ಜಾತಿವಾರು ಜನಗಣತಿ ನಡೆಸದಿದ್ದರೆ ಮೋದಿ ಭೇಟಿ ವೇಳೆ ಪ್ರತಿಭಟನೆಯ ಎಚ್ಚರಿಕೆ
ಹೈದರಾಬಾದ್, ನವೆಂಬರ್ 11: ಪ್ರಧಾನಿ ನರೇಂದ್ರ ಮೋದಿಯವರ ತೆಲಂಗಾಣ ಭೇಟಿಗೂ ಮುನ್ನ ರಾಜ್ಯದಲ್ಲಿ ಜಾತಿವಾರು ಜನಗಣತಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕ ವಿ ಹನುಮಂತ ರಾವ್ ಅವರು ಗುರುವಾರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದು, ಅದಕ್ಕಾಗಿ ಪಕ್ಷ ಕೂಡ ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.
ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನಸಂಖ್ಯೆಯು ಹೆಚ್ಚಾಗಿದೆ ಎಂದ ಅವರು ವಿವಿಧ ರಾಜ್ಯಗಳಾದ್ಯಂತ ಮುಖ್ಯ ಮಂತ್ರಿಗಳು ಎತ್ತಿರುವ ಜಾತಿವಾರು ಜನಗಣತಿಯ ಬೇಡಿಕೆಗಳನ್ನು ಮತ್ತೆ ಉಲ್ಲೇಖಿಸಿದರು. ಕೆಲವು ತಿಂಗಳುಗಳಿಂದ ಜಾತಿವಾರು ಜನಗಣತಿಗೆ ಒತ್ತಾಯಿಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಉದಾಹರಣೆಯನ್ನು ರಾವ್ ಇಲ್ಲಿ ಸ್ಮರಿಸಿದರು.
ಪ್ರಧಾನಿ ನರೇಂದ್ರ ಮೋದಿ ಮೊದಲ ಒಬಿಸಿ ಪ್ರಧಾನಮಂತ್ರಿ ಆಗಿದ್ದು, ನಮಗೆ ತುಂಬಾ ಸಂತೋಷವಾಗಿದೆ. ಆದರೆ ಅವರು 8 ವರ್ಷಗಳಲ್ಲಿ ಹಿಂದುಳಿದವರಿಗಾಗಿ ಏನು ಮಾಡಿದರು? ನಾನು ಒಮ್ಮೆ ಒಬಿಸಿ ಕನ್ವೀನರ್ ಆಗಿದ್ದವನು. ಅದಕ್ಕಾಗಿ ಈಗ ಜಾತಿವಾರು ಜನಗಣತಿ ನಡೆಯಬೇಕು. ನಮ್ಮ ಜನಸಂಖ್ಯೆಯ ಶೇಕಡಾವಾರು ದುಪ್ಪಟ್ಟು ಹೆಚ್ಚಾಗಿದೆ. 2008ರಲ್ಲಿ ರಾಜನಾಥ್ ಸಿಂಗ್ ಅವರು ಜಾತಿವಾರು ಜನಗಣತಿ ಮಾಡಬೇಕು ಎಂದು ಹೇಳಿದ್ದರು. ನಿತೀಶ್ ಕುಮಾರ್ ಕೂಡ ಅದನ್ನೇ ಹೇಳುತ್ತಿದ್ದು, ಜಾತಿವಾರು ಜನಗಣತಿ ನಡೆಸಬೇಕು ಎಂದು ಪ್ರತಿ ರಾಜ್ಯದಲ್ಲೂ ಒತ್ತಾಯಿಸಲಾಗುತ್ತಿದೆ ಎಂದು ಹೇಳಿದರು.
ತಿನ್ನಲು ಅನ್ನವಿಲ್ಲದ ಜನ ದೇಶದಲ್ಲಿದ್ದಾರೆ. ಇಂತಹ ಸಮಯದಲ್ಲೂ ಮೀಸಲಾತಿ ಹೆಚ್ಚಿಸದಿದ್ದರೆ ಹೇಗೆ? ಕೇಂದ್ರ ಸರ್ಕಾರದಲ್ಲಿ ಒಬಿಸಿ ಸಚಿವಾಲಯವಿಲ್ಲ. ಪ್ರಧಾನಿಯವರು ಒಬಿಸಿಗಾಗಿ ಏನನ್ನೂ ಮಾಡುವುದಿಲ್ಲ. ದೇಶದಲ್ಲಿ ಹೆಚ್ಚಿನ ಜನಸಂಖ್ಯೆಯು ಒಬಿಸಿ ಆಗಿದೆ. ಹಿಂದುಳಿದ ವರ್ಗಗಳ ಬಗ್ಗೆ ಯಾರಿಗೂ ಕಾಳಜಿ ಇಲ್ಲ, ಆದ್ದರಿಂದ ನವೆಂಬರ್ 12 ರಂದು ಪ್ರಧಾನಿ ಮೋದಿಯವರ ಭೇಟಿಯ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಪಕ್ಷವು ಅದರ ವಿರುದ್ಧ ಧ್ವನಿ ಎತ್ತಲಿದೆ ಎಂದು ಅವರು ಹೇಳಿದರು.
1993ರಲ್ಲಿ ಮಂಡಲ್ ಆಯೋಗವನ್ನು ಪ್ರಾರಂಭಿಸಲಾಯಿತು. ಆದರೆ ಹಿಂದುಳಿದ ವರ್ಗಗಳ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ಹಾಗಾಗಿ ನಾವು ನಮ್ಮ ಧ್ವನಿ ಎತ್ತುತ್ತೇವೆ. ಪ್ರಧಾನಿ ತೆಲಂಗಾಣಕ್ಕೆ ಬಂದಾಗಲೆಲ್ಲಾ ಪ್ರತಿಭಟನೆ ಮಾಡುತ್ತೇವೆ. ದೇಶದಲ್ಲಿ ನಮ್ಮ ಮತ ಬ್ಯಾಂಕ್ ಹೆಚ್ಚಿದ್ದು, ಜಾತಿವಾರು ಜನಗಣತಿಗಾಗಿ ನಾವು ಹೋರಾಡುತ್ತೇವೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಭೇಟಿ ನೀಡಲಿದ್ದು, ನವೆಂಬರ್ 12 ರಂದು ಕ್ರಮವಾಗಿ ಆಂಧ್ರ ಪ್ರದೇಶದಲ್ಲಿ ಸುಮಾರು ರೂ. 10,500 ಕೋಟಿ ಮತ್ತು ತೆಲಂಗಾಣದಲ್ಲಿ 9500 ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ. ಮಧ್ಯಾಹ್ನ 3:30 ರ ಸುಮಾರಿಗೆ ಪ್ರಧಾನಿಯವರು ತೆಲಂಗಾಣದ ರಾಮಗುಂಡಂನಲ್ಲಿರುವ ಆರ್ಎಫ್ಸಿಎಲ್ ಸ್ಥಾವರಕ್ಕೆ ಭೇಟಿ ನೀಡಲಿದ್ದಾರೆ. ನಂತರ, ಸಂಜೆ 4:15 ರ ಸುಮಾರಿಗೆ, ರಾಮಗುಂಡಂನಲ್ಲಿ ಪ್ರಧಾನ ಮಂತ್ರಿಗಳು ಅನೇಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.