ಮೋದಿಯ ಅಪ್ರತಿಮ ತಂತ್ರಗಾರಿಕೆ ಅರಿಯದೇ ಬೆಪ್ಪುತಕ್ಕಡಿಯಾದ ಕಾಂಗ್ರೆಸ್
Recommended Video
ನಾಲ್ಕನೇ ಹಂತದ ಚುನಾವಣೆಯವರೆಗೂ ರಾಷ್ಟ್ರೀಯತೆ, ಪುಲ್ವಾಮ, ಉರಿ, ಸರ್ಜಿಕಲ್ ಸ್ಟ್ರೈಕ್ ಹಿಂದೆ ಸುತ್ತುತ್ತಿದ್ದ ಪ್ರಧಾನಿ ಮೋದಿ, ಐದನೇ ಹಂತದ ಚುನಾವಣೆಯ ಹೊತ್ತಿಗೆ ತಮ್ಮ ಭಾಷಣದ ಗೇರ್ ಅನ್ನು ಬೇರೆ ದಿಕ್ಕಿಗೇ ಬದಲಾಯಿಸಿಬಿಟ್ಟರು.
ಕಾಂಗ್ರೆಸ್ಸಿನ ಹಿಂದಿನ ಕಾಲದ ಘಟನೆಯನ್ನು ಕೆದಕುತ್ತಾ ಸಾಗಿದ ಮೋದಿ, ರಾಜೀವ್ ಗಾಂಧಿ ಮಹಾನ್ ಭ್ರಷ್ಟ ಎನ್ನುವ ಹೆಸರಿನೊಂದಿಗೇ ನಿಧನರಾದರು ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಊಹಿಸದ ದಾರಿಯಲ್ಲಿ ಚುನಾವಣಾ ಆಖಾಡವನ್ನು ಬದಲಿಸುತ್ತಾ ಹೋದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಅಲ್ಲಿಂದ, ಬೊಫೋರ್ಸ್, ಐಎನ್ಎಸ್ ವಿರಾಟ್.. ಹೀಗೆ ಸಾಗುತ್ತಾ ಮೋದಿ ಬಂದದ್ದು ಇಂದಿರಾ ಗಾಂಧಿ ಹತ್ಯೆಯ ನಂತರ ನಡೆದ ಸಿಖ್ ನರಮೇಧ. 35ವರ್ಷದ ಹಿಂದಿನ ಘಟನೆಯೊಂದನ್ನು ಮೋದಿ ಕೆದಕಿರುವ ಹಿಂದಿನ ಮರ್ವವನ್ನು ಅರಿಯದ ಕಾಂಗ್ರೆಸ್ಸಿಗರು ಅದಕ್ಕೆ ಭಾವನಾತ್ಮಕವಾಗಿ ಉತ್ತರಿಸಲು ಹೋಗಿ ಸಾಲುಸಾಲು ಎಡವಟ್ಟು ಮಾಡಿಕೊಂಡು ಬಂದರು.
ಇನ್ನುಳಿದಿರುವ ಎರಡು ಹಂತದ ಚುನಾವಣೆ ಅದರಲ್ಲೂ ಪ್ರಮುಖವಾಗಿ ದೆಹಲಿಯಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಸಿಖ್ಖರ ಭಾವನೆಯನ್ನು ಅರಿಯಲು ವಿಫಲರಾದ ಕಾಂಗ್ರೆಸ್ ಮುಖಂಡರೊಬ್ಬರು ನೀಡಿದ ಒಂದು ಬೇಜವಾಬ್ದಾರಿ ಹೇಳಿಕೆ, ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆ ತರಲಾರಂಭಿಸಿತು.

ಸ್ಯಾಮ್ ಪಿತ್ರೋಡ ಅವರ 'ಹುವಾ ಯೊ ಹುವಾ, ಸೋ ವಾಟ್' ಎನ್ನುವ ಹೇಳಿಕೆ
ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್ ವಿರೋಧಿ ಭಾವನೆ ಕೆರಳಿಸುವುದು ಬಿಜೆಪಿಯ ಉದ್ದೇಶ ಎನ್ನುವುದನ್ನು ಅರಿಯದ ಶತಮಾನಗಳ ಇತಿಹಾಸವಿರುವ ಪಕ್ಷದ ಮುಖಂಡರು ಸಿಖ್ ಜನಾಂಗದ ಎದುರು ಮತ್ತಷ್ಟು ಬೆತ್ತಲೆಯಾಗುತ್ತಾ ಸಾಗಿದರು. ಸ್ಯಾಮ್ ಪಿತ್ರೋಡ ಅವರ 'ಹುವಾ ತೋ ಹುವಾ , ಸೋ ವಾಟ್' ಎನ್ನುವ ಹೇಳಿಕೆ, ಕಾಂಗ್ರೆಸ್ ಪಕ್ಷಕ್ಕೆ ಭಾರೀ ಡ್ಯಾಮೇಜ್ ನೀಡಲಾರಂಭಿಸಿತು

