ಈಕೆ ನನಗೆ ನೀಡಿದ ಪ್ರೀತಿಯನ್ನೇ ದೇಶಕ್ಕೆ ಹಂಚುತ್ತಿದ್ದೇನೆ: ಅಮ್ಮನನ್ನು ತಬ್ಬಿಕೊಂಡಿರುವ ಫೋಟೊ ಹಂಚಿಕೊಂಡ ರಾಹುಲ್
ನವದೆಹಲಿ, ಡಿಸೆಂಬರ್ 24: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಶನಿವಾರ ಮುಂಜಾನೆ ರಾಷ್ಟ್ರ ರಾಜಧಾನಿ ದೆಹಲಿಯನ್ನು ಪ್ರವೇಶಿಸಿದೆ.
ಅಪಾರ ಸಂಖ್ಯೆ ಜನರು ಯಾತ್ರೆಯಲ್ಲಿ ಪಾಲ್ಗೊಂಡಿರುವುದು ವಿಡಿಯೊ ಹಾಗೂ ಫೋಟೊಗಳಲ್ಲಿ ಕಂಡುಬರುತ್ತಿದೆ. ಇದೇ ವೇಳೆ, ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡಿದ್ದಾರೆ.
ಬಹಳ ದಿನಗಳ ನಂತರ ರಾಹುಲ್ ಅವರು ತಮ್ಮ ಅಮ್ಮನನ್ನು ಭೇಟಿಯಾಗಿದ್ದಾರೆ. ಈ ವೇಳೆ, ಅಮ್ಮನ ಜೊತೆಗಿನ ಫೋಟೊಗಳನ್ನು ರಾಹುಲ್ ಹಂಚಿಕೊಂಡಿದ್ದಾರೆ.

ಅಮ್ಮನನ್ನು ತಬ್ಬಿಕೊಂಡಿರುವ ಫೋಟೊ ಹಂಚಿಕೊಂಡ ರಾಹುಲ್, 'ಈಕೆ ನನಗೆ ನೀಡಿದ ಪ್ರೀತಿಯನ್ನೇ ದೇಶಕ್ಕೆ ಹಂಚುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಇದು ಟ್ವಿಟರ್ನಲ್ಲಿ ವೈರಲ್ ಆಗಿದೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್
ಭಾರತ್ ಜೋಡೋ ಯಾತ್ರೆಯಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರಿಸಿದ್ದಾರೆ. 'ಅವರು (ಬಿಜೆಪಿ ಹಾಗೂ ಆರ್ಎಸ್ಎಸ್) ದ್ವೇಷವನ್ನು ಹಂಚುತ್ತಿದ್ದಾರೆ. ನಾವು ಪ್ರೀತಿಯನ್ನು ಹಂಚುತ್ತಿದ್ದೇವೆ. ಭಯವನ್ನೇ ದ್ವೇಷವನ್ನಾಗಿ ಅವರು ಪರಿವರ್ತಿಸಿದ್ದಾರೆ. ನಾವು ಕೇವಲ ಪ್ರೇಮವನ್ನು ಹಂಚಲು ಪ್ರಯತ್ನಿಸಿದ್ದೇವೆ' ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರೂ ಸ್ವಾಗತ ಎಂದು ಕಾಂಗ್ರೆಸ್
ಭಾರತ್ ಜೋಡೋ ಯಾತ್ರೆಯು ದೆಹಲಿಗೆ ತಲುಪಿದ ನಂತರ ಮಾತನಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಯಾತ್ರೆಗೆ ಬಿಜೆಪಿ ನಾಯಕರೂ ಬರಬಹುದು ಎಂದು ತಿಳಿಸಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬಂದು ಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ಹೇಳಿದ್ದಾರೆ. ದೇಶವನ್ನು ಒಂದುಗೂಡಿಸಲು ಯಾರಾದರೂ ಕೈಜೋಡಿಸಬಹುದು ಎಂದು ಅವರು ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಜನಬೆಂಬಲ
ಭಾರತ್ ಜೋಡೋ ಯಾತ್ರೆಗೆ ರಾಷ್ಟ್ರ ರಾಜಧಾನಿಯಲ್ಲಿ ಅಪಾರ ಜನಬೆಂಬಲ ಸಿಕ್ಕಿದೆ. ಇಂದು ಹರಿಯಾಣದಿಂದ ಬಂದ ಯಾತ್ರೆಯು ದೆಹಲಿ ಪ್ರವೇಶಿಸಿತು. ಅಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ದೆಹಲಿಯ ಕೆಂಪು ಕೋಟೆಗೆ ತಲುಪಲಿರುವ ಯಾತ್ರೆಯು, ಅಲ್ಲಿಂದ ರಾಜ್ಘಾಟ್ಗೆ ತೆರಳಿದೆ. ಮಹಾತ್ಮ ಗಾಂಧಿ, ಪಂಡಿತ್ ನೆಹರು, ಸರ್ಧಾರ್ ಪಟೇಲ್, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರವಾದ ಯಾತ್ರೆಯೂ ಈಗಾಗಲೇ 108 ದಿನ ಪೂರೈಸಿದೆ. ಕಾಶ್ಮೀರ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ.












Click it and Unblock the Notifications