ದೇಶಕ್ಕೆ ಕಾಂಗ್ರೆಸ್ ಮಾತ್ರ ದಾರಿ ತೋರಬಲ್ಲುದು: ಮಹಾಧಿವೇಶನದಲ್ಲಿ ರಾಹುಲ್
ನವದೆಹಲಿ, ಮಾರ್ಚ್ 17: "ಪ್ರಸ್ತುತ ಸರಕಾರದ ಆಡಳಿತದಲ್ಲಿ ದೇಶವು ಆಯಾಸಗೊಂಡಿದೆ ಮತ್ತು ಇದರಿಂದ ಹೊರಬರಲು ಮಾರ್ಗವನ್ನು ಹುಡುಕುತ್ತಿದೆ. ಕಾಂಗ್ರೆಸ್ ಮಾತ್ರ ದೇಶಕ್ಕೆ ಮುಂದಿನ ದಾರಿ ತೋರಬಲ್ಲುದು ಮತ್ತು ದೇಶದಲ್ಲಿರುವ ವಿಭಜನೆಗಳನ್ನು ಗುಣಪಡಿಸಬಲ್ಲುದು," ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಮೂರು ದಿನಗಳ 84ನೇ ಮಹಾಧಿವೇಶನದಲ್ಲಿ ಅವರು ಮಾತನಾಡಿದರು.
"ನಮ್ಮ ಪಕ್ಷ ಮತ್ತು ಸದ್ಯ ಆಡಳಿತ ನಡೆಸುತ್ತಿರುವ ಪಕ್ಷಕ್ಕೂ ಇರುವ ವ್ಯತ್ಯಾಸವೇನೆಂದರೆ, ಅವರು ದ್ವೇಷದ ಸಿದ್ಧಾಂತವನ್ನು ಅನುಸರಿಸುತ್ತಿದ್ದು, ನಾವು ಪ್ರೀತಿ ಮತ್ತು ಸೋದರತ್ವದ ಸಿದ್ಧಾಂತವನ್ನು ಅನುಸರಿಸುತ್ತೇವೆ. ಅವರು (ಬಿಜೆಪಿ) ಕೋಪವನ್ನು ಬಳಸಿಕೊಳ್ಳುತ್ತಾರೆ. ಆದರೆ ನಾವು ಪ್ರೀತಿಯನ್ನು ಬಳಸಿಕೊಳ್ಳುತ್ತೇವೆ. ಕಾಂಗ್ರೆಸ್ ಪಕ್ಷವು ದೇಶವು ಪ್ರತಿಯೊಬ್ಬರಿಗೂ ಸೇರಿದೆ ಮತ್ತು ಎಲ್ಲರಿಗೂ ಪ್ರಯೋಜನವಾಗುವಂಥಹ ಕೆಲಸಗಳನ್ನು ಕಾಂಗ್ರೆಸ್ ಮಾಡಲಿದೆ," ಎಂದು ರಾಹುಲ್ ಗಾಂಧಿ ಹೇಳಿದರು.

"ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಮರೆಯದೇ ಬದಲಾವಣೆಯನ್ನು ಅಳವಡಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಸಂಪ್ರದಾಯವಾಗಿದೆ. 'ಕೈ' ಚಿಹ್ನೆಯು ಕಾಂಗ್ರೆಸ್ ಪಕ್ಷದ ಸಂಕೇತವಾಗಿದೆ. ಇದು ದೇಶವನ್ನು ಒಗ್ಗೂಡಿಸುವ ಚಿಹ್ನೆ, ನಮಗೆ ದಾರಿ ತೋರಿಸುತ್ತದೆ, ಮತ್ತು ಭಾರತವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ," ಎಂದು ಅವರು ತಿಳಿಸಿದರು.

"ನಮ್ಮ ಪಕ್ಷದ ಪ್ರತಿನಿಧಿಗಳು ನಮ್ಮ ಸಿದ್ಧಾಂತವನ್ನು ಜೀವಂತವಾಗಿಸಲು ಕಠಿಣ ಹೋರಾಟ ನಡೆಸಿದ್ದಾರೆ. ಕಾಂಗ್ರೆಸ್ ನ ಹಿರಿಯ ಮುಖಂಡರು ಪಕ್ಷದ ಯುವಜನರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ನಮ್ಮನ್ನು ಮುನ್ನಡೆಸುತ್ತಾರೆ," ಎಂದು ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿಶ್ವಾಸದಿಂದ ನುಡಿದರು.

ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮತ್ತು ಸಾವಿರಾರು ಕಾಂಗ್ರೆಸ್ ನಾಯಕರು ಈ ಮಹಾಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ.












Click it and Unblock the Notifications