ದೆಹಲಿಯ 7, ಹರ್ಯಾಣದ 10, ಪಂಜಾಬಿನ 13 ಕ್ಷೇತ್ರಗಳ ಚುನಾವಣೆ
ಆರನೇ ಮತ್ತು ಕೊನೆಯ ಹಂತದ ಚುನಾವಣೆಯಲ್ಲಿ ದೆಹಲಿಯ ಏಳು, ಹರ್ಯಾಣದ ಹತ್ತು ಮತ್ತು ಪಂಜಾಬಿನ ಹದಿಮೂರು ಕ್ಷೇತ್ರಗಳ ಚುನಾವಣೆ ನಡೆಯಲಿದೆ. ಈ ಮೂರು ರಾಜ್ಯಗಳ ಒಟ್ಟು ಮೂವತ್ತು ಲೋಕಸಭಾ ಕ್ಷೇತ್ರಗಳು, ಬಹುತೇಕ ಈ ಎಲ್ಲಾ ಕ್ಷೇತ್ರಗಳಲ್ಲಿ ಸಿಖ್ಖರ ಪ್ರಾಬಲ್ಯ ಜಾಸ್ತಿ. ಈ ಭಾಗದ ಪ್ರತೀ ರ್ಯಾಲಿಯಲ್ಲಿ ಮೋದಿ ಈಗ ಸಿಖ್ಖರ ವಿಷಯವನ್ನು ಇಟ್ಟುಕೊಂಡೇ ಕಾಂಗ್ರೆಸ್ಸಿಗರನ್ನು ರುಬ್ಬುತ್ತಿದ್ದಾರೆ.

ಒಂದು ಕಡೆ ಅಮಿತ್ ಶಾ, ಇನ್ನೊಂದೆಡೆ ಮೋದಿ
ಅಂದು ಕಾಂಗ್ರೆಸ್ ನಡೆಸಿದ ಕಗ್ಗೊಲೆಯಿಂದ ಇಂದಿಗೂ ಸಾವಿರಾರು ಸಿಖ್ ಕುಟುಂಬಗಳು ನರಳುತ್ತಲೇ ಇವೆ. ಈ ಘೋರ ಕೃತ್ಯಕ್ಕೆ ಕನಿಷ್ಠ ಪಶ್ಚಾತ್ತಾಪ ತೋರದ ಕಾಂಗ್ರೆಸ್ ಪಕ್ಷಕ್ಕೆ ಮತದಾರ ಉತ್ತರ ನೀಡಲಿದ್ದಾನೆಂದು ಅಮಿತ್ ಶಾ ಹೇಳಿದರೆ, ಕಾಂಗ್ರೆಸ್ಸಿನ ವ್ಯಕಿತ್ವ ಮತ್ತು ಉಢಾಪೆ ಮನೋಭಾವವನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳುತ್ತಿದ್ದಾರೆ.

ಮೋದಿಯ ವಾಕ್ ಪ್ರಹಾರಕ್ಕೆ ಪ್ರತ್ಯುತ್ತರ ಕೊಡುವುದರಲ್ಲಿ ಎಡವಟ್ಟು
ಉದ್ಯೋಗ, ಜಿಎಸ್ಟಿ, ರಫೇಲ್, ಹದಿನೈದು ಲಕ್ಷದ ಬಗ್ಗೆ ಮೋದಿ ಸರಕಾರವನ್ನು ಟೀಕಿಸುತ್ತಿದ್ದ ಕಾಂಗ್ರೆಸ್, ಈಗ ರಾಜೀವ್ ಗಾಂಧಿ, ಸಿಖ್ ಹತ್ಯಾಕಾಂಡದ ವಿಚಾರದಲ್ಲಿ ಮೋದಿಯ ವಾಕ್ ಪ್ರಹಾರಕ್ಕೆ ಪ್ರತ್ಯುತ್ತರ ಕೊಡುವುದರಲ್ಲಿ ಎಡವಟ್ಟು ಮಾಡಿಕೊಂಡು ಮೋದಿಗೆ ಇನ್ನಷ್ಟು ಭಾಷಣದ ಸರಕನ್ನು ನೀಡುತ್ತಿದೆ. ಸ್ಯಾಮ್ ಪಿತ್ರೋಡ ಅವರ ಹೇಳಿಕೆಯನ್ನು ಮೊದಮೊದಲು ಸಮರ್ಥಿಸಿಕೊಳ್ಳಲು ಹೋದ ಕಾಂಗ್ರೆಸ್ ನಂತರ, ಇದರಿಂದ ಅಂತರ ಕಾಯ್ಡುಕೊಂಡಿದೆ.

ಸ್ಯಾಮ್ ಪಿತ್ರೋಡ ನನಗೆ ಹಿಂದಿ ಸರಿಬರುವುದಿಲ್ಲ ಎಂದು ಕ್ಷಮೆಯಾಚನೆ
ಸ್ಯಾಮ್ ಪಿತ್ರೋಡ ನನಗೆ ಹಿಂದಿ ಸರಿಬರುವುದಿಲ್ಲ ಎಂದು ತಾವಾಡಿದ (ಸಿಖ್ ಹತ್ಯಾಕಾಂಡದ ಬಗ್ಗೆ) ಮಾತಿಗೆ ಕ್ಷಮೆಯಾಚಿಸಿದ್ದಾರೆ. ಆದರೆ, ಪಕ್ಷಕ್ಕಾದ ಡ್ಯಾಮೇಜ್? ಅತ್ತ, ರಾಜೀವ್ ಗಾಂಧಿ, ಸಿಖ್ ವಿಚಾರವನ್ನು ಉದ್ದೇಶಪೂರ್ವಕವಾಗಿಯೇ ಪ್ರಧಾನಿ ಮೋದಿ ಕೆದಕಿ, ಪಕ್ಷ ಏನು ಬಯಸಿತ್ತೋ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಮೋದಿ ತಂತ್ರಗಾರಿಕೆಯನ್ನು ಅರಿಯದ ಕಾಂಗ್ರೆಸ್ ಈ ವಿಚಾರದಲ್ಲಂತೂ ಸಂಪೂರ್ಣ ಬೆಪ್ಪುತಕ್ಕಡಿಯಾಗಿದೆ.












Click it and Unblock the Notifications