ಭಾರತ ಜೋಡೋ ಯಾತ್ರೆಯ ನಕ್ಷೆ ಬಿಡುಗಡೆಗೊಳಿಸಿದ ಕಾಂಗ್ರೆಸ್: ಯಾವ ಜಿಲ್ಲೆಗಳಲ್ಲಿ ಸಂಚಾರ?
ಬೆಂಗಳೂರು ಆಗಸ್ಟ್ 26: ಕಾಂಗ್ರೆಸ್ ಪಕ್ಷವು ಭಾರತ ಜೋಡೋ ಯಾತ್ರೆಯ ನಕ್ಷೆಯನ್ನು ಬಿಡುಗಡೆಗೊಳಿಸಿದ್ದು, 3500 ಕಿಲೋಮೀಟರ್ಗಳು ಪ್ರಯಾಣ ಬೆಳೆಸಲು ನಿರ್ಧರಿಸಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಜೋಡೋ ಯಾತ್ರೆಯಲ್ಲಿ ಕನ್ಯಾಕುಮಾರಿ, ತಿರುವನಂತಪುರ, ಕೊಚ್ಚಿ, ಮೈಸೂರು, ಬಳ್ಳಾರಿ,ರಾಯಚೂರಿನಿಂದ ಪ್ರಾರಂಭಿಸಿ ಶ್ರೀನಗರಕ್ಕೆ ತಲುಪುವ ಮೂಲಕ ಯೋಜನೆ ಹಾಕಿಕೊಂಡಿದೆ.
ಈ ಯಾತ್ರೆಯನ್ನು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು, ಸಾಮಾಜಿಕ ಧ್ರುವೀಕರಣದಿಂದ ಮುಕ್ತಿ ಪಡೆಯಲು ರಾಜಕೀಯ ಉದ್ವಿಗ್ನತೆಯನ್ನು ಹೋಗಲಾಡಿಸಿ, ಆರೋಗ್ಯಕರ ರಾಜಕಾರಣದ ಆರಂಭಕ್ಕಾಗಿ ಕೈಗೊಳ್ಳುತ್ತಿರುವುದಾಗಿ ಕಾಂಗ್ರೆಸ್ ಹೇಳಿದ್ದು, ಎಲ್ಲರೂ ಒಂದಾಗಿ ಭಾರತವನ್ನು ಒಗ್ಗೂಡಿಸೋಣ ಎಂದು ಕರೆ ನೀಡಿದೆ.
ದೇಶದಲ್ಲಿ 20 ರಿಂದ 24 ವರ್ಷದ 42% ಯುವ ಜನತೆ ನಿರುದ್ಯೋಗಿಗಳಾಗಿದ್ದಾರೆ. ಬನ್ನಿ, ನಿರುದ್ಯೋಗದ ಜಾಲವನ್ನು ಮುರಿಯೋಣ, ಭಾರತವನ್ನು ಒಗ್ಗೂಡಿಸೋಣ ಎಂದು ಹೇಳಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಹೆಜ್ಜೆಗಳನ್ನು ಜೋಡಿಸಿ, ದೇಶವನ್ನು ಒಂದಾಗಿಸಿ ಎಂದು ಆಹ್ವಾನ ನೀಡಿದ್ದಾರೆ.

ಸೆಪ್ಟೆಂಬರ್ 7 ರಿಂದ ಆರಂಭವಾಗಲಿರುವ 'ಭಾರತ್ ಜೋಡೋ ಯಾತ್ರೆ'ಯ ಲೋಗೋ, ಘೋಷಣೆ ಹಾಗೂ ಭಿತ್ತಿಪತ್ರವನ್ನು ಕಾಂಗ್ರೆಸ್ ಪಕ್ಷ ಆಗಸ್ಟ್ 23 ಬಿಡುಗಡೆ ಮಾಡಿದೆ. ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜೈರಾಮ್ ರಮೇಶ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡು ಸಭೆ ಬಳಿಕ ಈ ಸಂಬಂಧ ವೆಬ್ ಸೈಟ್ ವೊಂದನ್ನು ಕೂಡಾ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಈ ವೆಬ್ಸೈಟ್ ನಲ್ಲಿ ಯಾತ್ರೆಯ ಲೈವ್ ಸ್ಟ್ರೀಮಿಂಗ್ ದೊರೆಯಲಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರು ಪಕ್ಷದ ಧ್ವಜವನ್ನು ಬಳಸುವುದಿಲ್ಲ, ಬದಲಿಗೆ ತ್ರಿವರ್ಣ ಧ್ವಜ ಬಳಸಲಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತ್ ಜೋಡೋ ಯಾತ್ರೆ ನಡೆಯಲಿದೆ. 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಮೂಲಕ ಈ ಯಾತ್ರೆ ನಡೆಯಲಿದ್ದು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಸಮಾನ ಮನಸ್ಕರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.











Click it and Unblock the Notifications