿಶ್ರಾ ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ಪತ್ರಿಕೆಯ ಸದ್ಯದ ವಾರ್ಷಿಕ ಚಂದಾ 1,000 ರೂಪಾಯಿ ಇದೆ. ಎಲ್ಲಾ ರಾಜ್ಯ ಘಟಕಗಳಿಗೂ ಕನಿಷ್ಠ 35,000 ಚಂದಾದಾರರನ್ನು ಹೊಂದಿಸುವಂತೆ ಹೈಕಮಾಂಡಿನಿಂದ ನಿರ್ದೇಶನ ಬಂದಿದೆ.
ಅದರಲ್ಲೂ ಸದ್ಯದಲ್ಲೇ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಹೆಚ್ಚಿನ ಚಂದಾದರನ್ನು ಮಾಡುವಂತೆ ನಾಯಕರಿಗೆ ಸೂಚನೆ ನೀಡಿದೆ. ಜಿಲ್ಲಾಘಟಗಳ ವಿಸ್ತಾರ, ಕಾರ್ಯಕರ್ತರ ಸಂಖ್ಯೆ ನೋಡಿಕೊಂಡು ಟಾರ್ಗೆಟ್ ನೀಡಲು ಕಾಂಗ್ರೆಸ್ ಯೋಚಿಸಿದೆ. ಸದ್ಯಕ್ಕೆ ಅಧಿಕೃತವಾಗಿ ಯಾವುದೇ ಸೂಚನೆಗಳು ಬಂದಿಲ್ಲವಾದರೂ ಸದ್ಯದಲ್ಲೇ ನಿರ್ದೇಶನಗಳನ್ನು ನೀಡುವ ಸಾಧ್ಯತೆ ಇದೆ.
ಸದ್ಯಕ್ಕೆ ಪತ್ರಿಕೆಯನ್ನು ಮನೆಮನೆಗೆ ತಲುಪಿಸಿ ಜನಪ್ರಿಯತೆ ಪಡೆಯುವ ಜತೆಗೆ ಪಕ್ಷಕ್ಕೆ ಆದಾಯದ ಮೂಲವನ್ನು ಹೊಂದಿಸುವ ಗುರಿಯನ್ನೂ ಕಾಂಗ್ರೆಸ್ ಹಾಕಿಕೊಂಡಿದೆ.

ಹಿರಿಯ ನಾಯಕರಿಗೆ ನಿಮ್ಮ ಸ್ವಂತ ಶಕ್ತಿ ಮೇಲೆ 'ಸಹಾಯ' ಮಾಡುವಂತೆ ಕಾಂಗ್ರೆಸ್ ಹೇಳಿದ್ದರೆ, ಕಾರ್ಯಕರ್ತರಿಗೆ ಪತ್ರಿಕೆಯನ್ಜು ಜನಪ್ರಿಯಗೊಳಿಸಸುವ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಚುನಾವಣೆಯ ಸಿದ್ಧತೆಯ ಮಧ್ಯೆ ಚಂದಾದಾರನ್ನು ಹೊಂದಿಸುವ ಹೆಚ್ಚುವರಿ ಹೊಣೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಮೇಲಿದೆ.












Click it and Unblock the Notifications