ಮಲ್ಲಿಕಾರ್ಜುನ ಖರ್ಗೆ ಸಮಾವೇಶಕ್ಕೆ ಕಡಿಮೆ ಜನ, ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಅಮಾನತು!
ಪಾಟ್ನಾ, ಏಪ್ರಿಲ್ 22: ಬಿಹಾರ ಕಾಂಗ್ರೆಸ್ ಬಕ್ಸರ್ ಜಿಲ್ಲಾಧ್ಯಕ್ಷರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶವನ್ನು ಹೊರಡಿಸಿದೆ. ಈ ಅಮಾನತು ಭಾರೀ ಚರ್ಚೆಗೆ ಕಾರಣವಾಗಿದೆ. ಭಾನುವಾರ ಬಕ್ಸರ್ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದ ಬಳಿಕ ಈ ಅಮಾನತು ಆದೇಶ ಹೊರಬಿದ್ದಿದೆ. ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಪಕ್ಷದ ಬಕ್ಸರ್ ಜಿಲ್ಲಾಧ್ಯಕ್ಷ ಮನೋಜ್ ಕುಮಾರ್ ಪಾಂಡೆ ಅಮಾನತುಗೊಂಡವರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಕಡಿಮೆ ಜನರು ಸೇರಿದ್ದರು. ಆದ್ದರಿಂದ ಸರಿಯಾಗಿ ವ್ಯವಸ್ಥೆ ಮಾಡಲಿಲ್ಲ ಎಂದು ಜಿಲ್ಲಾಧ್ಯಕ್ಷರ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಬಿಹಾರ ಕಾಂಗ್ರೆಸ್ ಮಾಧ್ಯಮ ಕೋಶದ ಅಧ್ಯಕ್ಷ ರಾಜೇಶ್ ರಾಥೋಡ್ ಮಾತನಾಡಿ, "ಮನೋಜ್ ಕುಮಾರ್ ಪಾಂಡೆ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ. ಪಕ್ಷದ ಎಲ್ಲಾ ಹುದ್ದೆಗಳಿಂದ ಅವರನ್ನು ಬಿಡುಗಡೆ ಮಾಡಲಾಗಿದೆ" ಎಂದು ಹೇಳಿದ್ದಾರೆ.
"ಪಕ್ಷದ ರಾಷ್ಟ್ರೀಯ ನಾಯಕರ ಸೂಚನೆಯಂತೆ ಮನೋಜ್ ಕುಮಾರ್ ಪಾಂಡೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪಕ್ಷದ ಎಲ್ಲಾ ಹುದ್ದೆಗಳಿಂದ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ" ಎಂದು ತಿಳಿಸಿದ್ದಾರೆ.
ಭಾನುವಾರ ಬಕ್ಸರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್' ಸಮಾವೇಶ ನಡೆದಿತ್ತು. ಆದರೆ ಈ ಸಮಾವೇಶ ಆಯೋಜನೆ ವಿಚಾರದಲ್ಲಿ ಸರಿಯಾಗಿ ಕೆಲಸ ಮಾಡಲಿಲ್ಲ, ಜನರನ್ನು ಸೇರಿಸಲು ವಿಫಲವಾದರು, ನಾಯಕರು & ಕಾರ್ಯಕರ್ತರ ಜೊತೆ ಸರಿಯಾಗಿ ಸಂಪರ್ಕದಲ್ಲಿ ಇರಲಿಲ್ಲ ಎಂಬ ಆರೋಪದ ಮೇಲೆ ಮನೋಜ್ ಕುಮಾರ್ ಪಾಂಡೆ ಅಮಾನತು ಮಾಡಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಮನೋಜ್ ಕುಮಾರ್ ಪಾಂಡೆ ರಾಜ್ಯದ ನಾಯಕರ ಜೊತೆ ಈ ಸಮಾವೇಶದ ಕುರಿತು ಸರಿಯಾಗಿ ಚರ್ಚೆಯನ್ನು ಮಾಡಿರಲಿಲ್ಲ. ಪಕ್ಷದ ನೀಡಿದ ಸೂಚನೆಗಳನ್ನು ಪಾಲನೆ ಮಾಡಿರಲಿಲ್ಲ. ಆದ್ದರಿಂದ ಅವರ ವಿರುದ್ಧ ಕ್ರ ಕೈಗೊಳ್ಳಲಾಗಿದೆ.
ಬಕ್ಸರ್ ಸಮಾವೇಶದಲ್ಲಿನ ಹಲವು ಸಾಲು ಕುರ್ಚಿಗಳು ಖಾಲಿ ಇದ್ದವು. ಇದರಿಂದಾಗಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರು ಮುಜುಗರ ಅನುಭವಿಸಿದ್ದರು. ಬಕ್ಸರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಂಜಯ್ ಕುಮಾರ್ ತಿವಾರಿ ಕುರ್ಚಿಗಳನ್ನು ಖಾಲಿ ಬಿಡಬೇಡಿ, ಮುಂದೆ ಬಂದು ಕುಳಿತುಕೊಳ್ಳಿ ಎಂದು ಜನರಿಗೆ ಪದೇ ಪದೇ ವಿನಂತಿ ಮಾಡುತ್ತಿದ್ದರು.
ಬಿಹಾರ ವಿಧಾನಸಭೆ ಚುನಾವಣೆ ಎದುರಾಗುತ್ತಿದ್ದು ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸಮಾವೇಶ ಆಯೋಜನೆ ಮಾಡಿತ್ತು. ಕಾಂಗ್ರೆಸ್ ಮತ್ತು ಆರ್ಜೆಡಿಯ ಹಲವು ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ ಜನರ ಸಂಖ್ಯೆ ಕಡಿಮೆ ಇದ್ದು ಎಲ್ಲರೂ ಮುಜುಗರ ಅನುಭವಿಸಿದ್ದರು.
ಬಿಹಾರ ವಿಧಾನಸಭೆ ಚುನಾವಣೆಗೆ 'ಇಂಡಿಯಾ' ಮೈತ್ರಿಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್, ಆರ್ಜೆಡಿ ಮೈತ್ರಿ ಮಾಡಿಕೊಳ್ಳಲಿವೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಇನ್ನೂ ಉಭಯ ಪಕ್ಷಗಳಲ್ಲಿ ಒಮ್ಮತ ಮೂಡಿಲ್ಲ. ರಾಜ್ಯದಲ್ಲಿ ಮೈತ್ರಿಕೂಟ ಬಲಪಡಿಸುವ ಕುರಿತು ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಆರ್ಜೆಡಿ ನಾಯಕರು ದೆಹಲಿಯಲ್ಲಿ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ.
ಚುನಾವಣೆ ಬಳಿಕ 'ಇಂಡಿಯಾ' ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಬೇಕು ಎಂದು ಸಚಿನ್ ಪೈಲೆಟ್ ಸೇರಿದಂತೆ ಹಲವು ನಾಯಕರು ಹೇಳಿದ್ದಾರೆ. ಆದರೆ ಆರ್ಜೆಡಿ ನಾಯಕರಲ್ಲಿ ಈ ವಿಚಾರದಲ್ಲಿ ಒಮ್ಮತವಿಲ್ಲ. ಈ ವಿಷಯದಲ್ಲಿ ಸಂಘರ್ಷ ಉಂಟಾಗಬಾರದು ಎಂದು ಕಾಂಗ್ರೆಸ್, ಆರ್ಜೆಡಿ ನಾಯಕರು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ತೇಜಸ್ವಿ ಯಾದವ್ ಜೊತೆ ಸೇರಿ ಬಿಹಾರ ಚುನಾವಣೆ ಮೈತ್ರಿಯ ಕುರಿತು ಚರ್ಚಿಸಿದ್ದಾರೆ. ಎನ್ಡಿಎ ಮೈತ್ರಿಕೂಟವನ್ನು ಅಧಿಕಾರದಿಂದ ದೂರ ಇಡಲು ತಂತ್ರಗಳನ್ನು ರೂಪಿಸಲಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ಬಿಹಾರ ಚುನಾವಣೆ ನಡೆಯಲಿದೆ.












Click it and Unblock the Notifications